ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು ಮಿಲಾದ್ ಉನ್ ನಬಿ ಈದ್-ಎ-ಮಿಲಾದ್ ಹಬ್ಬ ಒಟ್ಟಾಗಿಯೆ ಬಂದಿರುವುದರಿಂದ ಎರಡು ಧರ್ಮೀಯರು ಸೌಹಾರ್ದಯುತವಾಗಿ ಹಬ್ಬ ಆಚರಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಕರತೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿ.ಓ.ಪಿ. ಗಣಪ ಬಳಸದೆ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪ್ರತಿಷ್ಠಪಿಸುವ ಮೂಲಕ ಪರಿಸರ ಕಾಳಜಿ ಪ್ರದರ್ಶಿಸಬೇಕೆಂದ ಅವರು, ತಾಲೂಕಾ ಮಟ್ಟದಲ್ಲಿಯೂ ಸಹ 3 ದಿನಗಳ ಮುಂಚಿತವಾಗಿ ಇದೇ ರೀತಿಯ ಶಾಂತಿ ಸಭೆ ನಡೆಸಿ ಸಂಘ-ಸಂಸ್ಥೆಗಳಿಗೆ ಅಗತ್ಯ ಮಾಹಿತಿ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಗಣೇಶ ಪ್ರತಿಷ್ಠಾನೆಗೆ ವಿವಿಧ ಇಲಾಖೆಗೆ ಪರವಾನಿಗೆ ಪಡೆಯಲು ಓಡಾಡುವುದನ್ನು ತಪ್ಪಿಸಲು ಪಟ್ಟಣ ಪ್ರದೇಶದಲ್ಲಿ ಸಿಂಗಲ್ ವಿಂಡೋ ಸಿಸ್ಟಮ್ ತೆರೆದು ಪರವಾನಿಗೆ ನೀಡಲಾಗುವುದು. ಡಿ.ಜೆ. ಬ್ಯಾನ್ ಇರುವುದರಿಂದ ಸರ್ಕಾರ ಮತ್ತು ನ್ಯಾಯಾಲಯದ ಆದೇಶದಂತೆ ಹೆಚ್ಚು ಶಬ್ದ ಹೊರಹಾಕುವ ಧ್ವನಿವರ್ಧಕ ಬಳಸಬಾರದು ಎಂದು ಹೇಳಿದರು.
ಕಲಬುರಗಿ ನಗರ ಮತ್ತು ಜಿಲ್ಲೆಯಾದ್ಯಂತ ಗಣಪನನ್ನು ವಿಸರ್ಜನೆ ಮಾಡುವ ಸ್ಥಳವನ್ನು ಮೊದಲೆ ಸಾರ್ವಜನಿಕರಿಗೆ ತಿಳಿಸಬೇಕು. ಗಣಪನ ಪೆಂಡಾಲ್ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು. ಮೆರವಣಿಗೆಯುದ್ದಕ್ಕೂ ವಿದ್ಯುತ್ ಅಡೆತಡೆಯಾಗದಂತೆ ಎಚ್ಚರ ವಹಿಸಬೇಕಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಡಿ.ಸಿ. ನಿರ್ದೇಶನ ನೀಡಿದರು.
ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು ಮಾತನಾಡಿ, ಕಲಬುರಗಿ ನಗರದಲ್ಲಿ 500ಕ್ಕೂ ಹೆಚ್ಚು ಗಣೇಶ ಪ್ರತಿಷ್ಠಾಪಿಸಲಾಗುತ್ತಿದೆ. ಗಣೇಶ ಪೆಂಡಾಲ್ಗೆ ಮಹಿಳೆಯರು, ಮಕ್ಕಳು ಬರುವುದರಿಂದ ಸಾರ್ವಜನಿಕರನ್ನು ನಿಯಂತ್ರಿಸಲು ಆಯೋಜಕರು ಸ್ವಯಂ ಸೇವಕರನ್ನು ನಿಯೋಜಿಸಬೇಕು. ಸಾಧ್ಯವಾದರೆ ಸಿ.ಸಿ.ಟಿ.ವಿ. ಅಳವಡಿಸಿದಲ್ಲಿ ಇನ್ನು ಉತ್ತಮ ಎಂದರು.
ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಮಾತನಾಡಿ, ಕಲಬುರಗಿ ನಗರ ವ್ಯಾಪ್ತಿಯಲ್ಲಿ ಗಣೇಶ ವಿಸರ್ಜನೆಗೆ ಗುರುತಿಸಲಾದ ಸ್ಥಳದಲ್ಲಿ ಕ್ರೇನ್ ಸೌಲಭ್ಯ ಒದಗಿಸಲಾಗುವುದು. ಮೆರವಣಿಗೆ ಸರಾಗವಾಗಿ ಹೋಗಲು ರಸ್ತೆ ಗುಂಡಿ ಮುಚ್ಚಲಾಗುವುದು. ಬೀದಿ ದೀಪ ಸರಿಪಡಿಸಲಾಗುವುದು. ಪ್ರತಿ ಪೆಂಡಾಲ್ ಬಳಿ ಕಸ ಸಂಗ್ರಹಿಸಿ ಒಂದೆಡೆ ಇಟ್ಟಿದಲ್ಲಿ ಸ್ವಚ್ಛತಾ ಕಾರ್ಮಿಕರು ಪ್ರತಿ ದಿನ ಬಂದು ತೆಗೆದುಕೊಂಡು ಹೋಗಲಿದ್ದಾರೆ ಎಂದರು.
ಹಬ್ಬದ ಸಂದರ್ಭದಲ್ಲಿ ಸೌಹಾರ್ದತೆಗೆ ಧಕ್ಕೆ ತರಲು ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿಗಳನ್ನು ಪೋಸ್ಟ್ ಮಾಡಿ ಕೋಮ ಗಲಭೆಗೆ ಅಸ್ಪದ ನೀಡುವ ವಿಡಿಯೋ ಹರಿಬಿಟ್ಟು ಕಾನೂನು ಸುವ್ಯವಸ್ಥೆ ಧಕ್ಕೆ ತರುವ ಸಾಧ್ಯತೆ ಇದ್ದು, ಇಂತಹ ಯಾವುದೇ ಫೋಸ್ಟ್ ಬಂದಲ್ಲಿ ಅದನ್ನು ಫಾರ್ವಾಡ್ ಮಾಡುವ ಮುನ್ನ ಅದರ ಸತ್ಯಾಸತ್ಯೆತೆ ಅರಿಯಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವು ವಿಚಾರವಾದರೆ ಕೂಡಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಲ್ಲಿ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದ ಎಸ್.ಪಿ. ಅಡ್ಡೂರು ಶ್ರೀನಿವಾಸಲು ಅವರು, ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗುವುದು ಎಂದರು.
ಶಾಂತಿ ಸಮಿತಿ ಸದಸ್ಯ ಬಾಬುರಾವ ಜಹಾಗಿರದಾರ್ ಮಾತನಾಡಿ ಆಗಸ್ಟ್ 27 ರಂದು ಗಣಪನನ್ನು ಪ್ರತಿಷ್ಠಪಿಸಲಾಗುತ್ತಿದ್ದು, ಐದು ದಿನ, ಒಂಭತ್ತು ದಿನ ಹಾಗೂ ಕೊನೆಯದಾಗಿ 11 ದಿನ ಅಂದರೆ ಸೆಪ್ಟೆಂಬರ್ 6ಕ್ಕೆ ಅನಂತ ಚತುರ್ಥಿ ದಿನದಂದು ವಿಸರ್ಜನೆ ಮಾಡಲಾಗುತ್ತದೆ. ಮೆರವಣಿಗೆಯುದ್ದಕ್ಕೂ ವಿದ್ಯುತ್ ಅಡೆತಡೆಯಾಗದಂತೆ ನೋಡಿಕೊಳ್ಳಬೇಕು. ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಪೆಂಡಾಲ್ಗೆ ತಾತ್ಕಲಿಕ ವಿದ್ಯುತ್ ನೀಡಲು ಜೆಸ್ಕಾಂ ಹೆಚ್ಚು ಶುಲ್ಕ ವಿಧಿಸುತ್ತಿದ್ದು, ಇದನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.
ಖಾಜಿ ರಿಜ್ವಾನ್ ಉರ್ ರೆಹಮಾನ್ ಸಿದ್ದಿಕ್ಕಿ ಅವರು ಮಾತನಾಡಿ, ಪ್ರತಿ ವರ್ಷದತೆ ಈ ವರ್ಷವು ಸಹ ಕಲಬುರಗಿಯಲ್ಕಿ ಶಾಂತಿಯುತವಾಗಿ ಎರಡು ಹಬ್ಬ ಆಚರಿಸಲಾಗುವುದು. ಈ ಬಾರಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿ.ಜೆ. ಬಳಸದಂತೆ ಸಮುದಾಯದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಇನ್ನು ಸಭೆಯಲ್ಲಿ ಭಾಗವಹಿಸಿದ ಅನೇಕ ಮುಖಂಡರು ಮಾತನಾಡಿ, ಹಿಂದೂ-ಮುಸ್ಲಿಂ ಭಾಂಧವರು ಎಲ್ಲರು ಸೇರಿ ಒಟ್ಟಿಗೆ ಬಂದಿರುವ ಗಣಪತಿ ಮತ್ತು ಈದ್-ಎ-ಮಿಲಾದ್ ಹಬ್ಬವನ್ನು ಭಾತೃತ್ವ ಭಾವನೆಯಿಂದ ಆಚರಿಸುವಾಗಿ ತಿಳಿಸಿದಲ್ಲದೆ ಗಣೇಶ ಪೆಂಡಾಲ್ ಸುತ್ತ ಸ್ವಚ್ಛತೆ, ಪೊಲೀಸ್ ಬಂದೋಬಸ್ತ್, ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಮದ್ಯದ ಹಾವಳಿಗೆ ಕಡಿವಾಣ ಹಾಕಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ, ಹೆಚ್ಚುವರಿ ಎಸ್.ಪಿ. ಮಹೇಶ ಮೇಘಣ್ಣನವರ್, ಅಬಕಾರಿ ಉಪ ಅಯುಕ್ತ ಸಂಗಣಗೌಡ ಬಿರಾದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಧಾರ್ಮಿಕ ಮುಖಂಡರು, ಗಣ್ಯರು ಭಾಗವಹಿಸಿದ್ದರು.