ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಹಾಗೂ ಸಾಮಾಜಿಕ ಸೇವೆ ಮಾಡುವ ನನ್ನ ನಿಸ್ವಾರ್ಥದ ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಮಹತ್ವದ ಕಾರ್ಯಕ್ಕೆ ಮನ್ನಣೆ ನೀಡಿ, ‘ವರ್ಲ್ಡ ಬುಕ್ ಆಫ್ ರೆಕಾರ್ಡ್’ ಲಂಡನ ವತಿಯಿಂದ ಪ್ರಶಸ್ತಿ ಪಡೆದಿರುವುದು ಹೆಮ್ಮೆ ಅನಿಸುತ್ತಿದ್ದು ಈ ಪ್ರಶಸ್ತಿಯ ಶ್ರೇಯಶನ್ನು ನನ್ನ ಪಾಲಕರಿಗೆ, ಕಲ್ಯಾಣ ಕರ್ನಾಟಕ ಭಾಗದ ಸಮಸ್ತ ಜನರಿಗೆ ಹಾಗೂ ನಮ್ಮ ಆಸ್ಪತ್ರೆಯ ಪ್ರತಿಯೊಂದು ಸಿಬ್ಬಂದಿಗೆ ಸಲ್ಲುತ್ತದೆ ಎಂದು ಮಣ್ಣೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರಾದ ಡಾ. ಫಾರುಕ್ ಮಣ್ಣೂರ ಅವರು ಹೇಳಿದರು.
ಕಲಬುರಗಿ ನಗರದ ಪೂರ್ಣಾನಂದ ಫಂಕ್ಷನ್ ಹಾಲನಲ್ಲಿ ಇತ್ತೀಚೆಗೆ ಲಂಡನನಲ್ಲಿ ‘ವರ್ಲ್ಡ ಬುಕ್ ಆಫ್ ರೆಕಾರ್ಡ್’ ಲಂಡನ ವತಿಯಿಂದ ಪ್ರಶಸ್ತಿ ಪಡೆದ ಪ್ರಯುಕ್ತ ಡಾ. ಫಾರುಕ್ ಮಣ್ಣೂರ ಅವರ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ತಮ್ಮ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಒಂದು ಆಸ್ಪತ್ರೆ ಆರಂಭ ಮಾಡಬೇಕಾದರೆ ಅಷ್ಟೊಂದು ಸುಲಭದ ಮಾತಲ್ಲ, ನಾವು ರೋಗಿಗಳಿಗೆ ಅತ್ಯಾಧುನಿಕ ವೈದ್ಯಕೀಯ ಸವಲತ್ತುಗಳನ್ನು ನೀಡಿ ಉನ್ನತ ದರ್ಜೆಯ ಚಿಕಿತ್ಸೆಯನ್ನು ನೀಡುತ್ತಿರುವುದರಿಂದ ರೋಗಿಗಳು ನಮ್ಮ ಮೇಲೆ ಭರವಸೆಯನ್ನು ಇಟ್ಟು ತಮ್ಮ ಪ್ರಾಣವನ್ನು ನಮ್ಮ ಕೈಗೆ ಕೊಡುತ್ತಾರೆ. ಅವರ ಭರವಸೆಯೆ ನಮ್ಮ ಆಸ್ಪತ್ರೆಯ ಬೆಳಕಾಗಿ ಹೊರ ಹೊಮ್ಮಲು ಕಾರಣವಾಗಿದ್ದು ನಾನು ಇದ್ದಾಗ ಹೇಗೆ ಆಸ್ಪತ್ರೆ ಕಾರ್ಯ ನಿರ್ವಹಣೆ ನಡೆಯುತ್ತದೆಯೂ ಅದೇ ರೀತಿ ನಾನೂ ಇಲ್ಲದಿದ್ದರೂ ಅದೇ ರೀತಿಯಲ್ಲಿ ನಮ್ಮ ವೈದ್ಯರೂ ಹಾಗೂ ಸಿಬ್ಬಂದಿಗಳು ರೋಗಿಗಳ ಆರೈಕೆಯನ್ನು ಅತ್ಯುತ್ತಮ ರೀತಿಯಲ್ಲಿ ಮಾಡಿರವ ಪ್ರತಿಫಲವನ್ನು ನೀವು ಕಾಣಬಹುದು ಎಂದು ಶ್ಲಾಘಿಸಿದರು.
ಲಂಡನ್ ದೇಶದ ವೀಸಾ ಪಡೆಯುವುದು ಅಷ್ಟೊಂದು ಸುಲಭದ ಮಾತಲ್ಲ, ನಾನೂ ಆ ದೇಶದಲ್ಲಿ ಪ್ರಶಸ್ತಿ ಪಡೆದಿರುವುದು ನನಗೆ ಹೆಮ್ಮೆ ಅನಿಸಿದೆ. ನಮ್ಮ ರಾಷ್ಟ್ರ ಧ್ವಜವನ್ನು ಹಿಡಿದು ನಾನೂ ವಿದೇಶದಲ್ಲಿ ಭಾವುಕನಾಗಿದ್ದೆ. ಅಲ್ಲದೇ ವಿಶ್ವಗುರು ಬಸವಣ್ಣ ಅವರ ಪ್ರತಿಮೆಗೆ ಗೌರವ ನಮನ ಸಲ್ಲಿಸಿದಾಗ ನನಗೆ ಧನ್ಯತಾ ಭಾವ ಮೂಡಿತ್ತು. ನೀವೆಲ್ಲರೂ ನನ್ನ ಜೊತೆಯಲ್ಲಿ ಇದ್ದರೆ ನನ್ನ ಕನಸ್ಸು ನನಸ್ಸು ಮಾಡುವೇ, ಇದೇ ರೀತಿ ಜನರ ಬೆಂಬಲ ದೊರೆತರೆ ಸತ್ಯ ಸಾಯಿ ಆಸ್ಪತ್ರೆಯಂತೆ ನಾವು ಸಹ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತೇವೆ ಎಂದು ಭರವಸೆ ವ್ಯಕ್ತ ಪಡಿಸಿದರು.
ವೈದ್ಯಕೀಯ ವೃತ್ತಿಯೊಂದಿಗೆ ಜನ ಸೇವೆ ಮಾಡುವ ನನ್ನ ನಿಸ್ವಾರ್ಥದ ಕನಸ್ಸಿಗೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರೇರಣೆಯಾಗಿದ್ದು, ಅವರಂತೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ 650 ಬಡ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಸುಕನ್ಯಾ ಸಮೃದ್ಧಿ ಯೋಜನೆಯ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. 750ಕ್ಕೂ ಹೆಚ್ಚು ಟಿ.ಬಿ ರೋಗಿಗಳನ್ನು ದತ್ತು ಪಡೆದ ನಮ್ಮ ಆಸ್ಪತ್ರೆಯ ಸೇವೆಯನ್ನು ಪರಿಗಣಿಸಿ ಭಾರತ ಸರಕಾರ ಗೌರವ ನೀಡಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ನನ್ನ ಉದ್ದೇಶ ಇಷ್ಟೇ ನಮ್ಮ ಕೈಯಿಂದ ಒಬ್ಬರಿಗೆ ಸಹಾಯ ಮಾಡಿದರೆ ಸಾಕೂ ಅವರ ಕಷ್ಟಕ್ಕೆ ಸ್ಪಂದಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಅಹ್ಮರ ಇಸ್ಲಾಂ ಅವರು ಮಾತನಾಡಿ, ಡಾ. ಫಾರಯಕ್ ಮಣ್ಣೂರ ಅವರು ಕಡಿಮೆ ಅವಧಿಯಲ್ಲಿ ಅನೇಕ ಸಾಮಾಜಿಕ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ, ಆರೋಗ್ಯ ಕ್ಷೇತ್ರದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಕೂಡ ಬೇಳೆಯುತ್ತಿದ್ದಾರೆ. ಆದಕಾರಣ ಗವರ್ನರ್ ಹಾಗೂ ಲಂಡನನಲ್ಲಿ ‘ವರ್ಲ್ಡ ಬುಕ್ ಆಫ್ ರೆಕಾರ್ಡ್’ ಪ್ರಶಸ್ತಿ ಸಿಕ್ಕಿದೆ ಎಂದು ಹೇಳಿದರು.
ಕಲಬುರಗಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ ಮಾತನಾಡಿ, ಡಾ. ಫಾರುಕ್ ಮಣ್ಣೂರ ಅವರ ಸೇವೆ ಅಮೋಘವಾಗಿದ್ದು ಅವರು ನಮ್ಮ ಕ್ಷೇತ್ರದಲ್ಲಿ ಒಂದೂ ಹಳ್ಳಿ ಬಿಡದಂತೆ ಉಚಿತ ಆರೋಗ್ಯ ಶಿಬಿರಗಳನ್ನು ಮಾಡಿದ್ದಾರೆ. ಅವರು ಜನರ ಮೇಲೆ ಅಪಾರವಾದ ಕಾಳಜಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಡಾ. ಫಾರುಕ್ ಅವರು ರಾಜಕೀಯಕ್ಕೆ ಬಂದು ಮತ್ತಷ್ಟು ಜನಸೇವೆಯನ್ನು ಮಾಡಬೇಕು ಎಂಬ ಬಯಕೆ ನನ್ನದು ಹಾಗೂ ಅವರ ಅಭಿಮಾನಿ ಬಳಗದವರದ್ದಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಅಂಚೆ ಕಚೇರಿಯ ಎಸ್ಪಿ ಅಶೋಕ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಬಾಬುಮಿಯ್ಯ ಮಣ್ಣುರ, ಮೆಹೆಮೂದ ಚೌದರಿ, ಪೊಲೀಸ್ ಅಧಿಕಾರಿ ರೌಫ, ಸನ್ ರೈಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಸಲ್ಮಾನ್ ಪಟೇಲ್, ಶರಣಬಸಪ್ಪ ಖೇಣಿ, ಸಮೀರ ಬಾಗವಾನ , ಫಿರದೋಸ್ ಅನ್ಸಾರಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


