ಕಲಬುರಗಿ: ಲಾಡ್ಲಾಪುರ ಗ್ರಾಮದಲ್ಲಿ ಬೀದಿ ಹಾಗೂ ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು ಮೇಲೆ ಎರಗಿ ಕಚ್ಚಿ ಗಾಯಗೊಳಿಸುತ್ತಿವೆ. ಇದು ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಸೋಮವಾರ ಸಂಜೆ ಶಾಲೆಯಿಂದ ಮರಳಿ ಬರುವಾಗ ಚಿಕ್ಕ ಮಕ್ಕಳ ಮೇಲೆ ಹುಚ್ಚುನಾಯಿಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವುದು ವಾಡಿಯಲ್ಲಿ ವರದಿಯಾಗಿದೆ.
ಬಸ್ ಸ್ಟಾಂಡ್ ಏರಿಯಾದಲ್ಲಿ ಹಿಂಡು ಹಿಂಡಾಗಿ ನಾಯಿಗಳು ತಿರುಗುತ್ತಿದ್ದು ಅದರಲ್ಲಿ ಹುಚ್ಚುನಾಯಿಗಳು ಸೇರಿಕೊಂಡಿದ್ದು, ಮಕ್ಕಳ ಮೇಲೆ ದಾಳಿ ಮಾಡುತ್ತಿವೆ.
ಸೋಮವಾರ 4 ಜನ ಶಾಲಾ ಬಾಲಕಿಯರ ಮೇಲೆ ದಾಳಿ ನಡೆಸಿದ ಹುಚ್ಚುನಾಯಿ ಕೈ ಕಾಲು ಮುಖಕ್ಕೆ ಕಚ್ಚಿ ಗಾಯಗೊಳಿಸಿದೆ. ಸಿಟ್ಟಿಗೆದ್ದ ಗ್ರಾಮಸ್ಥರು ನಾಯಿಯನ್ನು ಹಿಡಿದು ಸಾಯಿಸಲು ಓಡಾಡಿದ್ದು ಕೈಗೆ ಸಿಗದೇ ಪರಾರಿಯಾಗಿದೆ.
ಲಾವಣ್ಯ, ದಿವ್ಯಾ, ಅನಬಿಯ ಎಂಬ ಬಾಲಕಿಯರ ಕೈ, ತೋಳು, ಮುಖ ಮತ್ತು ಬೆನ್ನಿಗೆ ಕಚ್ಚಿ ಗಂಭೀರ ಗಾಯಗೊಳಿಸಿವೆ. ಗಾಯಗೊಂಡ ಬಾಲಕಿಯರನ್ನು ಪೋಷಕರು ಅಲಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡು ಮರಳಿದ್ದಾರೆ.
ಕಳೆದ ತಿಂಗಳು ಸ್ಥಳೀಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ಶಾಲಾ ಬಾಲಕಿಗೆ ನಾಯಿ ಕಚ್ಚಿದ್ದರಿಂದ ತಿಂಗಳುಗಟ್ಟಲೇ ಶಾಲೆ ತೊರೆದು ಚಿಕಿತ್ಸೆಗಾಗಿ ಅಲೆಯಲಾಗಿತ್ತು.
ಈಚೆಗೆ ಬೇರೆ ಕಡೆಯಿಂದ ಬಂದಿರುವ ನಾಯಿಗಳು ಲಾಡ್ಲಾಪುರ ಗ್ರಾಮ ಹೊಕ್ಕಿವೆ. ಅದರಲ್ಲಿ ಕೆಲ ನಾಯಿಗಳಿಗೆ ಹುಚ್ಚುರೋಗ ತಗುಲಿದ್ದು ಗ್ರಾಮಸ್ಥರು ಭಯದಲ್ಲೇ ತಿರುಗುವಂತಾಗಿದೆ. ನಾಯಿಗಳು ಕಚ್ಚಲು ಬೈಕ್ ಮತ್ತಿತರರು ವಾಹನಗಳ ಬೆನ್ನಟ್ಟುತ್ತಿದ್ದು, ಬೈಕ್ ಸವಾರರು ನೆಲಕ್ಕುರುಳಿದ ಘಟನೆಗಳು ಜರುಗಿವೆ.


