ಕಲಬುರಗಿ: ಹಾಲು ಉತ್ಪಾದನೆ ಮತ್ತು ಮಾರಾಟಕ್ಕೆ ರಾಜ್ಯದಲ್ಲಿ ಪೂರಕವಾದ ವಾತಾವರಣವಿದ್ದು, ರಾಜ್ಯ ಸರ್ಕಾರದ ಸಹಕಾರದೊಂದಿಗೆ ದೇಶದಲ್ಲಿಯೇ ಹಾಲು ಉತ್ಪಾದನೆ ಮತ್ತು ಮಾರಾಟದಲ್ಲಿ ನಂದಿನಿ ಬ್ರ್ಯಾಂಡ್ ನಂಬರ್-1 ಮಾಡುವ ನಿಟ್ಟಿನಲ್ಲಿ ಕೆ.ಎಂ.ಎಫ್. ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬುಧವಾರ ಕಲಬುರಗಿ ನಗರದ ಬಸ್ ನಿಲ್ದಾಣ ಬಳಿ ಕೆ.ಎಂ.ಎಫ್. ಅಧೀನದರಾಜ್ಯದಾದ್ಯಂತ 500 ನಂದಿನಿ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಡಿದ ಅವರು, ಗುಜರಾತಿನ ಅಮುಲ್ ಕಂಪನಿ ದೇಶದಲ್ಲಿಯೇ ಹಾಲು ಉತ್ಪಾದನೆಯಲಿ ಮೊದಲನೇ ಸ್ಥಾನದಲ್ಲಿದ್ದು, ನಂತರದ ಸ್ಥಾನ ನಂದಿನಿಗಿದೆ. ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂ. ಪ್ರೋತ್ಸಾಹಧನ ನೀಡಲಾಗುತ್ತಿದ್ದು, ಇದರ ಪ್ರಯೋಜನೆ ಪಡೆದು ಹಾಲು ಉತ್ಪನ್ನ ಹೆಚ್ಚಿಸಿಕೊಂಡು ಮುಂದಿನ ದಿನದಲ್ಲಿ ನಂಬರ್ 1 ಸ್ಥಾನಕ್ಕೆ ಬರಬೇಕು ಎಂದರು.
ಹಿಂದೆ 2013-18ರ ನಮ್ಮ ಸರ್ಕಾರ ಅವಧಿಯಲ್ಲಿ ಹಾಲು ಉತ್ಪಾದನೆ ಹೆಚ್ಚಿದೆ, ಮಾರಾಟ ಇಲ್ಲ ಎಂದು ಕೆ.ಎಂ.ಎಫ್. ಒಕ್ಕೂಟದವರು ನನ್ನ ಬಳಿ ಬಂದಿದ್ದರು. ಆಗ ಪ್ರೌಢ ಶಾಲೆಯ ಪ್ರತಿ ವಿದ್ಯಾರ್ಥಿಗೆ ಮತ್ತು ಅಂಗನವಾಡಿ ಮಕ್ಕಳಿಗೆ 150 ಮಿ.ಲಿ ಒದಗಿಸುವ “ಕ್ಷೀರ ಭಾಗ್ಯ” ಯೋಜನೆ ಜಾರಿಗೆ ತಂದು ಮಕ್ಕಳ ಆರೋಗ್ಯಕ್ಕೆ ಒತ್ತು ಕೊಟ್ಟಿದಲ್ಲದೆ ರೈತರ ಹಿತ ಸಹ ಕಾಪಾಡಿದ್ದೆ. ಪ್ರಸಕ್ತ ಅವಧಿಯಲ್ಲಿಯೂ ಎರಡು ಬಾರಿ ಪ್ರೋತ್ಸಾಹಧನ ದರ ಹೆಚ್ಚಿಸಿ ರೈತರಿಗೆ ನೀಡಿದ್ದೇವೆ ಎಂದರು.
ರಾಜ್ಯದಾದ್ಯಂತ ಪ್ರತಿ ದಿನ 1 ಕೋಟಿ ಲೀಟರ್ ಹಾಲು ಉತ್ಪಾದನೆ ಹೊಂದಿದ್ದು, ಇದನ್ನು ಇನ್ನಷ್ಟು ಹೆಚ್ಚಿಸಬೇಕು. ಹಾಲು ಉತ್ಪನ್ನ ಎಷ್ಟು ಮುಖ್ಯವೋ ಅಷ್ಟೆ ಮಾರುಕಟ್ಟೆಗೂ ಕೆ.ಎಂ.ಎಫ್. ಪ್ರಾಮುಖ್ಯತೆ ನೀಡಬೇಕು. ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡಬೇಕು. ನಂದಿನಿ ಬ್ರ್ಯಾಂಡ್ ಉತ್ಪನಗಳು ಗುಣಮಟ್ಟಕ್ಕೆ ಹೆಸರುವಾಸಿಯಾಗಿವೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೆ.ಎಂ.ಎಫ್. ಅಧಿಕಾರಿಗಳಿಗೆ ಸಿ.ಎಂ. ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಎಸ್.ಸುಧಾಕರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್, ಕೆ.ಎಂ.ಎಫ್. ಎಂ.ಡಿ. ಶಿವಸ್ವಾಮಿ, ಕಲಬುರಗಿ-ಬೀದರ-ಯಾದಗಿರಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ, ಎಂ.ಡಿ. ಡಾ.ಪಿ.ವಿ.ಪಾಟೀಲ ಸೇರಿದಂತೆ ಅನೇಕರು ಇದ್ದರು.


