ಕಲಬುರಗಿ, ಮೇ 3: ನಗರದ ಐತಿಹಾಸಿಕ ಹಾಗೂ ಧಾರ್ಮಿಕ ಕೇಂದ್ರ ಹಾಗೂ ಪ್ರಸಿದ್ಧ ಸೂಫಿ ಸಂತ ಖ್ವಾಜಾ ಬಂದಾನವಾಜ್ ದರ್ಗಾ 622ನೇ ವಾರ್ಷಿಕ ಉರುಸ್ ನಿಮಿತ್ತ ಭಾನುವಾರ ನಗರದಲ್ಲಿ ಅದ್ಧೂರಿಯಾಗಿ ಸಂದಲ್ ಮೆರವಣಿಗೆ ನೆರವೇರಿತು.
ಬೆಳಿಗ್ಗೆಯಿಂದಲೇ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ದರ್ಗಾ ಪ್ರದೇಶಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನದ ನಂತರ ನಗರದ ಮಹೆಬೂಬ್ ಗುಲ್ಶನ್ ಉದ್ಯಾನವನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಂದಲ್ ಮೆರವಣಿಗೆ ಶೋಭಾಯಾತ್ರೆ ರೂಪದಲ್ಲಿ ಸಾಗಿತು. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ದರ್ಗಾದ ಸಜ್ಜಾದಾ ನಶೀನ್ ಡಾ. ಹಫಿಜ್ ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೈನಿ ಅವರಿಂದ ಸಂದಲ್ ಮೆರವಣಿಗೆ ಸಾಗಿತು. ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳು, ದರ್ಗಾ ಸಮಿತಿಯ ಸದಸ್ಯರು, ಉಲಮಾಗಳು ಹಾಗೂ ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಸಂದಲ್ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ವಾದ್ಯಗೋಷ್ಠಿ, ಧಾರ್ಮಿಕ ಘೋಷಣೆಗಳು, ಹೂವಿನ ಅಲಂಕಾರಗಳಿಂದ ಅಲಂಕರಿಸಲಾದ ಸಂದಲ್ ಪಾತ್ರೆಗಳು ವಿಶೇಷ ಆಕರ್ಷಣೆಯಾಗಿದ್ದವು. ಭಕ್ತರು “ಯಾ ಖ್ವಾಜಾ ಬಂದಾನವಾಜ್” ಎಂಬ ಘೋಷಣೆಗಳೊಂದಿಗೆ ಭಕ್ತಿ ಭಾವ ವ್ಯಕ್ತಪಡಿಸಿದರು.
ಮೆರವಣಿಗೆ ನಗರದ ಪ್ರಮುಖ ಮಾರ್ಗಗಳಾದ ಜಗತ್ ವೃತ್ತ, ಸೂಪರ್ ಮಾರ್ಕೆಟ್, ಹಫ್ತ ಗುಂಬಜ್ ಮೂಲಕ ಸಾಗಿಬಂದು ದರ್ಗಾ ಆವರಣದಲ್ಲಿ ಸಮಾಪ್ತಿಯಾಯಿತು. ಈ ಸಂದರ್ಭದಲ್ಲಿ ದರ್ಗಾದಲ್ಲಿ ವಿಶೇಷ ದುಆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿರುವ ಈ ಸಂದಲ್ ಮೆರವಣಿಗೆಯಲ್ಲಿ ವಿವಿಧ ಧರ್ಮದ ಜನರು ಭಾಗವಹಿಸಿದ್ದು ಕಲಬುರಗಿಯ ಸಾಂಸ್ಕೃತಿಕ ಏಕತೆಯನ್ನು ಮತ್ತೊಮ್ಮೆ ಮೆರೆದಿತು.
ಸುರಕ್ಷತೆ ದೃಷ್ಟಿಯಿಂದ ನಗರ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸಂಚಾರ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆಗಳಿಲ್ಲದೆ ಮೆರವಣಿಗೆ ಯಶಸ್ವಿಯಾಗಿ ನೆರವೇರಿತು.
ಪ್ರತಿ ವರ್ಷ ನಡೆಯುವ ಈ ಉರ್ಸ್ ಮತ್ತು ಸಂದಲ್ ಮೆರವಣಿಗೆಗೆ ರಾಜ್ಯದ ವಿವಿಧ ಭಾಗಗಳಿಂದಲೂ ಭಕ್ತರು ಆಗಮಿಸುತ್ತಾರೆ. ಈ ವರ್ಷದ ಕಾರ್ಯಕ್ರಮವೂ ಭಕ್ತಿ, ಭಾವನೆ ಹಾಗೂ ಭವ್ಯತೆಯ ಮಿಶ್ರಣವಾಗಿ ಯಶಸ್ವಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಸಯ್ಯದ್ ಮಹಮ್ಮದ್ ಸಯ್ಯದ್ ಹುಸೈನಿ ಸಾಹೇಬ್ (ಸಜ್ಜಾದಾ ನಶೀನ್ ಅವರ ಹಿರಿಯ ಪುತ್ರ), ಸಯ್ಯದ್ ಶಾ ಸಫಿಯುಲ್ಲಾ ಹುಸೈನಿ, ಸಯ್ಯದ್ ಶಾ ರಹೀಮುಲ್ಲಾ ಹುಸೈನಿ, ಸಯ್ಯದ್ ಶಾ ಹಸನ್ ಶಬ್ಬೀರ್ ಹುಸೈನಿ (ರೋಜಾ-ಎ-ಖುರ್ಡ್ ಸಜ್ಜಾದಾ ನಶೀನ್), ಸಯ್ಯದ್ ಶಾ ತಕಿುಲ್ಲಾ ಹುಸೈನೀ, ಸಯ್ಯದ್ ಅಹ್ಮದ್ ಹುಸೈನಿ, ಸಯ್ಯದ್ ಮುರ್ತಜಾ ಹುಸೈನಿ, ಸಯ್ಯದ್ ಅಕೀಬ್ ಹುಸೈನಿ ಸೇರಿದಂತೆ ಬಂದಾ ನವಾಜ್ ಖಾಂದಾನದ ಸದಸ್ಯರು ಹಾಜರಿದ್ದರು.
ಇದಲ್ಲದೆ ಸಜ್ಜಾದ್ಗಾನ್, ಮಶಾಯಿಖ್-ಎ-ಇಜಾಮ್, ಉಲಮಾ-ಎ-ಕಿರಾಮ್ ಹಾಗೂ ಸಾವಿರಾರು ಭಕ್ತರು ಮತ್ತು ಜಾಯರೀನ್ಗಳ ಭವ್ಯ ಉಪಸ್ಥಿತಿಯಿಂದ ನಗರದೆಲ್ಲೆಡೆ ಐತಿಹಾಸಿಕ ರಸ್ತೆಗಳ ಮೇಲೆ ಆತ್ಮೀಯ ಮತ್ತು ಆಧ್ಯಾತ್ಮಿಕ ವಾತಾವರಣ ಕಂಡುಬಂತು.


