ಕಲಬುರಗಿ: ರಾಜಕೀಯ ವಿರೋಧಿಗಳು ಒಬ್ಬರನ್ನೊಬ್ಬರು ಕಳ್ಳ ಎಂದು ಕರೆಯುವುದು ಕ್ರಿಮಿನಲ್ ಪ್ರಕರಣ ದಾಖಲಾತಿಗೆ ಆಧಾರವಾಗದು ಎಂದಿರುವ ಹೈಕೋರ್ಟ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ‘ಅಕ್ಕಿ ಕಳ್ಳ’ ಎಂದು ಸಂಬೋಧಿಸಿದ್ದ ಆರೋಪದ ಮೇರೆಗೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಈ ಮೂಲಕ ಮಣಿಕಂಠ ರಾಠೋಡ್ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಉದ್ದೇಶಪೂರ್ವಕ ಅಪಮಾನ ಮತ್ತು ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ಇನ್ನಿತರಕ್ಕೆ ಸಂಬಂಧಿಸಿದ ನ್ಯಾಯಿಕ ಪ್ರಕ್ರಿಯೆ ರದ್ದು ಕೋರಿ ಮಣಿಕಂಠ ರಾಠೋಡ್ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿಯಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಪ್ರಕಟಿಸಿದೆ.
ಮಣಿಕಂಠ ರಾಠೋಡ್ ಅವರು 2025ರ ಮೇ 26ರಂದು ತಮ್ಮ ಫೇಸ್ಬುಕ್ನ ಖಾತೆಯಲ್ಲಿ ಅಪಲೋಡ್ ಮಾಡಿದ್ದ ವಿಡಿಯೋದಲ್ಲಿ ಸಚಿವ ಪ್ರಿಯಾಂಕ್ ಅವರನ್ನು “ಲೇ ಅಕ್ಕಿ ಕಳ್ಳ” ಎಂದು ಕರೆದು ಅವಹೇಳನ ಮಾಡಿದ್ದಾರೆ. ಅಲ್ಲದೆ, ಕೋಲಿ ಕಬ್ಬಲಿಗ ಎಸ್ಟಿ ರಾಜ್ಯಾಧ್ಯಕ್ಷ ಲಚ್ಚಪ್ಪ ಜಾಮಾದಾರ ಅವರನ್ನು “ಟೋಪಿ ಲಚ್ಚ್ಯಾ” ಎಂದು ಕರೆದು ಅಪಮಾನಿಸಿದ್ದಾರೆ. ಇದರ ಜತೆಗೆ ಪ್ರಕರಣವೊಂದರಲ್ಲಿ ಮಣಿಕಂಠ ಅವರಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರನ್ನೂ ನಿಂದನೆ ಮಾಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತ ಹಣಮಂತ ದೂರು ನೀಡಿದ್ದರು. ಈ ಕುರಿತು ಚಿತ್ತಾಪುರದಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


