ಕಲಬುರಗಿ: ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಸಂವಿಧಾನಕ್ಕೆ ತಿದ್ದುಪಡಿ ತಂದು 371ಜೆ ಕಾಯ್ದೆ ವಿಶೇಷ ಮೀಸಲಾತಿ ತಂದು ಆರೋಗ್ಯ, ಶಿಕ್ಷಣ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಒಂದೆಡೆ ಪಣ ತೊಟ್ಟಿದರೆ, ಅತ್ತ ಕೇಂದ್ರ ಸರ್ಕಾರ ಮ್ಯಾಚಿಂಗ್ ಗ್ರ್ಯಾಂಟ್ ನೀಡದೆ ವಿಳಂಬ ಧೋರಣೆ ತೋರುತ್ತಿದೆ ಎಂದು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್ ಅವರು ಹೇಳಿದರು.
ಕೆ.ಕೆ.ಆರ್.ಡಿ.ಬಿ. ಮಂಡಳಿ ಸಭಾಂಗಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಪತಿ, ಪ್ರಧಾನಮಂತ್ರಿ, ಹಣಕಾಸು ಸಚಿವರಿಗೆ ಹಲವಾರು ಬಾರಿ ಸಿ.ಎಂ. ಅವರು ಪತ್ರ ಬರೆದಿದ್ದಾರೆ. ಇದಲ್ಲದೆ ಖುದ್ದಾಗಿ ಭೇಟಿಯಾಗಿ ಮನವರಿಕೆ ಮಾಡಿದ್ದರು ಇದೂವರೆಗೆ ಅನುದಾನ ಬಂದಿಲ್ಲ. ಹೀಗಾಗಿ
ಸಿ.ಎಂ. ಅವರೊಂದಿಗೆ ಚರ್ಚಿಸಿ ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲು ಶೀಘ್ರ ದಿನಾಂಕ ನಿಗದಿಪಡಿಸಲಾಗುವುದು ಎಂದರು.
2013-14 ರಿಂದ 2025-26ನೇ ಸಾಲಿನ ವರೆಗೆ ರಾಜ್ಯ ಸರ್ಕಾರದಿಂದ ಕೆ.ಕೆ.ಆರ್.ಡಿ.ಬಿ ಮಂಡಳಿಗೆ 24,878 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದು, ಇದೇ ಮೊತ್ತವನ್ನು ಮಹಾರಾಷ್ಟ್ರದ ವಿದರ್ಭ ಮಾದರಿಯಲ್ಲಿ ಕೇಂದ್ರ ಸರ್ಕಾರ ಕೆ.ಕೆ.ಆರ್.ಡಿ.ಬಿ. ಮಂಡಳಿಗೆ ನೀಡಬೇಕು. ಕೇಂದ್ರದಿಂದ ಅನುದಾನ ಬಂದಲ್ಲಿ ಪ್ರದೇಶದಲ್ಲಿ ಇನ್ನು ಹಚ್ಚಿನ ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡಲು ಸಾಧ್ಯವಾಗಲಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತರುವ ನಿಟ್ಟಿನಲ್ಲಿ ಡಾ.ಛಾಯಾ ದೇಗಾಂವಕರ್ ನೇತೃತ್ವದ ತಜ್ಞರ ಸಮಿತಿ ಈಗಾಗಲೆ ಕಳೆದ ಡಿ.16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬೆಳಗಾವಿಯಲ್ಲಿ ಭೇಟಿ ಮಾಡಿ ವರದಿ ಸಲ್ಲಿಸಿದ್ದು, ಕೆ.ಪಿ.ಎಸ್. ಶಾಲೆ ನಿರ್ಮಾಣ, ದ್ವಿಭಾಷಾ ಪದ್ದತಿ ಬೋಧನೆ, ಶಿಕ್ಷಣದಲ್ಕಿ ಗುಣಮಟ್ಟ, ಶಿಕ್ಷಕರ ಕೊರತೆ ನೀಗಿಸುವ ಸಂಬಂಧ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಪ್ರಸ್ತುತ ರಾಜ್ಯದಲ್ಲಿ 247 ಕೆ.ಪಿ.ಎಸ್. ಶಾಲೆಯಲ್ಲಿ ಕಲ್ಯಾಣದಲ್ಲಿರುವುದು ಕೇವಲ 60 ಶಾಲೆ. ಹೀಗಾಗಿ ಮುಂದಿನ ಒಂದು ವರ್ಷದಲ್ಲಿ ಮಂಡಳಿಯಿಂದ 200, ಶಿಕ್ಷಣ ಇಲಾಖೆಯಿಂದ 100 ಶಾಲೆಗಳು ಈ ಭಾಗದಲ್ಲಿ ತಲೆ ಎತ್ತಲಿವೆ. ಎಸ್.ಎಸ್.ಎಲ್.ಸಿ. ಪರೀಕ್ಷೆ ಸುಧಾರಣೆಗೆ 3.44 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇದರಲ್ಲಿ ಪ್ರತಿ ತಾಲೂಕಿಗೆ 25 ಲಕ್ಷ ವ್ಯಯ ಮಾಡಲಾಗುತ್ತಿದೆ. 5,530 ಸಮಶಿಕ್ಷಕರ ಭರ್ತಿ ಕಾರ್ಯ ನಡೆದಿದೆ. ಪ್ರಸಕ್ತ 2025-26ನೇ ಸಾಲಿನಲ್ಲಿ ಮಾರ್ಚ್ 31 ರೊಳಗೆ 4,000 ಕೋಟಿ ರೂ. ಹಣ ಖರ್ಚು ಮಾಡುವ ಮೂಲಕ ಅನುದಾನ ಖರ್ಚಿನಲ್ಲಿ ಹಿಸ ದಾಖಲೆ ಬರೆಯಲಾಗುವುದು ಎಂದು ಡಾ. ಅಜಯ್ ಸಿಂಗ್ ತಿಳಿಸಿದರು.
ಕೇಂದ್ರ ಸರ್ಕಾರವು 15ನೇ ಹಣಕಾಸು, ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಗೆ ರಾಜ್ಯಕ್ಕೆ ಹಂಚಿಕೆಯಾದ 1.25 ಲಕ್ಷ ಕೋಟಿ ರೂ. ಬಿಡುಗಡೆ ಬಿಡುಗಡೆ ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ 5,300 ಕೋಟಿ ರೂ., ಬೆಂಗಳೂರು ಅಭಿವೃದ್ದಿ ಘೋಷಿಸಿದ 6,000 ಕೋಟಿ ರೂ., 15ನೇ ಹಣಕಾಸಿನಡಿ ಹಂಚಿಕೆ ಮಾಡಿದ ವಿಶೇಷ ಅನುದಾನ 5,495 ಕೋಟಿ ರೂ. ಗಳಲ್ಲಿ ಒಂದು ರೂಪಾಯಿ ಸಹ ಅನುದಾನ ನೀಡಿಲ್ಲ.
ಇದಲ್ಲದೆ 15ನೇ ಹಣಕಾಸು ಆಯೋಗದಲ್ಲಿನ ಆರೋಗ್ಯ ಕ್ಷೇತ್ರಕ್ಕೆ ಹಂಚಿಕೆ ಮಾಡಿದ ಅನುದಾನದಲ್ಲಿ 874 ಕೋಟಿ ರೂ., ಗ್ರಾಮೀಣ ಸ್ಥಳೀಯ ಸಂಸ್ಥಗೆ ಹಂಚಿಕೆ ಮಾಡಿದರಲ್ಲಿ 774 ಕೋಟಿ ರೂ., ನಗರ-ಸ್ಥಳೀಯ ಸಂಸ್ಥೆಗಳಿಗೆ ಶಿಫಾರಸ್ಸು ಮಾಡಿದ 1,028 ಕೋಟಿ ರೂ., ತೆರಿಗೆ ಸೂತ್ರ ಬದಲಾವಣೆಯಿಂದ ನಷ್ಟ 80,000 ಕೋಟಿ ರೂ., ಎನ್.ಡಿ.ಆರ್.ಎಫ್ ನಡಿ 7,254 ಕೋಟಿ ರೂ., ಕೇಂದ್ರ ಪುರಸ್ಕೃತ ಯೋಜನೆಗಳಿಗೆ 10,524, ಸೆಸ್ ಮತ್ತು ಸರ್ಚಾರ್ಜ್ ನಿಂದ 8,300 ಕೋಟಿ ರೂ. ಸೇರಿ ಒಟ್ಟಾರೆ ಕಳೆದ 5 ವರ್ಷದಲ್ಲಿ ರಾಜ್ಯಕ್ಕೆ 1,25,559 ಕೋಟಿ ರೂ. ಹಣ ಕೇಂದ್ರದಿಂದ ಬರಬೇಕಿದೆ ಎಂದಯ ಅಂಕಿ-ಸಂಕ್ಯೆಯೊಂದಿಗೆ ಅಧ್ಯಕ್ಷರು ವಿವರಿಸಿದರು.
ಹಿಂದಿನ ಯು.ಪಿ.ಎ. ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಹೆಸರಿಡಲಾಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರವು ವಿಬಿ-ಜಿ-ರಾಮ್-ಜಿ ಹೆಸರಿಡುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಅವಮಾನ ಮಾಡಿದೆ. ಅಲ್ಲದೆ ಕಾಯ್ದೆ ತಿದ್ದುಪಡಿ ತಂದು 60-40 ಮಾದರಿಯಲ್ಲಿ ಕೇಂದ್ರ-ರಾಜ್ಯ ಸರ್ಕಾರ ಅನುದಾನ ಭರಿಸಬೇಕೆಂದು ತಿಳಿಸಲಾಗಿದೆ. ಹಿಂದೆಲ್ಲ ಕೇಂದ್ರವೇ ಶೇ.100 ಅನುದಾನ ಭರಿಸುತ್ತಿತ್ತು. ಇದು ರಾಜ್ಯಗಳಿಗೆ ಮಾರಕವಾದ ನಿರ್ಣಯವಾಗಿದೆ. ಕೇಂದ್ರದ ಎನ್.ಡಿ.ಎ. ಸರ್ಕಾರವು ದೇಶದ ಬಡ ಜನರ ಕಲ್ಯಾಣ, ಉದ್ಯೋಗ ನೀಡುವ ಬದಲು ಕೇವಲ ಯೋಜನೆಗಳಿಗೆ ಹೆಸರು ಬದಲಾವಣೆ ಮಾಡುವಲ್ಲಿ ತಲ್ಲಿನವಾಗಿದೆ ಎಂದರು.


