ಕಲಬುರಗಿ: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ – 2025 ಹಾಗೂ ಜಾತಿ ಗಣತಿ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಇಸ್ಲಾಂ, ಜಾತಿ ಕಾಲಂನಲ್ಲಿ ನದಾಫ್ ಅಥವಾ ಪಿಂಜಾರ ಎಂದು ನೋಂದಾಯಿಸಬೇಕು ಎಂದು ನದಾಫ್/ ಪಿಂಜಾರ ಸಂಘದ ಜಿಲ್ಲಾ ಉಪಾಧ್ಯಕ್ಷ, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಸದ್ದಾಮ್ ವಜೀರಗಾಂವ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಘೋಷಿಸಿದಂತೆ ಸೆಪ್ಟಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ನಡೆಯಲಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ನದಾಫ್, ಪಿಂಜಾರ ಸಮುದಾಯದವರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಇಸ್ಲಾಂ ಎಂದು ನಮೂದಿಸಿದರೆ ಜಾತಿ ಕಾಲಂ ನಲ್ಲಿ ಏನು ಬರೆಯಬೇಕು ಎನ್ನುವುದು ಗೊಂದಲ ಸೃಷ್ಟಿಯಾಗುತ್ತಿದೆ. ಹಾಗಾಗಿ ಈ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ನಿರ್ಣಯಿಸಿದಂತೆ ರಾಜ್ಯ ಮತ್ತು ಕೇಂದ್ರದಲ್ಲಿ ಪ್ರತ್ಯೇಕ ಮೀಸಲಾತಿ ಪಡೆಯುತ್ತಿರುವ 36 ಜಾತಿಗಳಲ್ಲಿ ಒಂದಾಗಿರುವ ಪಿಂಜಾರ ಹಾಗೂ ನದಾಫ್ ಸಮುದಾಯವನ್ನು ಜಾತಿ ಕಾಲಂನಲ್ಲಿ ನಮೂದಿಸಬೇಕೆಂದು ತೀರ್ಮಾನಿಸಲಾಗಿದೆ. ಹಾಗಾಗಿ ತಪ್ಪದೆ ಸಮುದಾಯದವರು 8ನೇ ಕಾಲಂನಲ್ಲಿ ಧರ್ಮ-ಇಸ್ಲಾಂ, 9 ನೇ ಕಾಲಂನಲ್ಲಿ ಜಾತಿ – ‘ನದಾಫ್’ ಅಥವಾ ‘ಪಿಂಜಾರ’ ಹಾಗೂ ಉಪ ಜಾತಿ ಕಾಲಂನಲ್ಲಿ ಖಾಲಿ ಬಿಡಬೇಕು. ಅಲ್ಲದೆ, ಈಗಲೂ ಕುಲಕಸುಬು ಮುಂದುವರೆಸುತ್ತಿದ್ದವರೂ ಹತ್ತಿ ಶುದ್ಧಗೊಳಿಸುವವರು ಎಂದು ನೋಂದಾಯಿಸಬೇಕು ಎಂದರು.
ಪಿಂಜಾರ ಸಮುದಾಯ ಸೇರಿದಂತೆ 36 ಜಾತಿಗಳು ಸರ್ಕಾರದನ್ವಯ ‘ಇಸ್ಲಾಂ’ ಧರ್ಮದ ಅಡಿಯಲ್ಲಿ ಬರುವುದರಿಂದ ಯಾವುದೇ ರೀತಿಯಲ್ಲಿ ಧಾರ್ಮಿಕ ವಿಚಾರವಾಗಿ ಹೊರಗೆ ಉಳಿಯುವದಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಮೌಲಾಲಿ ನದಾಫ್, ಮೆಹಮೂದ್ ನದಾಫ್, ವಾಹೀದ್ ನದಾಫ್ ಮತ್ತಿತರರು ಇದ್ದರು.


