ಕಲಬುರಗಿ: ಕಲಬುರಗಿ ಮತ್ತು ಯಾದಗೀರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ರಾಮ ನಗರ(ಭಾಗ-2) ಸಂಜುನಗರ (ಭಾಗ -2), ಮೋನೆಶ್ವರ ನಗರ, ಶಶಿಧರ ನಗರ, ಮದನಪೂರ (ಭಾಗ-2) ತಪ್ಪಡಗೇರಾ, ಗಂಗಾನಗರ, ಅಘೋಶಿತ ಸ್ಲಂ ಗಳನ್ನು ಸ್ಲಂ ಕಾಯ್ದೆ 1975 ರ ಕಲಂ 3 ಪಿ ಅಡಿಯಲ್ಲಿ ಸ್ಲಂ ಎಂದು ಘೋಷಿಸಿ ಮೂಲಭೂತ ಸೌಲಭ್ಯ ಒದಗಿಸಬೇಕೆಂದು ಸ್ಲಂ ಜನಾಂದೋಲನ ಕರ್ನಾಟಕ, ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸ್ಲಂ ಘೋಷಣೆಗೆ 3 ವರ್ಷಗಳ ಕಾಲ ವಿಳಂಬ ನೀತಿ ಅನುಸರಿಸಿದ ಸ್ಲಂ ಬೋರ್ಡ್ ಅಧಿಕಾರಿಗಳಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರುಗಳಾದ ಶ್ರೀಧರ ಸಾರವಾಡ ಮತ್ತು ದೇವಿಂದ್ರಕುಮಾರ ಇವರುಗಳನ್ನು ಅಮಾನತ್ತು ಮಾಡಿ ಆದೇಶಿಸಬೇಕು ಎಂದು ಆಗ್ರಹಿಸಿದರು.
ಸ್ಲಂ ಗಳಲ್ಲಿ ಅಲೆಮಾರಿ ಜನಾಂಗ, ಎಸ್ ಸಿ ಜನಾಂಗದವರು ಹೆಚ್ಚು ವಾಸ ಮಾಡುತ್ತಿದ್ದಾರೆ, ಈ ಸ್ಲಂಗಳನ್ನು ಘೋಷಣೆ ಮಾಡಿ ನೀರು, ಚರಂಡಿ ಬೀದಿ ದೀಪ ಅಳವಡಿಕೆ, ರಸ್ತೆ ನಿರ್ಮಾಣ ಮತ್ತು ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಡಲು ಸುಮಾರು ಮೂರು ವರ್ಷಗಳಿಂದ ಹೋರಾಟದ ಮುಖಾಂತರ ಮನವಿ ನೀಡಿದರು ಕೂಡ ಸಹಾಯಕ ಕಾರ್ಯನಿರ್ವಾಹ ಅಭಿಯಂತರುಗಳು ಇವರೆಗೆ ಕ್ರಮ ಕೈಗೊಂಡಿಲ್ಲ, ಹಾಗಾಗಿ ಅಂತಹ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.
ಸಾಮಾಜಿಕ ನ್ಯಾಯದಡಿ ಸಂವಿಧಾನ ಬದ್ದ ಹಕ್ಕುಗಳಾದ ಅಘೋಷಿತ ಸ್ಲಂ ಗಳನ್ನು ಶೀಘ್ರದಲ್ಲಿ ಸ್ಲಂ ಎಂದು ಘೋಷಿಸಲು ಅಧಿಕಾರಿಗಳಿಗೆ ಆದೇಶಿಸಬೇಕು ಮತ್ತು ಸುಮಾರು ವರ್ಷಗಳಿಂದ ಸ್ಲಂ ಜನರಿಗೆ ಮೂಲಭೂತ ಸೌಲಭ್ಯಗಳಾದ ನೀರು ಚರಂಡಿ ಬೀದಿ ದೀಪ, ಮಹಿಳೆಯರಿಗೆ ಶೌಚಾಲಯಗಳನ್ನು ಒದಗಿಸದ ಸಹಾಯಕ ಕಾರ್ಯನಿರ್ವಾಕ ಅಭಿಯಂತರರನ್ನು ಕೂಡಲೆ ಅಮಾನತ್ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಹಣಮಂತ ಶಹಾಪೂರಕರ್, ಉಪಾಧ್ಯಕ್ಷೆ ದ್ಯಾನಮ್ಮ, ಸಂಚಾಲಕಿ ರೇಣುಕಾ ಸರಡಗಿ ಇದ್ದರು.


