ಕಲಬುರಗಿ: “ಬಯಲೆಂಬೊ ಬಯಲು” ಕಾದಂಬರಿಯು ಕುಟುಂಬದಲ್ಲಿ ಹುಟ್ಟಿ ಸಮಾಜ ಮುಖಿಯಾಗಿ ನಿಲ್ಲುತ್ತದೆ ಎಂದು ಸಾಹಿತಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಚ್.ಟಿ.ಪೋತೆ ಹೇಳಿದರು.
ಸರಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದ ಅಂಬೇಡ್ಕರ್ ಸಭಾಂಗಣದಲ್ಲಿ ಮಂಗಳವಾರ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ “ಬಯಲೆಂಬೊ ಬಯಲು” ಕೃತಿಯ ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಬರೆಹ ದಮನಿತರಿಗೆ, ಶೋಷಿತರಿಗೆ, ವಿಶೇಷವಾಗಿ ಎಲ್ಲ ವರ್ಗದ ಮಹಿಳೆಯರಿಗೆ ಬದಲಾವಣೆಯ ಮಾರ್ಗವಾಗದ್ದಲ್ಲದೆ, ದಮನಿತರು ಅಕ್ಷರವಂತರಾದಾಗ ಮಾತ್ರ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಅಕ್ಷರ ಅಥವಾ ಸಮಾನತೆ ಸಿಗುವಲ್ಲಿ ಸಂವಿಧಾನ ಪ್ರಧಾನ ಪಾತ್ರವಹಿಸುತ್ತದೆ. ಭಾರತದ ಎಲ್ಲರೂ ಭಾತೃತ್ವತೆಯಿಂದ ಬದುಕಬೇಕಾದರೆ ಅದಕ್ಕೆ ಸಂವಿಧಾನ ಆಧಾರವಾಗಿ ನಿಲ್ಲುತ್ತದೆ ಎಂದು ಹೇಳಿದರು.
ಹಿರಿಯ ಸಾಹಿತಿಗಳಾದ ಡಾ.ಶ್ರೀಶೈಲ ನಾಗರಾಳ ಅವರು ಪುಸ್ತಕ ಕುರಿತು ಮಾತನಾಡಿ, ಮೇಲ್ಜಾತಿ ಮತ್ತು ಕೆಳಜಾತಿಗಳ ನಡುವಿನ ಸಂಘರ್ಷ ಹಾಗೂ ಸಮಾಜದ ಅವ್ಯವಸ್ಥೆಯನ್ನು ಸವಿಸ್ತಾರವಾಗಿ ವಿಮರ್ಶಿಸುವ ಕಾದಂಬರಿಯಾಗಿದೆ ಎಂದರು. ಇದು ಕನ್ನಡ ಸಾಹಿತ್ಯದ ಮೊದಲ ಬಯೋಪಿಕ ಕಾದಂಬರಿ ಎಂದು ಹೇಳಿದರು.
ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ)ದ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕಿ ಮತ್ತು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಶಾರದಾ ಜಾಧವ, ಐಕ್ಯೂಎಸಿ ಸಂಯೋಜಕ ಡಾ. ರಾಜಶೇಖರ ಮಡಿವಾಳ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಶ್ರೀಮಂತ ಹೋಳ್ಳರ್, ಪ್ರಾಧ್ಯಾಪಕ ಡಾ. ಸುರೇಂದ್ರ ಕುಮಾರ ಕೆರಮಗಿ, ಸಹ ಪ್ರಾಧ್ಯಾಪಕ ಡಾ. ನಾಗಪ್ಪ ಗೋಗಿ ಉಪಸ್ಥಿತಿ ಇದ್ದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋದಕ ಮತ್ತು ಬೋದಕೇತರ ಸಿಬ್ಬಂದಿ ಹಾಗೂ ವಿವಿಧ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉಪನ್ಯಾಸಕಿ ಡಾ. ಶೈಲಜಾ ಎನ್. ಬಾಗೇವಾಡಿ ಗಣ್ಯರನ್ನು ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಶಾಮಲಾ ಸ್ವಾಮಿ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ನಾಮದೇವ ರಾಠೋಡ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಶ್ರೀದೇವಿ ರಾಠೋಡ ನಿರೂಪಣೆ ಮಾಡಿದರು.


