ಕಲಬುರಗಿ| ಎರಡು ದಿನಗಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

Date:

Share post:

ಕಲಬುರಗಿ: ಸೋಮವಾರದಿಂದ ಪ್ರಾರಂಭವಾದ 22ನೆಯ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಮಂಗಳವಾರ ಸಂಜೆ ತೆರೆಬಿದ್ದಿದೆ.

ಮಂಗಳವಾರದ ಮೊದಲ ಗೋಷ್ಠಿಯಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಮುಡುಬಿ ಗುಂಡೇರಾವ ಅವರಿಗೆ ಕನ್ನಡ ಧ್ವಜ ಹಸ್ತಾಂತರ ಮಾಡಿ ಮಾತನಾಡಿದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್. ಅಪ್ಪಾ ಅವರು, ನಾವು ರಚಿಸುವ ಸಾಹಿತ್ಯದಿಂದ ಸಾಮರಸ್ಯದ ಜೀವನ ರೂಪಿಸುವಂತಿರಬೇಕು ಎಂದು ಅವರು ಹೇಳಿದರು.

ನಾವು ಉಳಿಯಬೇಕಾದರೆ ಸಮಾಜ ಉಳಿಸಬೇಕು. ಅದಕ್ಕಾಗಿ ಬಸವಾದಿ ಶರಣರು ಸೌಹಾರ್ದತೆಯ ಬದುಕು ಕಟ್ಟಿಕೊಟ್ಟರು. ಇಂದು ಅಂಥ ಸೌಹಾರ್ದತೆಯ ಸಾಹಿತ್ಯ ಮತ್ತು ಕಲೆಗಳು ಅವಶ್ಯವಾಗಿವೆ ಎಂದರು.

ಶಾಸಕ ಬಸವರಾಜ ಮತ್ತಿಮಡು ಮಾತನಾಡಿದರು.

 

ಸಾರಂಗಮಠದ ಶ್ರೀ ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಕಲಬುರಗಿ ಜಿಲ್ಲಾ ಕಸಾಪ ರಾಜ್ಯಕ್ಕೆ ಮಾದರಿಯಾಗಿದೆ. ಕಲೆ, ಸಾಹಿತ್ಯ, ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆ ಉಳಿಸಿ ಬೆಳೆಸುವಲ್ಲಿ ಎಲ್ಲರೂ ಮುಂದಾಗಬೇಕಿದೆ ಎಂದರು.

 

ಸಮ್ಮೇಳನಾಧ್ಯಕ್ಷರ ಬದುಕು ಬರಹದ ಕುರಿತು ನರಸಪ್ಪ ಚಿನ್ನಕಟ್ಟಿ ಮಾತನಾಡಿದರು. ಅನ್ನ ಅರಿವು ಅಕ್ಷರ ನೆರವು ಗೋಷ್ಠಿಯಲ್ಲಿ ಕೃಷಿಕ ಆದಿನಾಥ ಹೀರಾ, ಆರೋಗ್ಯದ ಕುರಿತು ಡಾ. ಶರಣಕುಮಾರ ಕಂಠಿ ಮಾತನಾಡಿದರು. ಜಗದೀಶ ಮರಪಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮುಳುಗದಿರಲಿ ಬದುಕು ಗೋಷ್ಠಿಯಲ್ಲಿ ಡಾ. ಬಾಬುರಾವ ಶೇರಿಕಾರ, ಕಲ್ಯಾಣಕುಮಾರ ಶೀಲವಂತ ಉಪನ್ಯಾಸ ನೀಡಿದರು.

 

ಸಮಾರೋಪ ಸಮಾರಂಭ:

 

ಸಮಾರೋಪ ಸಮಾರಂಭದಲ್ಲಿ ಸಾನಿಧ್ಯ ವಹಿಸಿದ್ದ ಕಡಗಂಚಿ ಶಾಂತಲಿಂಗೇಶ್ವರ ಮಠದ ಪೂಜ್ಯ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯ ಸಮಾಜದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ಅಕ್ಕಮಹಾದೇವಿಯವರ ನಿನಗಾಗಿ ಸತ್ತವರು ನಾ ಕಾಣೆ ಚೆನ್ನಮಲ್ಲಿಕಾರ್ಜುನ, ಎಂಬ ತತ್ವದಂತೆ ಬದುಕಬೇಕು. ಎರಡು ದಿನಗಳ ಸಾಹಿತ್ಯ ಸಮ್ಮೇಳನಕ್ಕಾಗಿ ದುಡಿದ ಎಲ್ಲರೂ ಅಭಿನಂದನಾರ್ಹರು ಎಂದು ಹೇಳಿದರು.

 

ಸಂಸ್ಕೃತಿ ಚಿಂತಕಿ ಡಾ. ಭುವನೇಶ್ವರಿ ಚಿಮಕೋಡ ಸಮಾರೋಪ ನುಡಿಗಳನ್ನಾಡಿ, ಕಲ್ಯಾಣ ಕರ್ನಾಟಕದ ಹೃದಯಭಾಗವಾದ ಕಲಬುರಗಿಯಲ್ಲಿ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಅತ್ಯಂತ ಯಶಸ್ವಿಯಾಗಿ ಜರುಗಿತು. ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನ ಮತ್ತು ಹಜರತ್ ಖ್ವಾಜಾ ಬಂದೇ ನವಾಜ್ ದರ್ಗಾಗಳ ಆಶೀರ್ವಾದದೊಂದಿಗೆ ನಡೆದ ಈ ಸಮ್ಮೇಳನವು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ಮೂಡಿಬಂದಿತು. ಕನ್ನಡ ಭಾಷೆ ಜಗತ್ತಿನ ಶ್ರೀಮಂತ ಭಾಷೆಗಳಲ್ಲಿ ಒಂದು ಎಂದು ಹೆಮ್ಮೆಯಿಂದ ಸಾರಿದೆ ಎಂದರು.

 

ಸಮ್ಮೇಳನದ ನಿರ್ಣಯಗಳು:

 

1) ಕಲಬುರಗಿಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಮಾಡುವುದು. ಕಲ್ಯಾಣ ಭಾಗದ ಸಮಸ್ಯೆ ಪರಿಹರಿಸಲು ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕು.

2) ಹಂಪಿ ಉತ್ಸವದ ಮಾದರಿಯಂತೆ ರಾಷ್ಟ್ರಕೂಟ, ಕಲಬುರಗಿ ಉತ್ಸವಗಳನ್ನು ಆಚರಿಸಬೇಕು.

3) ಕಲ್ಯಾಣ ನಾಡಿನ ಪ್ರಮುಖ ಐತಿಹಾಸಿಕ ಸ್ಥಳಗಳಾದ ನಾಗಾವಿ, ಮಳಖೇಡ, ಸನ್ನತಿ, ಬೀಜನಳ್ಳಿಗಳನ್ನು ರಾಷ್ಟ್ರೀಯ ಸ್ಮಾರಕಗಳೆಂದು ಘೋಷಣೆ ಮಾಡಿ ಅವುಗಳನ್ನು ಅಭಿವೃದ್ಧಿ ಪಡಿಸಬೇಕು. ಈ ಸ್ಥಳಗಳ ಮಹತ್ವವನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕು.

4) ಸರಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಮುಲಭೂತ ಸೌಕರ್ಯಗಳನ್ನು ಕಲ್ಪಿಸಿ, ಶಿಕ್ಷಕರನ್ನು ನೇಮಿಸಬೇಕು. ಆ ಮೂಲಕ ಕನ್ನಡ ಶಾಲೆಗಳನ್ನು ಉಳಿಸಬೇಕು.

5) ಜಿಲ್ಲೆಯ ಸಿಮೆಂಟ್ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಬೇಕು.

6) ಉದ್ಯೋಗ ಕಲ್ಪಿಸುವ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಜಿಲ್ಲೆಯ ಎರಡು ಕಡೆ ಸ್ಥಾಪಿಸಬೇಕು.

7) ಕಲಬುರಗಿಯಲ್ಲಿ ಜವಳಿ ಪಾರ್ಕ್ ಶೀಘ್ರವೇ ಅನುಷ್ಠಾನಗೊಳಿಸಬೇಕು.

 

ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ್ ತೇಗಲತಿಪ್ಪಿ, ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಅಮರೇಶ್ವರಿ ಬಾಬುರಾವ್ ಚಿಂಚನಸೂರ, ಜಿಲ್ಲಾ ಸರಕಾರಿ ನೌಕರ ಸಂಘದ ರಾಜ್ಯ ಸಮಿತಿ ಸದಸ್ಯ ಧರ್ಮರಾಜ ಜವಳಿ, ಕುಸನೂರ ಗ್ರಾಮ ಪಂಚಾಯತ್ ಅಧ್ಯಕ್ಷ ಕುಪೇಂದ್ರ ಬರಗಾಲಿ, ಸರಕಾರಿ ನೌಕರರ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ನಾಗಪ್ಪ ಹೊನ್ನಳ್ಳಿ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ ಅಧ್ಯಕ್ಷ ಸೇವಂತಾ ಪಿ. ಚೌಹಾಣ್, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಪವನ ಸಿಂಗ್ ಠಾಕೂರ್, ಭರತರಾಜ, ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ, ಕಲ್ಯಾಣಕುಮಾರ ಶೀಲವಂತ ವೇದಿಕೆ ಮೇಲಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸತ್ಕರಿಸಲಾಯಿತು. ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಶರಣರಾಜ ಛಪ್ಪರಬಂದಿ, ಸೇರಿದಂತೆ ಹಲವಾರು ಸಾಹಿತ್ಯಾಸಕ್ತರು ಇದ್ದರು.

 

Share post:

spot_imgspot_img

Popular

More like this
Related

ಕಲಬುರಗಿ ಜಿಲ್ಲೆಯನ್ನು ರಾಜ್ಯದ ಉಪರಾಜಧಾನಿಯನ್ನಾಗಿ ಘೋಷಿಸಿ: ಮುಡುಬಿ ಗುಂಡೇರಾವ

ಕಲಬುರಗಿ: ಕಲಬುರಗಿ ನಗರವನ್ನು ಕೇವಲ ಪ್ರಾದೇಶಿಕ ಕೇಂದ್ರವಾಗಿ ನೋಡದೆ, ಈ ಭಾಗದ...

ಕಲಬುರಗಿ| ಶಿಕ್ಷಣದ ಜ್ಯೋತಿ ಹೊತ್ತಿಸಿದ ಮಹಾದೇವಪ್ಪ ರಾಂಪುರೆ: ಡಾ.ಮಹೇಶ ಗಂವ್ಹಾರ

ಕಲಬುರಗಿ: ಅಂದಿನ ಹೈದ್ರಾಬಾದ್ ಕರ್ನಾಟಕದಲ್ಲಿ ಶಿಕ್ಷಣದ ಜ್ಯೋತಿ ಹೊತ್ತಿಸಿದ ಪುಣ್ಯಾತ್ಮ ಮಹಾದೇವಪ್ಪ...

ಕಲಬುರಗಿ| ಸರಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಕಲಬುರಗಿ: ನಗರದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಭವನಕ್ಕೆ ಜಿಲ್ಲಾಧಿಕಾರಿ ಫೌಜಿಯಾ...

ಕಲಬುರಗಿ| ಜಿಲ್ಲಾಧಿಕಾರಿಗಳಿಂದ ಸಿಟಿ ರೌಂಡ್: ರಸ್ತೆ ದುರಸ್ತಿ,‌ ಗುಂಡಿ ಮುಚ್ಚುವ ಕಾರ್ಯ ಪರಿಶೀಲನೆ

ಕಲಬುರಗಿ: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮತ್ತು ಮಹಾನಗರ ಪಾಲಿಕೆ ಆಯುಕ್ತ ಅವಿನಾಶ...