ಕಲಬುರಗಿ: ಕಾಳಗಿ ತಾಲೂಕಿನ ವಿವಿಧ ಗ್ರಾಮಗಳ ರೈತರಿಗೆ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಹಣ ಮಂಜೂರು ಮಾಡುವಂತೆ ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ, ವಿವಿಧ ಸಂಘಟನೆಗಳ ಮುಖಂಡರುಗಳ ನೇತೃತ್ವದಲ್ಲಿ ಕಾಳಗಿ ತಹಸೀಲ್ ಕಚೇರಿ ಮುಂದೆ ಮಂಗಳವಾರ ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್ ಗಳೊಂದಿಗೆ ರೈತರು ಧರಣಿ ಸತ್ಯಾಗ್ರಹ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರಮುಖರು, ಕಾಳಗಿ ತಾಲೂಕಿನಲ್ಲಿ ರೈತರು ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಇದನ್ನು ಪರಿಗಣಿಸಿ ರಾಜ್ಯ ಹಾಗೂ ಕೇಂದ್ರ ಸರಕಾರ ಪರಿಹಾರವನ್ನು ನೀಡಿರುತ್ತದೆ. ಆದರೆ ನೂರಾರು ರೈತರು ಪರಿಹಾರ ಸಿಗದೆ ವಂಚಿತರಾಗಿದ್ದಾರೆ. ಕೈಬಿಟ್ಟಿರುವ ರೈತರ ಹೆಸರನ್ನು ತಂತ್ರಾಂಶದಲ್ಲಿ ನಮೂದಿಸಿ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳ(ಕೆಎಂಎಫ್) ಮಾದರಿಯಲ್ಲಿ ತೊಗರಿ ಖರೀದಿ ಕೇಂದ್ರ ಸ್ಥಾಪಿಸಬೇಕು, ಪ್ರತಿ ಕ್ವಿಂಟಲ್ ತೊಗರಿಗೆ 12500 ಬೆಂಬಲ ಬೆಲೆ ನೀಡಬೇಕು, ರಾಜ್ಯ ಹಾಗೂ ಕೇಂದ್ರ ಸರಕಾರ ತಲಾ 1000 ರೂ ಪ್ರೋತ್ಸಾಹಧನ ನೀಡಬೇಕು, ಹೊರದೇಶದ ತೊಗರಿಗೆ ಶೇ. 50 ರಷ್ಟು ಆಮದು ಶುಲ್ಕ ಹಾಕಬೇಕು, ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲಮನ್ನಾ ಮಾಡಬೇಕು. ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಗಟ್ಟಬೇಕು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಮನ್ನು ಸಮರ್ಪಕವಾಗಿ ಜಾರಿ ಮಾಡಬೇಕು, ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಪಟ್ಟಣದ ಮುಖ್ಯಬಜಾರ ಬಸವೇಶ್ಚರ ವೃತ್ತದಿಂದ ತಹಶಿಲ್ದಾರ ಕಛೇರಿ ವರೆಗೆ ರೈತರು ಎತ್ತಿನ ಬಂಡಿ ಹಾಗೂ ಟ್ರ್ಯಾಕ್ಟರ್,ಗಳೊಂದಿಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದರು. ನಂತರ ಸುಮಾರು ಆರು ತಾಸು ತಹಶಿಲ್ದಾರ ಕಛೇರಿ ಮುಂದೆ ಧರಣಿ ಸತ್ಯಾಗ್ರಹ ಕುಳಿತರು. ಈ ವೇಳೆ ಮಧ್ಯಾಹ್ನ ಸಮಯದಲ್ಲಿ ರೈತರು ರೊಟ್ಟಿಗಂಟು ಬಿಚ್ಚಿ ಊಟ ಮಾಡಿದರು. ಸಾಯಂಕಾಲ ಮನವಿ ಪತ್ರವನ್ನು ಗ್ರೇಡ್-1 ತಹಸೀಲ್ದಾರ ಪೃಥ್ವಿರಾಜ್ ಪಾಟೀಲ್, ಚಿತ್ತಾಪೂರ ಹಾಗೂ ಚಿಂಚೋಳಿ ಸಹಾಯಕ ಕೃಷಿ ನಿರ್ದೇಶಕರಿಗೆ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ರೈತ ಸೇನೆಯ ಜಿಲ್ಲಾ ಕಾರ್ಯದರ್ಶಿ ಶಿವರಾಜ ಪಾಟೀಲ್ ಗೊಣಗಿ, ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಮಲ್ಲಿನಾಥ ಪಾಟೀಲ್ ಕಾಳಗಿ, ಮುಖಂಡರಾದ ಭೀಮರಾಯ ಮಲಘಾಣ, ಮೋಹನ ಚಿನ್ನ, ಸುಂದರ ಡಿ. ಸಾಗರ, ಬಾಬು ಹೀರಾಪೂರ, ಕರಣ ರಾಜಾಪೂರ, ಪ್ರಭಾಕರ ಹೆಬ್ಬಾಳ, ಅಣ್ಣರಾವ ಸಲಗರ, ಬಸವರಾಜ ರಾಕ, ಮೌನೇಶ್ ಬಡಿಗೇರ್, ರಾಚಣ ರಾಕಾ, ರೇವಣಸಿದ್ದಪ್ಪ ನಾವದಗಿ, ಪ್ರಭಾಕರ ಇಟಗಿ, ಸಿದ್ದು ತೆಂಗಳಿ, ಅನೀಲಕುಮಾರ ಪಾಟೀಲ್, ಬಸವರಾಜ ಪಾಟೀಲ್, ಮಲ್ಲಿಕಾರ್ಜುನ ಪಾಟೀಲ್, ಸಾಗರ ಹುಡಗಿ, ಆನಂದ ಕೊಡದೂರ, ಮಡಿವಾಳಪ್ಪ ಕೊಡದೂರ, ಶಿವಾನಂದ ಅಲಬಾ, ಶಿವಕುಮಾರ ಹೆಬ್ಬಾಳ ಇತರರು ಇದ್ದರು.


