ಕಲಬುರಗಿ: ಅಫಜಲಪುರ ತಾಲೂಕಿನ ರೈತರು ನಿರಂತರ ಮಳೆಯ ತೊಂದರೆಯಿಂದ ಭಾರೀ ಹಾನಿಗೊಳಗಾಗಿದ್ದಾರೆ. ಈ ಹಾನಿಗೆ ತಕ್ಷಣ ಪರಿಹಾರ ನೀಡಬೇಕಾದ ಅವಶ್ಯಕತೆ ಇದ್ದರೂ, ಸ್ಥಳೀಯ ಆಡಳಿತ ಸಂಪೂರ್ಣವಾಗಿ ರೈತರ ಸಹಾಯಕ್ಕೆ ಬರುವದರಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಮುಖಂಡ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ನಿತಿನ್ ಗುತ್ತೇದಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಅಫಜಲಪುರ ತಾಲೂಕು ಬಿಜೆಪಿ ಘಟಕ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ರೈತರು ಸಂಪೂರ್ಣ ಬೆಳೆ ನಷ್ಟದಿಂದ ಗಂಭೀರ ಸಂಕಷ್ಟದಲ್ಲಿ ಇದ್ದಾರೆ. ಆದರೆ ಸ್ಥಳೀಯ ಆಡಳಿತ ಸಮಯಕ್ಕೆ ಸರಿಯಾಗಿ ಪರಿಹಾರ ವಿತರಿಸುವಲ್ಲಿ ವಿಫಲವಾಗಿದೆ. ಇದು ರೈತ ವಿರೋಧಿ ನಡೆಯಾಗಿದೆ ಎಂದು ದೂರಿದರು.
ಭಾಷಣಗಳಲ್ಲಿ ರೈತರ ಬಗ್ಗೆ ಅನುಕಂಪದ ಮಾತನಾಡುವ ಜನಪ್ರತಿನಿಧಿಗಳು ರೈತರು ಸಂಕಷ್ಟದಲ್ಲಿದ್ದಾಗ ಅವರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಡಳಿತ ಪಕ್ಷ ತಾಲೂಕಿನ ರೈತರ ಬೆಳೆ ಹಾನಿಯ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿತ್ತು. ಆದರೆ ರೈತರ ನೋವನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಅವರ ಸಂಕಷ್ಟ ಇನ್ನೂ ಹೆಚ್ಚಿಸಿದೆ ಎಂದು ಹೇಳಿದರು.
ಪ್ರಕೃತಿಯ ಆಪತ್ತಿನಿಂದ ಉಂಟಾದ ‘ತುರ್ತು ಕೃಷಿ ಸಂಕಷ್ಟ’ವನ್ನು ಸ್ಥಳೀಯ ನಾಯಕರು ಈಗಲಾದರೂ ಅರಿತು, ಎಚ್ಚೆತ್ತುಕೊಂಡು ತಾಲ್ಲೂಕಿನ ರೈತರ ನೋವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತರ ಬೇಡಿಕೆಗಳ ಮನವಿ ಪತ್ರವನ್ನು ಅಫಜಲಪುರ ತಾಲೂಕು ತಹಸಿಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ಸಂಜು ಕುಮಾರ್ ದಾಸರ್ ಮಾತನಾಡಿ, ಅಫಜಲ್ಪುರ ತಾಲೂಕಿನಲ್ಲಿ ನಡೆಸಲಾದ ಸಮೀಕ್ಷೆ ಪ್ರಕಾರ 204 ಮನೆ ಬಿದ್ದಿವೆ. 4 ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. ಸಾವಿರಾರು ರೈತರ ಜಮೀನುಗಳನ್ನು ಆಗಸ್ಟ್ ತಿಂಗಳಲ್ಲಿ ಸರ್ವೇ ಮಾಡಲಾಗಿದೆ, ಮತ್ತೆ ಸಪ್ಟೆಂಬರ್ ತಿಂಗಳಲ್ಲಿ ಕೂಡ ಸರ್ವೇ ಮುಂದುವರಿಯುತ್ತದೆ. ಆದಷ್ಟು ಬೇಗ ಸರ್ಕಾರಕ್ಕೆ ಸಮೀಕ್ಷೆಯ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಶ್ರೀದೇವಿ ಗುರಾರಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಅಶೋಕ್ ಬಗಲಿ, ಬಿಜೆಪಿ ಮುಖಂಡರಾದ ಅವ್ವಣ್ಣ ಮ್ಯಾಕೇರಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ್ ಪಾಟೀಲ್, ನಾಗೇಶ್ ಕೊಳ್ಳಿ, ಬೀರಣ್ಣ ಕನಕಟೇಲರ ಸುನಿಲ್, ಶೈಲೇಶ ಗುಣಾರಿ, ಶಿವಾನಂದ ಸಲಗರ, ಮಳೇಂದ್ರ ಡಾಂಗೆ, ಮಹೇಶ ದೊಡ್ಡಮನಿ, ಮಂಜು ಬಟಗೇರಿ, ಮಹಾಂತೇಶ ಬಳುoಡಗಿ, ವಿದ್ಯಾಧರ ಮಂಗಳೂರು, ಬಸವರಾಜ್ ಚಾಂದಕೋಟೆ, ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


