ಕಲಬುರಗಿ: ಕಾರ್ಮಿಕರ ಪಿಂಚಣಿ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಗಮನ ಸೆಳೆಯುವ ನಿಟ್ಟಿನಲ್ಲಿ ಮೇ.19 ರಂದು ಬೆಳಗ್ಗೆ 10.30 ಗಂಟೆಗೆ ನಗರದ ಕನ್ನಡಭವನದಲ್ಲಿ ವಿಭಾಗೀಯ ಮಟ್ಟದ ಪಿಂಚಣಿದಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಶ್ರೀಮಂತ್ ಬಿರಾದಾರ್ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯೊಂದರಲ್ಲೆ ಅಂದಾಜು 295 ಜನ ಕಾರ್ಮಿಕರು ಪಿಂಚಣಿ ಪಡೆಯುವ ಫಲಾನುಭವಿಗಳಿದ್ದಾರೆ. ವಿಭಾಗೀಯ ಮಟ್ಟದದಲ್ಲಿ ಅಂದಾಜು 2200 ಜನ ಪಿಂಚಣಿದಾರರು ಇದ್ದಾರೆ. ಆದರೆ ಸರ್ಕಾರಗಳು ಕಾರ್ಮಿಕರಿಗೆ ಪಿಂಚಣಿ ನೀಡುವಲ್ಲಿ ಅಸಡ್ಯ ತೋರಿಸುತ್ತಿವೆ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರಿಗೆ ಪಿಂಚಣಿ ಮೊತ್ತ 5,000 ರೂ ಹೆಚ್ಚಿಸಬೇಕು. ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಇರುವ ಕಾಲಮಿತಿ ರದ್ದು ಪಡಿಸಬೇಕು, ಪ್ರತಿ ತಿಂಗಳು 5ನೇ ತಾರೀಖು ಒಳಗಾಗಿ ಪಿಂಚಣಿ ಜಮೆ ಮಾಡಬೇಕು, ಬಾಕಿ ವೇತನ 3 ಅಥವಾ 4 ದಿನಗಳಲ್ಲಿ ಬಿಡುಗಡೆ ಮಾಡಬೇಕು. ತಾಂತ್ರಿಕ ತೊಂದರೆಗಳ ನಿವಾರಣೆಗೆ ಸ್ಥಳೀಯ ಮಟ್ಟದ ಕಚೇರಿಗಳಲ್ಲಿ ಅವಕಾಶ ಮಾಡಿಕೊಡಬೇಕು. ಕಲ್ಯಾಣ ಮಂಡಳಿಯಲ್ಲಿ ನೋಂದಾಣಿಯಾಗದೇ ನಿವೃತ್ತಿ ಹೊಂದಿದ ಕಟ್ಟಡ ಕಾರ್ಮಿಕರಿಗೆ ಪಿಂಚಣಿ ಸಿಗುತ್ತಿಲ್ಲ, ಹಾಗಾಗಿ ರಾಜ್ಯಾದ್ಯಂತ ಸಮೀಕ್ಷೆ ನಡೆಸಿ ಅವರುಗಳಿಗೆ ಪಿಂಚಣಿ ನೀಡುವ ನಿಟ್ಟಿನಲ್ಲಿ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಕ್ರಮ ವಹಿಸಿಬೇಕಿದೆ ಎಂದು ಒತ್ತಾಯಿಸಿದರು.
ಈ ಎಲ್ಲ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರಲು ಪಿಂಚಣಿದಾರರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಿಂಚಣಿದಾರರು ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಲು ಮನವಿ ಮಾಡಿಕೊಂಡಿದರು.
ಸುದ್ದಿಗೋಷ್ಠಿಯಲ್ಲಿ ಬಾಬು ಹೂವಿನಳ್ಳಿ, ಹಣಮಂತರಾಯ ಬಿ ಪೂಜಾರಿ, ಯಶ್ವಂತ್ ಮಾಲಿಪಾಟೀಲ್, ನಾಗಪ್ಪ ರಾಯಚುರ್ ಕರ್, ಲಕ್ಷ್ಮಣ್ ನಂದೂರ್ ಕರ್, ಶೇಖ ಇಸಾಮ್ಮೋದಿನ್ ಸೇರಿದಂತೆ ಇತರರು ಇದ್ದರು.