ಕಲಬುರಗಿ: ಕೇಂದ್ರಿಯ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆ ಹೆಸರಘಟ್ಟ (ICAR-CIFRI) ಬೆಂಗಳೂರು ಹಾಗೂ ಕಲಬುರಗಿ ಮೀನುಗಾರಿಕೆ ಇಲಾಖೆ ವತಿಯಿಂದ ಕಲಬುರಗಿ ಜಿಲ್ಲೆಯ ಭೀಮಾ ನದಿಭಾಗದ ಮೀನುಗಾರರಿಗೆ ಕಲಬುರಗಿ ಮೀನುಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಬುಧವಾರ ಮೀನುಗಾರಿಕೆ ಕುರಿತು ಒಂದು ದಿನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಹೆಸರಘಟ್ಟ (ICAR-CIFRI) ಕೇಂದ್ರಿಯ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿಗಳಾದ ಡಾ. ವಿಜಯ ಕುಮಾರ ಅವರು ಮಾತನಾಡಿ, ಭೀಮಾ ನದಿಯಲ್ಲಿ ಇರುವ ಮೀನಿನ ತಳಿಗಳ ಬಗ್ಗೆ ಮಾಹಿತಿ ನೀಡಿ ಕರಾವಳಿ ಭಾಗದ ಮೀನುಗಾರರಂತೆ, ನದಿಭಾಗದ ಮೀನುಗಾರರು ಹೆಚ್ಚು ಮೀನು ಕೃಷಿ ಮಾಡಲು ಕರೆ ನೀಡಿದರು. ಅದರಂತೆ ಈ ಸಂಸ್ಥೆಯ ಇನ್ನೋರ್ವ ಹಿರಿಯ ವಿಜ್ಞಾನಿಗಳಾದ ಡಾ. ರಮ್ಯಾ ಅವರು ಮಾತನಾಡಿ, ಕೆರೆ, ಜಲಾಶಯಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಯಂತೆ ನದಿ ಭಾಗಗಳಲ್ಲಿ ಸಹ ಮೀನುಗಾರಿಕೆ ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಕಲಬುರಗಿ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಎಸ್.ಆರ್.ನಾಗರಾಜ ಅವರು ಮಾತನಾಡಿ, ಮೀನುಗಾರರು ನದಿಯಲ್ಲಿ ಮೀನು ಮರಿ ಪಾಲನೆ ಮಾಡಿ, ತಮ್ಮ ಹಿಡುವಳಿ ಹೆಚ್ಚಿಸಿಕೊಳ್ಳಬೇಕು. ಎಲ್ಲಾ ನದಿ ಮೀನುಗಾರರು ಇಲಾಖೆಯ ಕಲ್ಯಾಣ ಯೋಜನೆಗಳಾದ ಗುಂಪು ವಿಮಾ ಯೋಜನೆ, ಎನ್.ಎಫ್.ಡಿ.ಪಿ. ನೋಂದಣೆ, ಮತ್ಸ್ಯಾಶ್ರಯ ಹಾಗೂ ಕೆಸಿಸಿ ಯೋಜನೆಗಳ ಪ್ರಯೋಜನ ಪಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ಕಲಬುರಗಿ ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಶಂಕರ ಅವರು ಮಾತನಾಡಿ, ಸಂಸ್ಥೆಯಿಂದ ಪರಿಶಿಷ್ಟ ಜಾತಿ ಮೀನುಗಾರರಿಗೆ ಮೀನು ಹಿಡಿಯಲು ಉತ್ತಮ ಗುಣಮಟ್ಟದ ಫೈಬರ್ ದೋಣಿ ಉಚಿತವಾಗಿ ಸರಬರಾಜು ಮಾಡಿದ್ದು, ಇದರಿಂದ ಮೀನುಗಾರರಿಗೆ ಅನುಕೂಲವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಹೆಸರಘಟ್ಟ (ICAR-CIFRI) ಕೇಂದ್ರಿಯ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆಯಿಂದ ನೀಡಲಾದ ಉಚಿತವಾಗಿ ಫೈಬರ್ ದೋಣಿಗಳನ್ನು ಭೀಮಾ ನದಿ ಪಾತ್ರದ 5 ಪರಿಶಿಷ್ಟ ಜಾತಿಯ ಮೀನುಗಾರಿಗೆ ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಾಲಾ.ಬಿ.ನಾರಾಯಣ ಅವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಹೆಸರಘಟ್ಟ (ICAR-CIFRI) ಕೇಂದ್ರಿಯ ಒಳನಾಡು ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿಗಳು, ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಭೀಮಾ ನದಿಭಾಗದ ಮೀನುಗಾರರು ಉಪಸ್ಥಿತರಿದ್ದರು.


