ಕಲಬುರಗಿ: `ಬಾಬಾ ಸಾಹೇಬ ಅಂಬೇಡ್ಕರ್ ಅವರ ಆಶಯಗಳು ಇಂದಿನ ಮಕ್ಕಳಲ್ಲಿ ಚಿಗುರೊಡೆಯಬೇಕಾಗಿದೆ. ಅಂದಾಗ ಮಾತ್ರ ಬಾಬಾ ಸಾಹೇಬರ ಚಿಂತನೆಗಳನ್ನು ಮುಂದಿನ ತಲೆಮಾರಿಗೆ ದಾಟಿಸಲು ಸಾಧ್ಯ. ಇಂದು ಅಂಬೇಡ್ಕರ್ ಅವರ ಬಗ್ಗೆ ಚಿಂತನೆಗಳು ಅಧ್ಯಯನಗಳು ಹೆಚ್ಚಾಗಿವೆ. ಇದೀಗ ಅಂಬೇಡ್ಕರ್ ಭಾರತದ ಐಕಾನ್ ಆಗಿದ್ದಾರೆ’ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಎಸ್.ಪಿ. ಸುಳ್ಳದ ಅವರು ಅಭಿಪ್ರಾಯ ಪಟ್ಟರು.
ನಗರದ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ಮತ್ತು ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಹಯೋಗದ ಅಂಬೇಡ್ಕರ್ ವಿಚಾರ ವೇದಿಕೆಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಸುಳ್ಳದ ಅವರು ಬಾಬಾ ಸಾಹೇಬರ ಬಾಲ್ಯದ ದಿನಗಳ ಅನುಭವಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಬೇಕು, ಅಂತೆಯೇ ಅಂಬೇಡ್ಕರ್ ಅವರ ಚಿಂತನೆಗಳನ್ನು ಮಕ್ಕಳ ಮನಸ್ಸಲ್ಲಿ ಬಿತ್ತಬೇಕು ಎಂದರು. ವಿದ್ಯಾರ್ಥಿಗಳಾದ ಅಭಿಷೇಕ್, ರೋಹಿತ್, ಪ್ರತಿಭಾ, ನೇಹಾ, ಸೋಯಲ್, ಅಕ್ಷಯ್, ಶ್ರೇಯಸ್ ಅಂಬೇಡ್ಕರ್ ಅವರ ಬೇರೆ ಬೇರೆ ಕ್ಷೇತ್ರಗಳಿಗೆ ಕೊಟ್ಟ ಕೊಡುಗೆಯ ಬಗ್ಗೆ ಭಾಷಣಗಳನ್ನು ಮಾಡಿ ಎಲ್ಲರ ಗಮನಸೆಳೆದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆಪಿಇ ಸೊಸೈಟಿಯ ಆಡಳಿತಾಧಿಕಾರಿಗಳಾದ ಡಾ.ಚಂದ್ರಶೇಖರ್ ಶೀಲವಂತರ್ ಅವರು ಮಾತನಾಡಿ ಕಳೆದ ಮೂವತ್ತು ವರ್ಷದಿಂದ ಅಂಬೇಡ್ಕರ್ ವಿಚಾರ ವೇದಿಕೆಯು ಅಂಬೇಡ್ಕರ್ ಅವರ ವಿಚಾರಗಳನ್ನು ಎಲ್ಲಾ ಕಾಲೇಜುಗಳಿಗೆ ವಿಸ್ತರಿಸಲು ಹೇಗೆ ಶ್ರಮಿಸಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಆರಂಭಕ್ಕೆ ಅಂಬೇಡ್ಕರ್ ವಿಚಾರ ವೇದಿಕೆಯ ಸಂಚಾಲಕರಾದ ಡಾ.ಗಾಂಧೀಜಿ ಮೋಳೆಕರ್ ಅವರು ಈ ತನಕ ಅಂಬೇಡ್ಕರ್ ವಿಚಾರ ವೇದಿಕೆ ನಡೆದ ದಾರಿಯನ್ನು ಅವಲೋಕಿಸಿದರು. ಅಧ್ಯಾಪಕರಾದ ಡಾ.ಸುದರ್ಶನ್ ಮದನಕರ್ ಸ್ವಾಗತಿಸಿದರು. ಡಾ.ಅರುಣ್ ಜೋಳದಕೂಡ್ಲಿಗಿ ಅವರು ನಿರೂಪಿಸಿದರು. ಐಕ್ಯೂಎಸಿ ನಿರ್ದೇಶಕರಾದ ಡಾ. ಸಿದ್ದಾರ್ಥ ಮದನಕರ್ ಮತ್ತು ಪ್ರಭಾರಿ ಪ್ರಾಂಶುಪಾಲರಾದ ಡಾ.ಸಿದ್ದಪ್ಪ ಎಸ್. ಕಾಂತ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ನಿರ್ಮಲ ಸಿರಗಾಪುರ ಅವರು ವಂದಿಸಿದರು. ಕಾಲೇಜಿನ ಪ್ರಾಧ್ಯಾಪಕರುಗಳಾದ ಡಾ.ವಸಂತ ನಾಸಿ, ಡಾ. ಕರಿಬಸಪ್ಪ, ಡಾ.ದತ್ತೂರಾಯ, ಡಾ.ಶಿವಕುಮಾರ್, ಡಾ.ಹರ್ಷವರ್ಧನ್, ಪಂಡಿತ ಬಿ.ಕೆ, ಡಾ.ಕೌಶಲ್ಯ ಮೊದಲಾದವರು ಉಪಸ್ಥಿತರಿದ್ದರು.


