ಕಲಬುರಗಿ: ಹಠಾತ್ ಹೃದಯಾಘಾತದ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಈ ಸಂಬಂಧ ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ (CPR) ಮಾಡುವುದು ಸೇರಿದಂತೆ ತುರ್ತು ಆರೋಗ್ಯ ಚಿಕಿತ್ಸೆಗಳ ಕುರಿತು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಲ್ಲಾ ಶಾಲಾ ಕಾಲೇಜುಗಳ ಉಪನ್ಯಾಸಕರಿಗೆ ಹಾಗೂ ಸಿಬ್ಬಂದಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ನಮೋಶಿಯವರ ಜನ್ಮ ದಿನದ ಅಂಗವಾಗಿ ಸಂಸ್ಥೆಯ ಕ್ಯೂ ಎ ಸಿ ವತಿಯಿಂದ ಎಂ ಆರ್ ಎಂ ಸಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತರಬೇತಿ ನೀಡಲಾಯಿತು.
ಸಂಸ್ಥೆಯ ಸುಮಾರು 50 ಸಿಬ್ಬಂದಿಗಳಿಗೆ ಡಾ.ಸಿದ್ಧರಾಮೇಶ ಗಡಿ, ಡಾ.ಸೋಹೈಲ್ ಡಾ ರೇಷ್ಮಾ ದೇವಣಿ, ಡಾ.ಅಪೂರ್ವ ನಮೋಶಿ ಅವರು ತರಬೇತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. BLS ಒಂದು ಪ್ರಾಯೋಗಿಕ ಜೀವ ಉಳಿಸುವ ತಂತ್ರವಾಗಿದೆ. ಹೃದಯಾಘಾತದಂತಹ ತುರ್ತು ಸಂದರ್ಭಗಳಲ್ಲಿ ಜೀವನವನ್ನು ಉಳಿಸಿಕೊಳ್ಳಲು ಅಗತ್ಯವಾದ ಕಾರ್ಡಿಯೋಪಲ್ಮನರಿ ಪುನರುಜ್ಜೀವನ (CPR), ಪ್ರಥಮ ಚಿಕಿತ್ಸೆ ಮತ್ತು ಇತರ ನಿರ್ಣಾಯಕ ಕೌಶಲ್ಯಗಳನ್ನು ತರಬೇತಿಯಲ್ಲಿ ಹೇಳಿಕೊಡಲಾಯಿತು.
ಜೀವ ಉಳಿಸುವ ಪ್ರಾಯೋಗಿಕ ತರಬೇತಿ ಪ್ರದರ್ಶನ:
ತರಬೇತಿ ಕಾರ್ಯಕ್ರಮದಲ್ಲಿ ಸಿಬ್ಬಂದಿಗೆ ಹೃದಯಾಘಾತವಾದ ಸಂದರ್ಭದಲ್ಲಿ CPR ನ ಮೂಲಕ ಜೀವ ಉಳಿಸುವ ಕ್ರಮದ ಬಗ್ಗೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಯಿತು. ಸಿಪಿಆರ್ ಹೃದಯ ಸ್ತಂಭನವಾದ ಕೂಡಲೇ ವ್ಯಕ್ತಿಯನ್ನು ಬದುಕುಳಿಸುವ ಮಹತ್ವದ ಬಗ್ಗೆ ತಿಳಿಸಿಕೊಡಲಾಯಿತು.
ಎಚ್ಚರಿಕೆಯ ಚಿಹ್ನೆಗಳನ್ನು ಗುರುತಿಸುವುದು, ಪರಿಸ್ಥಿತಿಯನ್ನು ತ್ವರಿತವಾಗಿ ನಿರ್ಣಯಿಸುವುದು ಮತ್ತು ವೃತ್ತಿಪರ ವೈದ್ಯಕೀಯ ನೆರವು ಲಭ್ಯವಾಗುವವರೆಗೆ ತಕ್ಷಣದ ಆರೈಕೆಯನ್ನು ಹೇಗೆ ಒದಗಿಸುವುದು ಎಂಬುದರ ಕುರಿತು ಪ್ರಾಯೋಗಿಕ ಪ್ರದರ್ಶನ ಜರುಗಿತು.
ತರಬೇತಿಯಲ್ಲಿ ಡೀನ್ ಡಾ.ಶರಣಗೌಡ ಪಾಟೀಲ್, ವೈಸ್ ಡೀನ್ ಡಾ.ವಿಜಯಕುಮಾರ್ ಕಪ್ಪಿಕೇರಿ, ಕ್ಯೂ ಎ ಸಿ ಮುಖ್ಯಸ್ಥರಾದ ಡಾ.ಉಮಾ ರೇವೂರ, ಡಾ.ಸಾಗರ ಜಂಬಗಿ ಉಪಸ್ಥಿತರಿದ್ದರು.


