ಕಲಬುರಗಿ: ಇಲ್ಲಿನ ಜಿಲ್ಲಾಧಿಕಾರಿ ಕೂಡ ಕಾಂಗ್ರೆಸ್ ನವರು ಹೇಳಿದ ಹಾಗೆ ಮಾಡುತ್ತಿದ್ದಾರೆ, ಡಿ.ಸಿ ಕೂಡ ಪಾಕಿಸ್ತಾನದಿಂದ ಬಂದಂತೆ ಕಾಯುತ್ತಿದೆ ಎಂದು ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಅವರು ಮುಸ್ಲಿಂ ಸಮುದಾಯದ ಮಹಿಳಾ ಜಿಲ್ಲಾಧಿಕಾರಿಯನ್ನು ಅಪಹಾಸ್ಯ ಮಾಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶನಿವಾರ ಛಲವಾದಿ ನಾರಾಯಣಸ್ವಾಮಿ ಅವರನ್ನು ಅಪಮಾನ ಮಾಡಿರುವುದನ್ನು ಖಂಡಿಸಿ, ಬಿಜೆಪಿಯಿಂದ ಹಮ್ಮಿಕೊಂಡಿದ್ದ ಕಲಬುರಗಿ ಚಲೋ ಎಂಬ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಡಿಸಿ ಕಚೇರಿಯೂ ಕೂಡ ಸ್ವಾತಂತ್ರ್ಯ ಕಳೆದುಕೊಂಡು ಬಿಟ್ಟಿದೆ, ಡಿಸಿ ಮೇಡಮ್ ಕೂಡ ಅವರು ಹೇಳಿದಂತೆ ಕೇಳುತ್ತಿದ್ದಾರೆ, ಅವರು ಪಾಕಿಸ್ತಾನದಿಂದ ಐಎಎಸ್ ಆಗಿದ್ದಾರೋ ಅಥವಾ ಇಲ್ಲಿ ಐಎಎಸ್ ಆಫೀಸರ್ ಆಗಿದ್ದಾರೋ ಗೊತ್ತಿಲ್ಲ ನನಗೆ, ಬಹುಶಃ ನಿಮ್ಮ ಚಪ್ಪಾಳೆ ನೋಡಿದರೆ ಡಿಸಿ ಅವರು ಪಾಕಿಸ್ತಾನದಿಂದಲೇ ಬಂದಿದ್ದಾರೆ ಎನ್ನುವುದನ್ನು ಕಾಣುತ್ತಿದೆ ಎಂದು ಹೇಳಿದ್ದಾರೆ.
ಈ ಹೇಳಿಕೆಯನ್ನು ಗಮನಿಸಿದ ಹಲವು ಪ್ರಗತಿಪರ ಸಂಘಟನೆಗಳ ನಾಯಕರು ಖಂಡಿಸಿದ್ದಾರೆ, ಎನ್.ರವಿಕುಮಾರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.