ಕಲಬುರಗಿ: “ಕಲಬುರಗಿಯನ್ನು ಪಾಕಿಸ್ತಾನ ರೀತಿಯಲ್ಲಿ ಮಾಡಲು ಇಲ್ಲಿನ ನಾಯಕರು ಹಾಗೂ ಸರಕಾರ ಕೈ ಹಾಕುತ್ತಿದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ದಕ್ಷಿಣ ಮತ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ (ಅಪ್ಪುಗೌಡ) ವಿರುದ್ಧ ಇಲ್ಲಿನ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಳಂದ ಗಲಭೆ ಪ್ರಕರಣವನ್ನು ವಾಪಸ್ ಪಡೆದಿರುವುದನ್ನು ಖಂಡಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ವತಿಯಿಂದ ಪ್ರತಿಭಟನಾ ಸಭೆ ಆಯೋಜಿಸಲಾಗಿತ್ತು.
ಸಭೆ ಉದ್ದೇಶಿಸಿ ಮಾತನಾಡಿದ ದತ್ತಾತ್ರೇಯ ಪಾಟೀಲ್, “ಹಿಂದೆ ಮುಸ್ಲಿಮ್ ಲೀಗ್ ನಿಂದ ಶಾಸಕರಾಗಿ ಜಯಿಸಿದ್ದ ಖಮರುಲ್ ಇಸ್ಲಾಂ ‘ಕಲಬುರಗಿಯನ್ನು ಛೋಟಾ ಪಾಕಿಸ್ತಾನ’ ಮಾಡ್ತೀನಿ ಎಂದು ಹೇಳುತ್ತಿದ್ದರು. ಆಗ ಇರುವ ನಾಯಕರು ಛೋಟಾ ಪಾಕಿಸ್ತಾನ ನಿರ್ಮಿಸಲು ಆಗಲಿಲ್ಲ, ಇವತ್ತಿನ ನಾಯಕರು ಹಾಗೂ ಸರಕಾರ ಮತ್ತೊಮ್ಮೆ ಕಲಬುರಗಿಯನ್ನು ಪಾಕಿಸ್ತಾನ ರೀತಿಯಲ್ಲಿ ಮಾಡಲಿಕ್ಕೆ ಕೈ ಹಾಕುತ್ತಿದೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಮಾಜಿ ಶಾಸಕನ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ಅಜಗರ್ ಹುಸೈನ್ ಎಂಬಾತರು ನಗರದ ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದರು. ದೂರಿನ ಮೇರೆಗೆ ಸ್ಟೇಷನ್ ಬಝಾರ್ ಠಾಣೆಯ ಪೊಲೀಸರು ಬುಧವಾರ ಸಂಜೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.


