ಕಲಬುರಗಿ: ಆಳಂದ ಪಟ್ಟಣದಲ್ಲಿ ಸೆ. 17ರಂದು ಹಮ್ಮಿಕೊಂಡಿರುವ ಭಾರತೀಯ ಜನತಾ ಪಕ್ಷದ ನೂತನ ಕಾರ್ಯಾಲಯ ಉದ್ಘಾಟನೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಶಿಕಾರಿಪುರದ ಶಾಸಕ ಬಿ ವೈ ವಿಜೇಯೇಂದ್ರ ಹಾಗೂ ವಿಧಾನ ಪರಿಷತ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಆಗಮಿಸಲಿದ್ದಾರೆ ಎಂದು ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ತಿಳಿಸಿದ್ದಾರೆ.
ರವಿವಾರ ಸ್ವಗೃಹದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಸೆ. 17ರಂದು ಆಳಂದ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಭಾರತೀಯ ಜನತಾ ಪಕ್ಷದ ಕಚೇರಿಯನ್ನು ಅಂದು ಮಧ್ಯಾಹ್ನ 3 ಗಂಟೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜೇಯೇಂದ್ರ ಉದ್ಘಾಟಿಸಲಿದ್ದಾರೆ. ನಂತರ ಸಾಯಂಕಾಲ ಆಳಂದ ಮಾಜಿ ಶಾಸಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ದಿ. ಅಣ್ಣಾರಾವ ವೀರಭದ್ರಪ್ಪ ಪಾಟೀಲ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಸಾಯಂಕಾಲ ಆಳಂದ ಪಟ್ಟಣದ ಶ್ರೀರಾಮ ಮಾರುಕಟ್ಟೆ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿಯ ದಶಮಾನೋತ್ಸವ ಹಾಗೂ ಬೃಹತ ಹಿಂದೂ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಲಿದ್ದಾರೆ. ಬೃಹತ ಹಿಂದೂ ಸಮಾವೇಶದಲ್ಲಿ ಗದಗನ ಜಗದ್ಗುರು ಸದಾಶಿವ ಮಹಾಸ್ವಾಮಿಗಳು ಆಶೀವರ್ಚನ ನೀಡಲಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯಕ್ತ ಭಾರತೀಯ ಜನತಾ ಪಕ್ಷ ಹಮ್ಮಿಕೊಂಡಿರುವ ಸೇವಾ ಪಕ್ಷದ ಅಂಗವಾಗಿ ಆಳಂದ ಪಕ್ಷದ ಕಾರ್ಯಾಲಯದಲ್ಲಿ ಉಚಿತ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬಸವೇಶ್ವರ ಆಸ್ಪತ್ರೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ ಇದರ ಲಾಭವನ್ನು ತಾಲೂಕಿನ ಜನತೆ ಪಡೆಯಬೇಕು. ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಮಳೆ ಸುರಿದು ಬೆಳೆ ಹಾಳಾಗಿರುವುದರಿಂದ ರಾಜ್ಯ ಸರ್ಕಾರ ಶೀಘ್ರ ಬೆಳೆ ಪರಿಹಾರವೆಂದು ಏಕರೆಗೆ 25 ಸಾವಿರ ಪರಿಹಾರ ನೀಡಬೇಕು. ಎರಡನೇ ಕಂತಿನ ಬೆಳೆ ವಿಮೆ ಹಣ ಕೂಡಲೇ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸಲು ರಾಜ್ಯ ಸಂಸದರ ಮೇಲೆ ಒತ್ತಡ ತರಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಭಗವಂತ ಖುಬಾ, ಮಾಜಿ ಸಂಸದ ಡಾ. ಉಮೇಶ ಜಾಧವ, ಮಾಜಿ ಸಚಿವ ಮುರುಗೇಶ ನಿರಾಣಿ, ಮಹಾರಾಷ್ಟ್ರದ ಮಾಜಿ ಸಚಿವ ಬಸವರಾಜ ಪಾಟೀಲ ಮುರುಮ, ಶಾಸಕರಾದ ಬಸವರಾಜ ಮತ್ತುಮೂಡ, ಡಾ. ಅವಿನಾಶ ಜಾಧವ, ಶರಣು ಸಲಗರ, ಪ್ರಭು ಚವ್ಹಾಣ, ಡಾ. ಸಿದ್ಧಲಿಂಗಪ್ಪ ಪಾಟೀಲ, ಅಕ್ಕಲಕೋಟ ಶಾಸಕ ಸಚಿನ ಕಲ್ಯಾಣಶೆಟ್ಟಿ, ಶಶೀಲ ನಮೋಶಿ, ಬಿ. ಜಿ. ಪಾಟೀಲ, ಸುನೀಲ ವಲ್ಯಾಪುರೆ, ಎಂ ಜಿ ಮುಳೆ, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ ತೆಲ್ಕೂರ, ದತ್ತಾತ್ರೇಯ ಪಾಟೀಲ ರೇವೂರ, ಪ್ರಕಾಶ ಖಂಡ್ರೆ, ವಿಧಾನ ಪರಿಷತ ಮಾಜಿ ಸದಸ್ಯರಾದ ಅಮರನಾಥ ಪಾಟೀಲ, ಜಿಲ್ಲಾ ಬಿಜೆಪಿ ಅಧ್ಯಕ್ಷ ಅಶೋಕ ಬಗಲಿ, ನಗರಾಧ್ಯಕ್ಷ ಚಂದು ಪಾಟೀಲ, ಬೀದರ ಅಧ್ಯಕ್ಷ ಸೋಮನಾಥ ಪಾಟೀಲ, ಜಿ.ಪಂ ಮಾಜಿ ಅಧ್ಯಕ್ಷ ನೀತಿನ ಗುತ್ತೇದಾರ, ಮುಖಂಡರಾದ ಶಿವರಾಜ ಪಾಟೀಲ ರದ್ದೇವಾಡಗಿ, ಈಶ್ವರಸಿಂಗ್ ಠಾಕೂರ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ತಾಲೂಕಿನ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ಪ್ರ. ಕಾರ್ಯದರ್ಶಿ ಪ್ರಕಾಶ ಮಾನೆ, ಪುರಸಭೆ ಸದಸ್ಯ ಸೋಮಶೇಖರ ಹತ್ತರಕಿ, ಶಿವಪುತ್ರ ನಡಗೇರಿ, ನಗರ ಅಧ್ಯಕ್ಷ ಬಸವರಾಜ ಹತ್ತರಕಿ, ಸುನೀಲ ಹಿರೋಳಿಕರ್ ಸೇರಿದಂತೆ ಇತರರು ಇದ್ದರು.


