ಕಲಬುರಗಿ: ಶಹಾಬಾದ ಪಟ್ಟಣದ ಮೂಲ ಸ್ಥಾನವಾಗಿರುವ ಹಳೇ ಶಹಾಬಾದಿನಲ್ಲಿ ಪ್ರಜಾ ಸೌಧ ಮತ್ತು ಕ್ರೀಡಾಂಗಣ ನಿರ್ಮಿಸುವಂತೆ ಹಳೇ ಶಹಾಬಾದ ನಾಗರಿಕ ಹೋರಾಟ ಸಮಿತಿ ಒತ್ತಾಯಿಸಿದೆ.
ಶನಿವಾರ ಹಳೇ ಶಹಾಬಾದಿನಿಂದ ತಹಶೀಲ್ದಾರ ಕಚೇರಿ ವರಗೆ ಪಾದಯಾತ್ರೆ ಕೈಗೊಂಡ ಹಳೇ ಶಹಾಬಾದ ಮತ್ತು ತರನಳ್ಳಿ ಗ್ರಾಮದ ಗ್ರಾಮಸ್ಥರನ್ನೊಳಗೊಂಡ ಹೋರಾಟ ಸಮಿತಿಯು ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ,, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಸ್ಥಳೀಯ ಶಾಸಕ ಬಸವರಾಜ ಮತ್ತಿಮೂಡ ಹಾಗೂ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರಿಗೆ ಪತ್ರ ಸಲ್ಲಿಸಿ ಒತ್ತಾಯ ಮಾಡಿದೆ.
ಶಹಾಬಾದ ನಗರಸಭೆ ವ್ಯಾಪ್ತಿಯಲ್ಲಿ ಬರುವ ಸರ್ವೇ ನಂ.15 ಮತ್ತು 16 ರಲ್ಲಿ ಈಗಾಗಲೇ ಪ್ರಜಾ ಸೌಧ ಕಟ್ಟಡ ನಿರ್ಮಿಸಲು ಸರಕಾರವು ಭೂಮಿ ಗುರುತಿಸಿದ್ದು, ಇನ್ನೇನು ಭೂಮಿ ಪೂಜೆ ಮಾಡುವ ಹಂತದಲ್ಲಿದೆ. ಆದರೆ ಕೆಲವು ಸಂಘಟನೆಗಳು, ಸಾರ್ವಜನಿಕರ ಆಕ್ಷೇಪಣೆಯಿಂದ ಪ್ರಜಾ ಸೌಧ ನಿರ್ಮಾಣಕ್ಕೆ ಸರ್ವೇ ನಂ.184ರಲ್ಲಿ ಭೂಮಿ ಗುರುತಿಸಲಾಗುತ್ತಿದೆ. ಸರ್ವೇ ನಂಬರ್ 184ರ ಜಮೀನು ವಿವಾದದಿಂದ ಕೂಡಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದೆ. ಇಲ್ಲಿ ಪ್ರಜಾ ಸೌಧ ಕಟ್ಟಡಕ್ಕೆ ಮುಂದಾದರೆ ಅದು ನೆನೆಗುದ್ದಿಗೆ ಬೀಳುವ ಸಾಧ್ಯತೆ ಇದ್ದು, ಇದು ನೂತನ ತಾಲೂಕಿಗೆ ಮಾರಕವಾಗಿ ಪರಿಣಮಿಸಲಿದೆ.
ಶಹಾಬಾದ ಪಟ್ಟಣವು ಏಕಮುಖವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಬಹುತೇಕ ಸರ್ಕಾರಿ ಕಚೇರಿ, ಶಾಲಾ-ಕಾಲೇಜು ಇಲ್ಲಿಯೆ ಇವೆ. ಇನ್ನು ಪಟ್ಟಣದಿಂದ ಹಳೇ ಶಹಾಬಾದ 3 ಕಿ.ಮೀ ದೂರ ಇದ್ದು, ಬಸ್ಸಿನ ಸಂಪರ್ಕ ಇಲ್ಲ. ಒಂದೆಡೆ ಶಹಾಬಾದ ಪಟ್ಟಣದ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದರೆ ಇತ್ತ ಮೂಲ ಶಹಾಬಾದ ಪಟ್ಟಣ (ಹಳೇ ಶಹಾಬಾದ) ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸರ್ಕಾರ ಇದನ್ನು ಮರೆತಂತಿದೆ.
ಪಟ್ಟಣದ ಸರ್ವಾಂಗೀಣ ಅಭಿವೃದ್ದಿ ದೃಷ್ಟಿಯಿಂದ ನೂತನ ತಾಲೂಕಿನ ಆಡಳಿತ ಕಚೇರಿಯಾದ ಪ್ರಜಾ ಸೌಧ ಮತ್ತು ಕ್ರೀಡಾಂಗಣ ಹಳೆ ಶಹಾಬಾದಿನ ರಾಜ್ಯ ಹೆದ್ದಾರಿ ಸಂಖ್ಯೆ 149ಕ್ಕೆ ಹತ್ತಿಕೊಂಡಿರುವ ಸರ್ವೇ ನಂ.15 ಮತ್ತು 16ರಲ್ಲಿ ನಿರ್ಮಿಸಬೇಕು. ಇನ್ನು ಉದ್ದೇಶಿತ ಪಟ್ಟಣದ ವರ್ತುಲ ರಸ್ತೆಯು ಇಲ್ಲಿಯೇ ಬರುವುದರಿಂದ ಸುತ್ತಮುತ್ತಲಿನ ಗೋಳಾ, ಹೊನಗುಂಟಾ, ಮರತೂರ, ತೊನಸಳ್ಳಿ, ತರನಳ್ಳಿ ಗ್ರಾಮಸ್ಥರಿಗೂ ಇದು ತುಂಬಾ ಅನುಕೂಲವಾಗಲಿದೆ ಎಂದು ಹೋರಾಟ ಸಮಿತಿ ಪತ್ರದಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ವಾಜೀದ್ ಖಾನ್ ಜಮಾದಾರ, ಬಸವರಾಜ ತರನಳ್ಳಿ, ಶಿವಕುಮಾರ ನಾಟೀಕರ್, ಬಸವಣಪ್ಪ ವಾಲಿ, ಸ್ಬೇಹಲ್ ಜಾಯಿ, ಸಾಜಿದ್ ಗುತ್ತೇದಾರ, ರಮೇಶ ಪವಾರ, ಶರಣಗೌಡ ಪಾಟೀಲ, ಬಸವರಾಜ ದಂಡಗೂಲಕರ್, ಭಾನು ಪ್ರತಾಪ ಪವಾರ, ಮೀರ್ ಅಲಿ ತರನಳ್ಳಿ, ಲಾಲ್ ಅಹ್ಮದ್, ಆಸಿಫ್ ಬಳಗಾರ, ಸನಾವುಲ್ಲಾ ಸಾಹೇಬ್, ಮಹೆಬೂಬ್ ಇನಾಂದಾರ, ಫಯಾಜ್, ರಾಕೇಶ ಜಾಯಿ, ಸುನೀಲ ಮೆಂಗನ್, ಪ್ರಕಾಶ ವಳಸಂಗ, ರಾಯಪ್ಪ ಜಾಯಿ, ಶರಣಪ್ಪ ನೂರಾ, ಲಕ್ಷ್ಮೀಕಾಂತ ಮಾಲಿಪಾಟೀಲ, ಮಹಾಂತೇಶ ಗೌಡ ಪಾಟೀಲ್, ಯುನೂಸ್ ಮುಕ್ದಾಮ್ ಸೇರಿದಂತೆ ಮುಂತಾದವರು ಇದ್ದರು.


