ಕಲಬುರಗಿ: ಗಂಗಾ ಜಮುನಾ ತೆಹಜೀಬ್ ಎಂಬ ಮಾತಿನಂತೆ ಅನುವಾದ ಕಾರ್ಯದ ಮೂಲಕ ಸಾಹಿತಿ ಬೋಡೆ ರಿಯಾಜ್ ಅಹ್ಮದ್ ಅವರು ಆ ಸಂಸ್ಕೃತಿಗೆ ಭೀಮೆಯನ್ನು ಸೇರಿಸಿದ್ದಾರೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭಾಷಾನಿಕಾಯದ ಡೀನರಾದ ಪ್ರೊ. ವಿಕ್ರಮ ವಿಸಾಜಿ ಹೇಳಿದರು.
ಇಲ್ಲಿನ ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ಹರಿಹರ ಸಭಾಂಗಣದಲ್ಲಿ ಬಿಡುಗಡೆಯಾದ ಹಿರಿಯ ಸಾಹಿತಿ ಬೋಡೆ ರಿಯಾಜ್ ಅಹ್ಮದ್ ಅವರ ಅನುವಾದಿತ “ಅಮೀರ ಖುಸ್ರೋ ಕಾವ್ಯಲೋಕ” ಕೃತಿಯ ಪರಿಚಯಿಸಿ, ಮಾತನಾಡಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಈ ಕಟ್ಟಡ ಅನೇಕ ಭಾಷೆಗಳನ್ನು ಕೇಳಲು ವೈಯಕ್ತಿಕವಾಗಿ ನನಗೆ ವಿದ್ಯಾರ್ಥಿ ದೆಸೆಯಿಂದಲೂ ಅವಕಾಶವನ್ನೊದಗಿಸಿದೆ. ಬೋಡೆ ರಿಯಾಜ್ ಅವರು ಮೂಲತಃ ಸಾಹಿತ್ಯದ ವಿದ್ಯಾರ್ಥಿಯಲ್ಲದಿದ್ದರೂ ಸಹ ಅವರು ಸಾಹಿತ್ಯವನ್ನು ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ಇದಕ್ಕೆ ಮೂಲ ಕಾರಣ ಅವರ ಕುಟುಂಬ ಮತ್ತು ತಿಮ್ಮಾಪುರಿ ಗ್ರಾಮದ ಸಾಹಿತ್ಯ ಪರಿಸರ, ಅವರ ತಂದೆಯವರು ಕೂಡ ಉರ್ದುವಿನ ದೊಡ್ಡ ಸಾಹಿತಿಯಾಗಿದ್ದರು. ರೂಮಿ ಕಾವ್ಯವನ್ನು ಅನುವಾದಿಸಿದ್ದಾರೆ. ಪ್ರಸ್ತುತ ಫಾರೂಖಿ ಯವರ ಕಾದಂಬರಿಯನ್ನು ಅನುವಾದಗೊಳಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಲೋಕ ಈವರೆಗೂ ಉರ್ದು ಪಾರ್ಸಿ ಅರೆಬಿಕ್ ಸಾಹಿತ್ಯ ಲೋಕದ ಅನುಭಾವವನ್ನು ಒಗ್ಗಿಸಿಕೊಳ್ಳುವ ಕೆಲಸವನ್ನು ಆಗಿರಲಿಲ್ಲ. ಈಗ ಆ ಅಪರಿಚಿತ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸವನ್ನು ಬೋಡೆಯವರು ಮಾಡಿದ್ದಾರೆ. ಮೂಲಕ್ಕೆ ಹೆಚ್ಚು ಹತ್ತಿರದಲ್ಲಿ ಅನುವಾದ ಮಾಡುವುದನ್ನು ನಾವು ಕೈಬಿಡಬೇಕು. ಯಾವುದೇ ಅನುವಾದ ಕನ್ನಡದ ಯಾವ ಅನುಭವ ಲೋಕಕ್ಕೆ ಒಗ್ಗಿಕೊಳ್ಳುತ್ತದೆ ಎಂಬ ಅರಿವು ಅನುವಾದಕನಿಗಿರಬೇಕು. ಏಕೆಂದರೆ ಮೂಲ ಕಾವ್ಯದ ಜನಜೀವನ ಅನುಭೂತಿಗಳು ಅನುವಾದಿತ ಭಾಷೆಯ ಜನಜೀವನ ಅನುಭೂತಿಗೂ ಬಹಳ ಅಂತರವಿರುತ್ತದೆ. ಇದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಸಗರ ಪರಿಸರದವರಾದ ಬೋಡೆಯವರಿಗೆ ಈ ಅರಿವು ಸಹಜವಾಗಿಯೇ ದಕ್ಕಿದೆ ಎಂದು ಶ್ಲಾಘಿಸಿದರು.
ಅಮೀರ್ ಖುಸ್ರೋ ಬಗ್ಗೆ ಕನ್ನಡದಲ್ಲಿ ಬಂದ ಅತಿದೊಡ್ಡ ಪುಸ್ತಕ ಇದು. ನಮಗಿಂತ ಎಷ್ಟೋ ಶತಮಾನಗಳ ಕಾಲ ಹಳೆಯ ಕವಿಯನ್ನು ನಾವು ಕನ್ನಡದಲ್ಲಿ ಓದಲು ಕಲಬುರಗಿಯ ಬೋಡೆ ರಿಯಾಜ್ ಅಹ್ಮದ್ ಅವರು ಬರಬೇಕಾಯಿತು ಎಂದರು.
ಅಮೀರ್ ಖುಸ್ರೋ ಹಿಂದಿಯ ಬಹುತೇಕ ಉಪಭಾಷೆಗಳನ್ನು ಬಳಸಿ ತನ್ನ ಕಾವ್ಯಲೋಕವನ್ನು ಕಟ್ಟಿಕೊಂಡಿದ್ದಾನೆ. ಅಮೀರ್ ಖುಸ್ರೋನ ಕೌಟುಂಬಿಕ ಪರಿಸರ ಅವನಿಗೆ ಪಾರ್ಸಿ ಉರ್ದು ಹಿಂದಿ ಬ್ರಜ್ ಹೀಗೆ ಅನೇಕ ಭಾಷೆಗಳ ಸಂಪರ್ಕ ಒದಗಿಸಿತ್ತು. ಹಾಗಾಗಿ ಆತ ಜನಮಾನಸದ ಕವಿಯಾಗಿ ರೂಪುಗೊಂಡರು. ಆದ್ದರಿಂದ ಅವರು ಜನರಿಂದ ‘ತೂತಿಯೇ ಹಿಂದ್’ (ಹಿಂದೂಸ್ತಾನದ ಕೋಗಿಲೆ) ಎಂದು ಕರೆಸಿಕೊಂಡರು.
ಅಮೀರ್ ಖುಸ್ರೋ ಪ್ರೇಮದ ಬಗ್ಗೆ ಮಾಡಿರುವ ನಿರೂಪಣೆಗಳು ನಮ್ಮ ಅರಿವಿಗೆ ನಿಲುಕದ ಸಂಗತಿಗಳಾಗಿವೆ. ಅವರ ಪ್ರೇಮಯಾತನೆ ನಮ್ಮ ಕಲ್ಪನೆಗೆ ಮೀರಿದ ಉಪಮೆಗಳನ್ನು ಬಳಸಿಕೊಂಡು ಪ್ರೀತಿ ಪ್ರೇಮದ ಕುರಿತು ಕಾವ್ಯಗಳನ್ನು ರಚಿಸಿದ್ದಾರೆ. ಅವರ ಗುರು ನಿಜಮಾದ್ದೀನ್ ಔಲಿಯಾನ ಮೇಲೆ ಅಪಾರವಾದ ಗಾಢವಾದ ಸ್ನೇಹ ಒಡನಾಟ ಹೊಂದಿದ್ದ ಅಮೀರ್ ಖುಸ್ರೋ, ಆತ ತೀರಿಕೊಂಡ ಆರು ತಿಂಗಳಲ್ಲಿ ತಾನು ತೀರಿಕೊಂಡ. ಭಾರತೀಯ ಸಂಗೀತಕ್ಕೆ ಬಹಳ ದೊಡ್ಡ ಕೊಡುಗೆ ಕೊಟ್ಟ ವೈಬ್ರೆಂಟ್ ವ್ಯಕ್ತಿತ್ವ ಅಮೀರ್ ಖುಸ್ರೋದು ಎಂದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಕಲಾನಿಕಾಯದ ಡೀನ್ ಪ್ರೊ. ಅಬ್ದುಲ್ ರಬ್ ಉಸ್ತಾದ್ ಅವರು ಅಮೀರ್ ಖುಸ್ರೋ ಕಾವ್ಯಲೋಕ ಅನುವಾದ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಬೋಡೆ ರಿಯಾಜ್ ಅಹ್ಮದ್ ಅವರು ಈಗ ಅಮೀರ್ ಖುಸ್ರೋ ಕಾವ್ಯ ಲೋಕವನ್ನು ಅನುವಾದಗೊಳಿಸಿ, ವರ್ತಮಾನ ಮತ್ತೆ ಅಮೀರ್ ಖುಸ್ರೋ ನನ್ನು ಓದುವ ಹಸಿವನ್ನು ಹೆಚ್ಚಿಸಿದ್ದಾರೆ ಎಂದರು. ಯಾವುದೋ ಒಂದು ಭಾಷೆಯ ಕಾವ್ಯವನ್ನು ಇನ್ನೊಂದು ಭಾಷೆಗೆ ಅನುವಾದಿಸುವುದು, ಚಾರಿತ್ರಿಕ ಗ್ರಂಥವನ್ನು ಅನುವಾದಿಸುವಷ್ಟು ಸುಲಭಸಾಧ್ಯವಲ್ಲ. ಮೂಲ ಲೇಖಕನ ಭಾವಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ಕಾವ್ಯವನ್ನು ಅನುವಾದಿಸಿಬೇಕಾಗುತ್ತದೆ. ಉರ್ದು ಭಾಷೆಯಲ್ಲಿ ಮೊದಲ ಗಜಲ್ ರಚಿಸಿದವರು ಅಮೀರ್ ಖುಸ್ರೋ ಅವರು. ಅದನ್ನು ಬೋಡೆಯವರು ಇಲ್ಲಿ ಅನುವಾದಿಸಿದ್ದಾರೆ ಎಂದು ಹೇಳಿದರು.
ಅಮೀರ್ ಖುಸ್ರೋ ಪಾರ್ಸಿ ಅಲ್ಲದೇ ಅನ್ಯ ಭಾಷೆಗಳಲ್ಲೂ ಗಜಲ್ ಕಾವ್ಯ ರಚಿಸಿಬಹುದೆಂದು ತೋರಿಸಿಕೊಟ್ಟ ಮೊದಲ ಕವಿಮಾಗಿದ್ದರು. ಪ್ರಸ್ತುತ ಪಾರ್ಸಿ ಭಾಷೆಯನ್ನು ಓದುವುದು, ಅರ್ಥೈಸಿಕೊಳ್ಳುವುದೇ ಕಷ್ಟದ ಕೆಲಸವಾಗಿರುವಾಗ ಅದನ್ನು ಕನ್ನಡದಂತಹ ದ್ರಾವಿಡ ಭಾಷೆಗೆ ಅನುವಾದಿಸುವುದು ಇನ್ನಷ್ಟು ಕಠಿಣವಾದ ಕೆಲಸವೆನಿಸುತ್ತದೆ. ಬೋಡೆಯವರು ಅದನ್ನು ಈ ಅನುವಾದದ ಮೂಲಕ ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದರು.
ಸೂಫಿಗಳ ಮೇಲೆ ಸಂಶೋಧನೆಯನ್ನು ಕೈಗೊಂಡ ಡಾ. ಪರ್ವೀನ್ ಸುಲ್ತಾನಾ ಅವರು ಮಾತನಾಡುತ್ತಾ, ಅನುವಾದಿತ ಕವಿ ಬೋಡೆ ರಿಯಾಜ್ ಅಹ್ಮದ್ ಅವರ ವ್ಯಕ್ತಿತ್ವದ ಪರಿಚಯವನ್ನು ಹಾಗೂ ಸಾಹಿತ್ಯ ಲೋಕದಲ್ಲಿನ ಅವರ ಏಳಿಗೆಯ ಕುರಿತು ಮಾಹಿತಿಯನ್ನು ನೀಡಿದರು. ಈ ಲೋಕಕ್ಕೆ ಸೂಫಿಗಳ ಬಹಳ ದೊಡ್ಡ ಕೊಡುಗೆ ಎಂದರೆ ಸೌಹಾರ್ದತೆ. ಅದು ಈ ಹೊತ್ತಿನ ಜರೂರು ಎನಿಸಿದೆ ಎಂದರು.
ಅನುವಾದಿತ ಸಾಹಿತಿ ಬೋಡೆ ರಿಯಾಜ್ ಅಹ್ಮದ್ ಅವರು ಮಾತನಾಡಿ, ನಮಗೆ ಆಂಗ್ಲ ಭಾಷೆಯೊಂದಿಗೆ ಬಹುತೇಕ ಯುರೋಪಿಯನ್ ಸಾಹಿತ್ಯ ಕನ್ನಡದಲ್ಲಿ ಓದಲು ಸಿಗುತ್ತದೆ. ಆದರೆ ನಮ್ಮವರೇ ಆದ ಬಂದೇನವಾಝ್ ರ ಸಾಹಿತ್ಯದ ಬಗ್ಗೆಯಾಗಲಿ, ಅವರ ಕೃತಿಗಳಾಗಲಿ ನಮಗೆ ಪರಿಚಯವಿಲ್ಲವೆಂದು ಅವರು ತಮ್ಮ ಬೇಸರವನ್ನು ವ್ಯಕ್ತಪಡಿಸಿದರು. ಆ ಕೊರತೆಯ ನಿವಾರಣೆಗಾಗಿ ನಾನು ಈ ಅನುವಾದವನ್ನು ಕೈಗೆತ್ತಿಕೊಂಡೆ ಎಂದು ತಮ್ಮ ಬೆನ್ನ ಹಿಂದಿನ ಸಾಂಸ್ಕೃತಿಕ ಒತ್ತಡದ ಅನುಭವವನ್ನು ಹಂಚಿಕೊಂಡರು. ಈ ಕಾವ್ಯದಲ್ಲಿ, ಸೂಫಿ ಗುಣವೇ ಅಧಿಕವಾಗಿರುವುದರಿಂದ ನಾನು ಛಂದಸ್ಸಿಗೆ ಹೆಚ್ಚು ಒತ್ತು ಕೊಡದೇ ಕಾವ್ಯದ ಲಾಕ್ಷಣಿಕ ಅಂಶಗಳಿಗೆ ಹೆಚ್ಚು ಹತ್ತಿರದಲ್ಲಿರುವಂತೆ ಈ ಕಾವ್ಯವನ್ನು ಅನುವಾದಿಸಿದ್ದೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಎಚ್. ಟಿ. ಪೋತೆ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ವಚನ ಸೂಫಿ ತತ್ವಪದಗಳ ಕುರಿತು ಎಂ. ಎಂ. ಕಲ್ಬುರ್ಗಿಯವರ ಮಾದರಿಯಲ್ಲಿ ಕೆಲಸ ಮಾಡಿಸುವ ಮನಸ್ಸುಗಳ ಕೊರತೆ ಇದೆ. ಬೋಡೆ ಅವರು ಅದನ್ನು ಸ್ವಲ್ಪ ಪ್ರಮಾಣದಲ್ಲಿ ನೀಗಿಸುವ ಕೆಲಸವನ್ನು ಅನುವಾದದ ಮೂಲಕ ಮಾಡುತ್ತಿದ್ದಾರೆ ಎಂದರು.
ಅನುಭಾವಿಕ ಸಾಹಿತ್ಯ ಮತ್ತು ಭಾಷೆಗಳಿಗೂ ಶಿವದಾರ ಮತ್ತು ಜನಿವಾರ ಹಾಕಿದವರು ನಾವು. ಭಾರತಕ್ಕೆ ಬರುವ ಯಾವುದೇ ವಾದಗಳಿಗೂ ಈ ತಾಪತ್ರಯ ತಪ್ಪಿದ್ದಲ್ಲ ಎಂದರು. ನಮ್ಮಲ್ಲಿ ಪ್ರೀತಿ ಇದೆ, ಆದರೆ ಅದನ್ನು ಹಂಚುವವರ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಖುಸ್ರೋ ಸಾಹು ಮಹಾರಾಜ ಅಂಬೇಡ್ಕರ್ ಅಂಥವರ ಅಗತ್ಯ ವರ್ತಮಾನದ ಸಮಾಜಕ್ಕಿದೆ. ನಮ್ಮ ಸಮಾಜದಲ್ಲಿ, ಜಾತಿ ಜಾತಿಗಳ ನಡುವೆ, ಧರ್ಮ ಧರ್ಮಗಳ ನಡುವೆ ದೊಡ್ಡ ದೊಡ್ಡ ಕಂದಕಗಳನ್ನು ಸೃಷ್ಟಿಸುತ್ತಿರುವ ಮನಸ್ಸುಗಳನ್ನು ಅರಿಯುವ ಕೆಲಸ ಆಗಬೇಕಿದೆ ಎಂದರು.
ಡಾ. ಪ್ರಕಾಶ ಸಂಗಮ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಶಿವಶರಣಪ್ಪ ಕೊಡ್ಲಿ ಅವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅಪ್ಪಾರಾವ ಅಕ್ಕೋಣಿ, ಪಿ. ನಂದಪ್ಪ, ಡಿ.ಎಂ. ನದಾಫ, ಡಾ. ಸೂರ್ಯಕಾಂತ ಸುಜ್ಯಾತ್, ಡಾ. ಹನುಮಂತ ಮೇಲಕೇರಿ, ಕನ್ನಡ ವಿಭಾಗದ ಉಪನ್ಯಾಸಕ ವೃಂದದವರು ಭಾಗವಹಿಸಿದ್ದರು.


