ಕಲಬುರಗಿ: ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಭಾರತದೊಳಗೆ ಪ್ರವೇಶಿಸಿ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿನ ಪ್ರವಾಸಿಗರಿಗೆ ಹಾಗೂ ಸೈನಿಕರಿಗೆ ಕೊಲೆ ಮಾಡಲಾಯಿತು. ಇಷ್ಟಾದರೂ ದೇಶದ ಹಿತಾಸಕ್ತಿಗಿಂತ ಪ್ರಧಾನಿ ಮೋದಿ ಅವರಿಗೆ ಕ್ರಿಕೆಟ್ ಹೆಚ್ಚಾಗಿದೆಯೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಭಾರತ ಪಾಕಿಸ್ತಾನ ಕ್ರಿಕೆಟ್ ನಡೆಸಿದ್ದಾರೆ, ಬಿಜೆಪಿಗರಿಗೆ ನಾಚಿಕೆಯಾಗಬೇಕು. ಭಾರತ ಆಡದಿದ್ದರೆ ಅಂಕ ಹೋಗುತ್ತವೆ ಎನ್ನುವುದು ಬಿಜೆಪಿಗೆ ಸಮಜಾಯಿಷಿ ಹೇಳಿಕೆ ನೀಡುತ್ತಾರೆ. ಹೋದರೆ ಹೋಗಲಿ ಬಿಡಿ ಅಂಕ ಮುಖ್ಯನಾ? ಸರ್ಕಾರ ಬಿಸಿಸಿಐಗೆ ನಿರ್ದೇಶನ ಯಾಕೆ ನೀಡಿಲ್ಲ. ಪ್ರಧಾನಿ ಮೋದಿ ಯಾಕೆ ಗೃಹ ಸಚಿವರಿಗೆ ಮತ್ತು ಅವರ ಮಗ ಜಯ್ ಶಾಗೆ ಹೇಳಿಲ್ಲ? ಹುತಾತ್ಮರ ಮನೆಯವರು ಪಂದ್ಯ ಆಡುವುದುಬೇಡ ಅಂದಿದ್ದಾರೆ, ಆದರೂ ಇಷ್ಟು ವಿರೋಧದ ನಡುವೆ ಪಂದ್ಯ ಯಾಕೆ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಧರ್ಮಸ್ಥಳ, ಮದ್ದೂರು, ಚಾಮುಂಡೇಶ್ವರಿ ಚಲೋ, ಬಿಜೆಪಿಯವರಿಗೆ ಬೇಕಾಗಿರುವುದಾದರೂ ಏನು? ಕಾಮನ್ ಸೆನ್ಸ್ ಇದೆಯಾ? ಸೌಜನ್ಯ ಅವರ ಮನೆಗೆ ಹೋದಾಗ ರಾಶಿ ರಾಶಿ ಬುರುಡೆ ಸಿಕ್ಕಿರುವ ಬಗ್ಗೆ ಗೊತ್ತಾಗಿದೆ. ಆ ಬಗ್ಗೆ ಏನು ಹೇಳುತ್ತಾರೆ ಎಂದ ಅವರು, ಧರ್ಮಸ್ಥಳ, ಮದ್ದೂರು ಚಲೋ ಆಯ್ತು. ತಲೆ ಕಡಿರಿ ಅಂತ ಪ್ರಚೋದನೆ ಹೇಳಿಕೆ ನೀಡುವುದು ಬಿಜೆಪಿ ನಾಯಕರ ಚಾಳಿಯಾಗಿದೆ. ಸಿಟಿ ರವಿ ಸೇರಿದಂತೆ ಯಾವ ಬಿಜೆಪಿನಾಯಕರು ತಮ್ಮ ಮಕ್ಕಳಕೈಗೆ ಮಚ್ಚು ಲಾಂಗು ಕೊಟ್ಟಿದಾರ? ಬಿಜೆಪಿಗರು ರಾಜ್ಯವನ್ನು ಯುಪಿ, ಬಿಹಾರ ಮಾಡಹೊರಟಿದ್ದಾರ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಪರ ವಾದಿಸುವ ಬಾಡಿಗೆ ಬಾಷಣಕಾರರು ಸೇರಿದಂತೆ ಪ್ರತಾಪ್ ಸಿಂಹ, ರವಿ ತಮ್ಮ ಮಕ್ಕಳ ಹೆಗಲಿಗೆ ಕೇಸರಿ ಶಾಲು ಹಾಕಿ ಧರ್ಮ ರಕ್ಷಣೆಗೆ ಕಳಿಸಿದ್ದಾರ? ಎಂದು ಕೇಳಿದರು.
ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆಯಾಗಿಲ್ಲ:
ರಾಜ್ಯ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆಕಾಂಕ್ಷಿಗಳು ಇದ್ದಾರೆ. ನಮ್ಮಲ್ಲಿ ಕೆಲವರು ಸಿಎಂ, ಎಐಸಿಸಿ ಅಧ್ಯಕ್ಷರಿಗೆ ಇನ್ನೂ ಕೆಲವರು ಡಿಸಿಎಂ ಅವರಗೆ ಮಾತನಾಡಿರುತ್ತಾರೆ. ಅವರು ಏನು ಮಾತನಾಡಿರುತ್ತಾರೆ ನನಗೆ ಗೊತ್ತಿಲ್ಲ. ಸಚಿವ ಸಂಪುಟ ಪುನರ್ ರಚನೆ ಸಿಎಂ, ಎಐಸಿಸಿ ಅಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಮತ್ತಿತರರು ಉಪಸ್ಥಿತರಿದ್ದರು.


