ಕಲಬುರಗಿ| ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಮಾಡಿ: ಮಲ್ಲಿಕಾರ್ಜುನ ಖರ್ಗೆ  

Date:

Share post:

ಕಲಬುರಗಿ: ಕಲ್ಯಾಣ ಕರ್ನಾಟಕ ಶೈಕ್ಷಣಿಕವಾಗಿ ಹಿಂದುಳಿಯಲು ಮುಖ್ಯ ಕಾರಣ ಈ ಭಾಗದಲ್ಲಿ ಶಿಕ್ಷಕರ ಕೊರತೆ, ನುರಿತ ಶಿಕ್ಷಕರು ಈ ಭಾಗದಲ್ಲಿಲ್ಲ, ಶಾಲೆ ಕಟ್ಟಡ ಇರದಿದ್ದರು ಪರ್ವಾಗಿಲ್ಲ ಮರದ ಕೆಳಗೆ ಓದಿಸಿ ಆದರೆ ಪರಿಪೂರ್ಣ ಶಿಕ್ಷಕರನ್ನು ನೇಮಕಾತಿ ಮಾಡಿ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದರು.

ಇಂದು ಅವರು ಯಡ್ರಾಮಿ ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮತ್ತು ಕಂದಾಯ ಇಲಾಖೆ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಭಾಗಿತ್ವದಲ್ಲಿ 163.55 ಕೋಟಿ ರೂ ವೆಚ್ಚದಲ್ಲಿ 16 ಹೊಸ ಪ್ರಜಾಸೌಧಗಳು ಮತ್ತು 600 ಕೋಟಿ ರೂ ರಿಂದ 900 ಕೋಟಿ ರೂ ವೆಚ್ಚದಲ್ಲಿ 300 ಕೆಪಿಎಸ್ ನೂತನ ಶಾಲೆಗಳ ಮಂಜೂರಾತಿ, ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕುಗಳ ಸರ್ವತೋಮುಖ ಏಳಿಗೆಗೆ 905.87 ಕೋಟಿ ರೂ ಗಳ ಬೃಹತ್ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಭಾಗದಲ್ಲಿ ಅನೇಕ ಕಡೆ ಶಾಲೆಗಳಿವೆ ಆದರೆ ಶಿಕ್ಷಕರ ಕೊರತೆ ಇದೆ, ಈ ಕುರಿತಂತೆ ಸರ್ಕಾರ ಕ್ರಮಕೈಗೊಳ್ಳಬೇಕೆಂದು ಕಿವಿ ಮಾತು ಹೇಳಿದರು, ಈ ಭಾಗದ ಶಿಕ್ಷಣ ವ್ಯವಸ್ಥೆ ಹಿಂದುಳಿಯಲು ಇದು ಮುಖ್ಯ ಕಾರಣವಾಗಿದ್ದು, ಎಲ್ಲದಕ್ಕೂ ಮುಂಚೆ ಈ ಭಾಗದಲ್ಲಿ ಶಿಕ್ಷಕರ ನೇಮಕಾತಿ ನೆಡಸಲಿ ಎಂದರು.

ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನ ವಿವಿಧ ಅಭಿವೃದ್ಧಿ ಯೋಜನೆಗಳಡಿ ಸುಮಾರು ಎರಡು ಸಾವಿರ ಕೋಟಿ ರೂ ವ್ಯಯಿಸಲಾಗುತ್ತಿದೆ. ಇದೆಲ್ಲ ಸಾಧ್ಯವಾಗಿದ್ದು 371-ಜೆ ಯಿಂದ, ಈ ರೀತಿಯ ವ್ಯವಸ್ಥೆ ಇತ್ತೀಚಿಗೆ ದೇಶದಲ್ಲಿ ಎಲ್ಲೂ ಕಾಣಲು ಸಾಧ್ಯವಿಲ್ಲ.

ನಮಗೆ ಸಿಂಗಾಪುರ ಬೇಡ ಲಂಡನ್ ಬೇಡ, ಮೈಸೂರು ಭಾಗದಂತೆ ನಮ್ಮ ಈ ಭಾಗವನ್ನು ಅಭಿವೃದ್ಧಿ ಪಡಿಸಿ, ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಯೋಜನೆ ಜಾರಿಗೆ ಬಂದರು ಮೊದಲು ಈ ಕಡೆ ಕೊಡಿ. ಮೈಸೂರು – ಬೆಂಗಳೂರು ಬಫೆ ಸಿಸ್ಟಮ್ ಇದ್ದಂಗೆ, ಅವರಿಗೆ ಹೊಸ ಯೋಜನೆಗಳು ಮೊದಲು ಸಿಗುವುದು. ನಮ್ಮ ಕಲ್ಯಾಣ ಕರ್ನಾಟಕದ್ದು ಪಂಕ್ತಿ ಭೋಜನದ ರೀತಿಯಾಗಿದೆ, ನಮ್ಮ ಕಡೆ ಜಾರಿಯಾಗುವುದು ತಡವಾಗುತ್ತದೆ. ಹೊಸ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೊನೆಗೆ ನೀಡುವ ಬದಲು, ಮೊದಲು ಇಲ್ಲಿ ಮಾಡಿ ಎಂದರು.

ಕರ್ನಾಟಕದ ಮೈಸೂರು-ಬೆಂಗಳೂರಿನ ಭಾಗದ ಅಭಿವೃದ್ಧಿಯಂತೆ ಶೇ 75 ಈ ಕಡೆ ಮಾಡಿದರೆ ಸಾಕು ನಮಗೆ, ಇಲ್ಲಿ ಒಳ್ಳೆಯ ಇಂಗ್ಲೀಷ್ ಮೀಡಿಯಮ್ ಶಾಲೆಗಳಿಲ್ಲ, ದಯವಿಟ್ಟು ಈ ಕಡೆ ಲಕ್ಷ್ಯ ಕೊಡಿ, ಜನರ ಪರವಾಗಿ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.

ಇಂದು ನನಗೆ ಬಹಳ ದುಖಃವಾಗಿರುವುದು, ಮನರೇಗಾ ಯೋಜನೆ ತೆಗೆದು ಹೆಸರು ಬದಲಾಯಿಸಿ ಬಡವರ ಹಕ್ಕುಗಳನ್ನುಕೇಂದ್ರ ಸರ್ಕಾರ ಕಿತ್ತುಕೊಂಡಿದೆ ಎಂದು ಖಂಡಿಸಿದರು. ಬಡವರಿಗಾಗಿ ಕಾನೂನು ಮಾಡಿ ಕೆಲಸ ಕೊಟ್ಟ ನಮ್ಮ ಸರ್ಕಾರದ ಯೋಜನೆಯನ್ನು ಬದಲಾಯಿಸಿ ಬಡವರ ಹೊಟ್ಟೆ ಮೇಲೆ ಒಡೆಯಲಾಗಿದೆ ಎಂದರು.

ಈ ಮುಂಚೆ ಕೇಂದ್ರ ಸರ್ಕಾರ ಶೇ 90 ಹಾಗೂ ರಾಜ್ಯ ಸರ್ಕಾರ ಶೇ 10 ರಷ್ಟು ಅನುದಾನ ಇತ್ತು, ಈಗ ಅದನ್ನು ಕೇಂದ್ರ ಶೇ 60 ಹಾಗೂ ರಾಜ್ಯ ಸರ್ಕಾರ ಶೇ 40 ಅನುದಾನ ಎಂದು ಮಾರ್ಪಡಿಸಿರುವುದು ರಾಜ್ಯ ಸರ್ಕಾರಗಳಿಗೆ ತೊಂದರೆಯಾಗಲಿದೆ. ಮೂಲಭೂತ ಸೌಕರ್ಯಗಳಾದ ಆಹಾರ, ಶಿಕ್ಷಣ, ಉದ್ಯೋಗ ಕಿತ್ತುಕೊಳ್ಳುವ ಕಾನೂನುಗಳ ವಿರುದ್ಧ ಜನರು ಪ್ರತಿಭಟಿಸಬೇಕು ಎಂದು ಕರೆ ನೀಡಿದರು.

ಪಂಚಾಯತ್ ಮಟ್ಟದಲ್ಲಿ ಕೈಗೊಳ್ಳಬೇಕಾಗಿದ್ದ ಯೋಜನೆಗಳಿಗೆ ಇಂದು ಕೇಂದ್ರ ಸರ್ಕಾರದ ಮಟ್ಟದಲ್ಲಿ ಒಪ್ಪಿಗೆ ಪಡೆಯಬೇಕಾದ ಸ್ಥಿತಿಯನ್ನು ನಿರ್ಮಿಸಲಾಗಿರುವುದು ದುರಂತ, ಅಧಿಕಾರ ವಿಕೇಂದ್ರಿಕರಣದ ಬದಲಾಗಿ ಎಲ್ಲವನ್ನು ಕೇಂದ್ರಿಕರಿಸಲಾಗುತ್ತಿದೆ, ಈ ಕಾನೂನನ್ನು ವಾಪಸ್ ಪಡೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ, ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಿ. ಸಮಾನತೆಗಾಗಿ ಕ್ರಾಂತಿ ಮಾಡಿದ ಕಲ್ಯಾಣ ಕರ್ನಾಟಕ ಇದು, ಇಲ್ಲಿಯ ಸಾಮರಸ್ಯ ಕದಡಲು ಅವಕಾಶವಿಲ್ಲ, ಎಲ್ಲರು ಒಂದಾಗಿ ಈ ಭಾಗವನ್ನು ಮತ್ತು ನಮ್ಮ ಕರ್ನಾಟಕವನ್ನು ಅಭಿವೃದ್ಧಿ ಪಡಿಸೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಂತ್ರಿ ಡಿ ಕೆ ಶಿವಕುಮಾರ್, ಸಚಿವರಾದ ಪ್ರಿಯಾಂಕ ಖರ್ಗೆ, ಕೃಷ್ಣಭೈರೇಗೌಡ, ಶರಣಬಸಪ್ಪ ದರ್ಶನಾಪುರ, ಶರಣ ಪ್ರಕಾಶ್ ಪಾಟೀಲ್, ಮಧು ಬಂಗಾರಪ್ಪ, ರಹೀಂ ಖಾನ್, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಡಾ. ಅಜಯ್ ಧರ್ಮಸಿಂಗ್, ಜಿಲ್ಲೆಯ ಶಾಸಕರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಚಾಂದ ಬೀಬೀ ಕಾಲೇಜಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ಕಲಬುರಗಿ: ಚಾಂದ ಬೀ ಬೀ ಮಹಿಳಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 77ನೆಯ ಗಣರಾಜ್ಯೋತ್ಸವ...

ಕಲಬುರಗಿ| ಹಾಸ್ಟೆಲ್ ಸಿಬ್ಬಂದಿಗಳಿಗೆ ಐದು ತಿಂಗಳಿಂದ ಸಿಗದ ವೇತನ; ಪ್ರತಿಭಟನೆ

ಕಲಬುರಗಿ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಕಳೆದ 16-20...

ಕಲಬುರಗಿ| ಕೆ.ಹೆಚ್.ಬಿ ಗ್ರೀನ್ ಪಾರ್ಕಿನಲ್ಲಿ 77ನೇ ಗಣರಾಜ್ಯೋತ್ಸ ಆಚರಣೆ

ಕಲಬುರಗಿ: ಕೆ. ಹೆಚ್.ಬಿ.ಗ್ರೀನ್ ಪಾರ್ಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಲ್ಲಿನ...

ಕಲಬುರಗಿ| ರಸ್ತೆ ಸುರಕ್ಷತಾ ಜಾಗೃತಿ ಬೈಕ್ ರ್ಯಾಲಿಗೆ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ ಚಾಲನೆ

ಕಲಬುರಗಿ: ಪೊಲೀಸರು ಕೇವಲ ಕಾನೂನು ಜಾಗೃತಿ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಕಟ್ಟುನಿಟ್ಟಿನ ಅನುಷ್ಠಾನ...