ಕಲಬುರಗಿ: ಕ್ರೂಸರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ಐವರು ದುರ್ಮರಣಕ್ಕೀಡಾದ ಘಟನೆ ಶುಕ್ರವಾರ ತಡರಾತ್ರಿ ಚಿತ್ತಾಪುರ ತಾಲೂಕಿನ ವಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ-150 ರಲ್ಲಿ ನಡೆದಿದೆ.
ಮಹ್ಮದ್ ಹುಸೇನ್ (60), ಫಾತಿಮಾ ಅಬ್ದುಲ್ ಸಾಬ್ (40), ರಸೂಲ್ ಬೀ (40), ಮಹೆಬೂಬ್ ಸಂಗಾವಿ (37), ಕ್ರೂಸರ್ ಚಾಲಕ ತೋಲು ಪಾಷಾ (24) ಮೃತಪಟ್ಟ ದುರ್ದೈವಿಗಳು ಎಂದು ತಿಳಿದುಬಂದಿದೆ. ಮೃತರೆಲ್ಲರೂ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ನಿವಾಸಿಗಳಾಗಿದ್ದಾರೆ.
ಮಹ್ಮದ್ ಅಬ್ದುಲ್ ಸಾಬ್ ಎಂಬ ಯುವಕ ರಾತ್ರಿ ವೇಳೆ ಪಿರ್ಶುವಾಯುವಿಗೆ ತುತ್ತಾಗಿದ್ದ ಎನ್ನಲಾಗಿದ್ದು, ರೋಗಿಯನ್ನು ಯಾದಗಿರಿ ನಗರದ ಆಸ್ಪತ್ರೆಗೆ ದಾಖಲಿಸಲು ಎಂಟು ಜನರು ಕ್ರೂಸರ್ ವಾಹನದಲ್ಲಿ ಹೋಗಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸಿ ವಾಪಸ್ ಊರಿಗೆ ಬರುವಾಗ ಚಾಲಕ ಸೇರಿ ವಾಹನದಲ್ಲಿ ಐವರು ಮಾತ್ರ ಇದ್ದರು. ರಾತ್ರಿ 11:40 ಸುಮಾರಿಗೆ ಲಾಡ್ಲಾಪುರ ಸಮೀಪ ಬಂದಾಗ ಎದುರಿಗೆ ಬರುತ್ತಿದ್ದ ತಮಿಳುನಾಡು ಮೂಲದ ಲಾರಿ ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಪರಿಣಾಮ ಕ್ರೂಸರನಲ್ಲಿದ್ದ ಐವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತಕ್ಕೆ ಕ್ರೂಸರ್ ಸಂಪೂರ್ಣ ನಜ್ಜುಗುಜ್ಜಾಗಿದೆ.

ಸ್ಥಳಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್ಪಿ ಶಂಕರಗೌಡ ಪಾಟೀಲ, ಚಿತ್ತಾಪುರ ಸಿಪಿಐ ಸಿ.ಎಸ್.ಪಾಟೀಲ, ವಾಡಿ ಠಾಣೆಯ ಪಿಎಸ್ಐ ಕೆ.ತಿರುಮಲೇಶ, ರೇಣುಕಾ ಉಡಗಿ ಪರಿಶೀಲನೆ ನಡೆಸಿದ್ದಾರೆ. ಶವಗಳನ್ನು ವಾಡಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.


