ಕಲಬುರಗಿ: ಆನೆಕಾಲು ರೋಗ ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಇದೇ ಫೆಬ್ರವರಿ 12 ರಿಂದ 28ರ ವರೆಗೆ ಜಿಲ್ಲೆಯ ಐದು ತಾಲೂಕಿನಲ್ಲಿ ಸಾಮೂಹಿಕ ಔಷಧಿ ಸೇವನೆಯ (ಎಂ.ಡಿ.ಎ) ಕಾರ್ಯಕ್ರಮ ನಡೆಯಲಿದ್ದು, ಯಾವೊಬ್ಬ ಅರ್ಹ ಶಾಲಾ-ಕಾಲೇಜು ಮಕ್ಕಳು, ವಯಸ್ಕರು ಗುಳಿಗೆ ನುಂಗುವ ಕಾರ್ಯದಿಂದ ಬಿಟ್ಟು ಹೋಗದಂತೆ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದು ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಸೂಚನೆ ನೀಡಿದರು.
ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾಮೂಹಿಕ ಔಷಧ ನುಂಗಿಸುವ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಕಲಬುರಗಿ ಗ್ರಾಮೀಣ, ಅಫಜಲಪೂರ, ಆಳಂದ, ಚಿಂಚೋಳಿ, ಸೇಡಂ ತಾಲೂಕಿನ 13 ಪಿ.ಎಚ್.ಸಿ. ಮತ್ತು 63 ಉಪ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ 222 ಗ್ರಾಮಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, 16,373 ಅಂಗನವಾಡಿ ಮಕ್ಕಳು, 63,350 ಶಾಲಾ ಮಕ್ಕಳು, 2,307 ಕಾಲೇಜು ವಿದ್ಯಾರ್ಥಿಗಳು ಒಳಗೊಂಡಂತೆ ಒಟ್ಟು 3,14,689 ಜನರಿಗೆ ಡಿ.ಇ.ಸಿ., ಅಲ್ಬೆಂಡೋಜಾಲ್ ಹಾಗೂ ಐವರಮೆಕ್ಟಿನ್ ತ್ರಿವಳಿ ಮಾತ್ರೆ ವಿತರಿಸುವ ಗುರಿ ಹೊಂದಲಾಗಿದೆ ಎಂದರು.
ಇನ್ನು ಕಾರ್ಯಕ್ರಮ ಯಶಸ್ಸಿಗೆ ಎಲ್ಲಾ ಭಾಗಿದಾರರ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ವಿಶೇಷವಾಗಿ ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೆಡಿಕಲ್ ಕಾಲೇಜ್, ನರ್ಸಿಂಗ್ ಕಾಲೇಜುಗಳು, ಹಾಸ್ಟೆಲ್ಗಳು ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ಯಾವುದೇ ಆತಂಕವಿಲ್ಲದೆ ಮಾತ್ರೆ ತೆಗೆದುಕೊಳ್ಳುವ ಬಗ್ಗೆ ಅರಿವು ಮೂಡಿಸಬೇಕು. ಮಾತ್ರೆ ನುಂಗುವುದರಿAದ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ನೀಡಿದರು.
*699 ತಂಡ ರಚನೆ:*
ಸಾಮೂಹಿಕ ಔಷಧಿ ಸೇವನೆಯ (ಎಂ.ಡಿ.ಎ) ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಕ್ಕಳು ಮತ್ತು ವೃದ್ಧರಿಗೆ ಒಟ್ಟಾರೆಯಾಗಿ 8,55,133 ಡಿ.ಇ.ಸಿ., 8,55,133 ಐವರಮೆಕ್ಟಿನ್ ಹಾಗೂ 3,42,053 ಅಲ್ಬೆಂಡೋಜಾಲ್ ಮಾತ್ರೆ ವಿತರಿಸಲಾಗುತ್ತಿದ್ದು, ಅಷ್ಟು ಪ್ರಮಾಣ ದಾಸ್ತಾನು ಮಾಡಿ ಇಟ್ಟುಕೊಳ್ಳಲಾಗಿದೆ. ಸಾಮೂಹಿಕವಾಗಿ ಮಾತ್ರೆ ನುಂಗಿಸಲು 699 ತಂಡ ರಚಿಸಲಾಗಿದ್ದು, 36 ಜನ ಇದರ ಮೇಲ್ವಿಚಾರಣೆ ಮಾಡಲಿದ್ದಾರೆ. 41 ಅಂಗನವಾಡಿ ಕಾರ್ಯಕರ್ತೆ, 304 ಆಶಾ ಕಾರ್ಯಕರ್ತೆಯರ ನೆರವು ಸಹ ಪಡೆಯಲಾಗಿದೆ ಎಂದು ಡಿ.ಸಿ. ತಿಳಿಸಿದರು.
*ಮಾತ್ರೆ ಯಾರೆಲ್ಲ ತೆಗದುಕೊಳ್ಳಬೇಕು?ಹೇಗೆ?:*
2 ರಿಂದ 5 ವರ್ಷದೊಳಗಿನವರಿಗೆ ಡಿ.ಇ.ಸಿ. 100 ಮಿ.ಗ್ರಾಂ ಒಂದು ಗುಳಿಗೆ, 6 ರಿಂದ 14 ವರ್ಷದೊಳಗಿನವರಿಗೆ ಡಿ.ಇ.ಸಿ. 100 ಮಿ.ಗ್ರಾಂ ಎರಡು ಗುಳಿಗೆ ಮತ್ತು 15 ವರ್ಷ ಮೇಲ್ಪಟ್ಟವರಿಗೆ ಡಿ.ಇ.ಸಿ. 100 ಮಿ.ಗ್ರಾಂ ಮೂರು ಗುಳಿಗೆ ನೀಡಲಾಗುತ್ತಿದೆ. 2 ವರ್ಷದಿಂದ ಮೇಲ್ಪಟ್ಟ ಎಲ್ಲರಿಗೂ 400 ಮಿ.ಗ್ರಾಂ ಚಪ್ಪರಿಸುವ ಅಲ್ಬೆಂಡಾಜೋಲ್ ಒಂದು ಗುಳಿಗೆ ನೀಡಲಾಗುತ್ತದೆ. ಇನ್ನು ಐವರಮೆಕ್ಟಿನ್ ಮಾತ್ರೆ ಎತ್ತರಕ್ಕನುಗುಣವಾಗಿ ನೀಡಲಾಗುತ್ತದೆ.
2 ವರ್ಷದೊಳಗಿನ ಮಕ್ಕಳಿಗೆ ಡಿ.ಇ.ಸಿ. ಮತ್ತು ಅಲ್ಬೆಂಡಾಜೋಲ್ ಮಾತ್ರೆ ಮತ್ತು 5 ವರ್ಷದೊಳಗಿನ ಮಕ್ಕಳಿಗೆ ಐವರಮೆಕ್ಟಿನ್ ಮಾತ್ರೆ ನೀಡಬಾರದು. ಅಲ್ಲದೆ ಡಿ.ಇ.ಸಿ., ಅಲ್ಬೆಂಡೋಜಾಲ್ ಹಾಗೂ ಐವರಮೆಕ್ಟಿನ್ ತ್ರಿವಳಿ ವಿಧದ ಮಾತ್ರೆಗಳು ಗರ್ಭಿಣಿಯರು, ಹೃದಯ, ಶ್ವಾಸಕೋಶ, ಮೂತ್ರಪಿಂಡ ಸಂಬಂಧಿ ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವವರು ಸಹ ಸೇವೆನೆ ಮಾಡಬಾರದು.
ಜಿಲ್ಲಾ ಕೀಟಶಾಸ್ತ್ರಜ್ಞ ಚಾಮರಾಜ ದೊಡ್ಮನಿ ಅವರು ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮದ ಹೆಚ್ಚುವರಿ ಸುತ್ತಿನ ಕುರಿತು ಇಲಾಖೆ ಮಾಡಿಕೊಂಡಿರುವ ಸಿದ್ಧತೆ ಕುರಿತು ಪಿ.ಪಿ.ಟಿ. ಮೂಲಕ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಡಿ.ಎಚ್.ಓ. ಡಾ.ಶರಣಬಸಪ್ಪ ಕ್ಯಾತನಾಳ, ಆರ್.ಸಿ.ಎಚ್.ಓ. ಡಾ.ಸಿದ್ರಾಮ ಪಾಟೀಲ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ರವಿಕಾಂತಿ ಕ್ಯಾತನಾಳ, ಜಿಲ್ಲಾ ಶಸ್ತçಜ್ಞ ಡಾ. ಅಸ್ನಾ ರುಕಿಯಾ ರಬಾ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಚಂದ್ರಕಾಂತ ನರಿಬೋಳ, ಮಹಾನಗರರ ಪಾಲಿಕೆಯ ಹಿರಿಯ ವೈದ್ಯಾಧಿಕಾರಿ ಡಾ.ರಾಜೇಂದ್ರ ಭಾಲ್ಕಿ, ಡಿ.ಪಿ.ಎಂ. ವ್ಯವಸ್ಥಾಪಕ ವೀರೇಶ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮುರುಗೇಶ ಗುಣಾರಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಸುರೇಶ ಅಕ್ಕಣ್ಣ, ಶಾಲಾ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ರಾಜಶೇಖರ, ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ಮಾರುತಿರಾವ ಕಾಂಬ್ಳೆ, ಡಾ.ಸಂಜು ಪಾಟೀಲ ಯಡಗಾ, ಜಿಲ್ಲಾ ಸಮಾಲೋಚಕ ಕರಣಿಕ್ ಕೋರೆ, ಹಿರಿಯ ಆರೋಗ್ಯ ನಿರೀಕ್ಷಕ ಖಯ್ಯೂಮ್ ಸೇರಿದಂತೆ ಆರೋಗ್ಯ ಇಲಾಖೆಯ ಇನ್ನಿತರ ಅಧಿಕಾರಿ-ಸಿಬ್ಬಂದಿಗಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಸಾಮೂಹಿಕ ಔಷಧಿ ಸೇನೆಯ (ಎಂ.ಡಿ.ಎ) ಕಾರ್ಯಕ್ರಮ ಮತ್ತು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮದ ಪೋಸ್ಟರ್ಗಳನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಕಾರ್ಯಕ್ರಮ ಅಧಿಕಾರಿಗಳೊಂದಿಗೆ ಬಿಡುಗಡೆ ಮಾಡಿದರು.


