ಕಲಬುರಗಿ: ಹೈಕೋರ್ಟ್ ಸೂಚನೆ ನೀಡಿದ ಹಿನ್ನಲೆ ಇಂದು ವಿಚಾರಣೆಗೆ ಹಾಜರಾಗಿದ್ದು, ನನ್ನನ್ನು ಬಂಧನ ಮಾಡಬಾರದು ಅಂತ ಕೋರ್ಟ್ ಹೇಳಿದೆ. ಪ್ರಜಾಪ್ರಭುತ್ವ ಉಳಿಸುವುದಕ್ಕಾಗಿ ನಾನು ವಿಚಾರಣೆ ಎದುರಿಸಿದ್ದೇನೆ. ಕೋರ್ಟ್ ಆದೇಶದಂತೆ ಡಿಸಿ ಅವರಿಗೆ ಪತ್ರ ಬರೆದು ಕ್ಷಮೆ ಕೋರುವೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್. ರವಿಕುಮಾರ ಹೇಳಿದರು.
ನಗರದ ದಕ್ಷಿಣ ಎಸಿಪಿ ಕಚೇರಿಯಲ್ಲಿ ಅವಹೇಳನಕಾರಿ ಪದ ಉಪಯೋಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ (ಬೆಳಗ್ಗೆ 11ರಿಂದ ಸಂಜೆ 4 ಗಂಟೆ) ಎದುರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹಳ ನಿಧಾನಕ್ಕೆ ನನ್ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖಾಧಿಕಾರಿ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ ಎಂದರು.
ನೀವು ಆ ರೀತಿ ಭಾಷಣ ಮಾಡಿದ್ದೀರಾ? ಅಂತ ಪೊಲೀಸರು ಕೇಳಿದರು. ಅದಕ್ಕೆ ನಾನು ಹೌದು ಅಂತ ನಾನು ಹೇಳಿದ್ದೇನೆ. ಆದರೆ ನನ್ನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಿದ್ದು ಆಶ್ಚರ್ಯವಾಗಿದೆ ಎಂದರು. ದಲಿತರ ಅವಹೇಳನ ಮಾಡಿಲ್ಲ. ಆ ಬಗ್ಗೆ ವಿಡಿಯೋ ಕೂಡ ಇದೆ. ಜಿಲ್ಲಾಧಿಕಾರಿಗೂ ಕೂಡ ನಾನು ಬೈದಿಲ್ಲ. ಧರ್ಮದ ವಿಚಾರವಾಗಿ ನಾನು ಹೇಳಿಕೆ ನೀಡಿಲ್ಲ. ಪಾಕಿಸ್ತಾನ ದೇಶದ ಅರಾಜಕತೆಯನ್ನು ದೃಷ್ಟಿ ಇಟ್ಟುಕೊಂಡು ಹೇಳಿದ್ದೇನೆ ಅಂತ ತನಿಖಾಧಿಕಾರಿಗೆ ತಿಳಿಸಿದ್ದೇನೆ ಎಂದರು.
ಅವಶ್ಯಕತೆ ಇದ್ರೆ ವಿಚಾರಣೆಗೆ ಬರಬೇಕು ಅಂತ ಹೇಳಿದ್ದಾರೆ. ಅದಕ್ಕೆ ನಾನು ಬರುತ್ತೆನೆಂದು ಹೇಳಿದ್ದು, ಪ್ರಕರಣ ನ್ಯಾಯಲಯದಲ್ಲಿದೆ, ನ್ಯಾಯಂಗದ ಮೇಲೆ ನನಗೆ ಗೌರವವಿದೆ. ನಾನು ಹೇಳಿಕೆ ನೀಡಿದ ಮರುದಿನವೇ ಕ್ಷಮೆ ಕೇಳಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಿಂಚೋಳಿ ಶಾಸಕ ಅವಿನಾಶ್ ಜಾಧವ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ಎಂಎಲ್ಸಿ ಶಶೀಲ್ ನಮೋಶಿ, ಅಮರನಾಥ್ ಪಾಟೀಲ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ನಿಕಟಪೂರ್ವ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಅವ್ವಣ್ಣಾ ಮ್ಯಕೆರಿ, ಬಾಬುರಾವ್ ಚವ್ಹಾಣ್, ರಾಜು ವಾಡೇಕರ್, ಗಣೇಶ್ ತಳಕೇರಿ, ವಿದ್ಯಾಸಾಗರ್ ಕುಲಕರ್ಣಿ ಸೇರಿದಂತೆ ಹಲವರು ಭಾಗಿಯಾಗಿದ್ದರು.