ಕಲಬುರಗಿ: ಕಲ್ಯಾಣ ಕರ್ನಾಟಕದ ಮಹಿಳಾ ಸಬಲೀಕರಣಕ್ಕೆ ಶ್ರೀ ಶರಣಬಸವೇಶ್ವರ ಸಂಸ್ಥಾನದ ಕೊಡುಗೆ ಅಪಾರವಾಗಿದೆ ಎಂದು ಚಾಂದ ಬೀಬೀ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು ಡಾ. ಶರಬಯ್ಯ ಸ್ವಾಮಿ ಅವರು ಹೇಳಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಫ್ಯಾಕಲ್ಟಿ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಮತ್ತು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘ ಜಂಟಿಯಾಗಿ ಆಯೋಜಿಸಿದ ” ಮಹಿಳಾ ಯೋಧರು: ರಾಣಿ ಅಬ್ಬಕ್ಕ ಚೌಕ, ಕಿತ್ತೂರು ರಾಣಿ ಚೆನ್ನಮ್ಮ, ಮಹಾರಾಣಿ ಅಹಿಲ್ಯಬಾಯಿ ಹೋಳ್ಕರ್ ಮತ್ತು ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಮಹಿಳಾ ಸಬಲೀಕರಣಕ್ಕೆ ಕೊಡುಗೆಗಳು ” ಎಂಬ ವಿಷಯದ ಮೇಲೆ ನಡೆದ ಒಂದು ದಿನದ ವಿಚಾರ ಸಂಕಿರಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮುಂದುವರೆದು ಬ್ರಿಟಿಷರನ್ನು ಪ್ರತಿಭಟಿಸಿ ಹೋರಾಡಿದ ರಾಣಿ ಚೆನ್ನಮ್ಮ ವೀರ ಮಹಿಳೆಯರಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮ ಮೊದಲಿಗಳು. ಈ ತಾಯಿ ಕನ್ನಡ ನಾಡಿನ ಹೆಮ್ಮೆಯ ಸ್ವತ್ತು. ಭಾರತದ ವೀರ ಪುತ್ರಿ.ಚೆನ್ನಮ್ಮನ ನಿಷ್ಠೆ,ಧೈರ್ಯ, ಸಾಹಸಗಳು ತಲೆತಲಾಂತರದಿಂದ ಮೂಡಿಬಂದ ಕೆಚ್ಚೆದೆಯ ಕಾವ್ಯವಾಗಿವೆ.
ರಾಣಿ ಚೆನ್ನಮ್ಮನ ವಿಮರ್ಶಕ ಶಕ್ತಿ, ವಿವೇಚನೆಯ ನಿರ್ಣಯಗಳು, ಅಪರಿಮಿತ ಬುದ್ಧಿಶಕ್ತಿ, ಆಪತ್ಕಾಲದಲ್ಲಿನ ಧೈರ್ಯ, ರಣರಂಗದಲ್ಲಿನ ಸಾಹಸ ಹಿಂದಿನ ಯಾವ ಕುಶಲ ರಾಜತಾಂತ್ರಿಕನಿಗೂ ಕಡಿಮೆ ಎಂದೇನಿಸಲಿಲ್ಲ ಎಂದು ಡಾ. ಶರಬಯ ಸ್ವಾಮಿ ಅಭಿಪ್ರಾಯ ಪಟ್ಟರು.
ಮುಂದುವರೆದು ಶ್ರೀ ಶರಣಬಸವೇಶ್ವರ ಸಂಸ್ಥಾನ ಸ್ತ್ರೀ ಶಿಕ್ಷಣಕ್ಕೆ ಮಹಿಳೆಯರ ಶಿಕ್ಷಣದ ಉನ್ನತಿಗೆ ಪ್ರತ್ಯೇಕ ಕಾಲೇಜುಗಳನ್ನು ಪ್ರಾರಂಭಿಸಿ ಈ ಭಾಗದ ಹೆಣ್ಣು ಮಕ್ಕಳ ಜೀವನ ಸ್ತರವನ್ನು ಹೆಚ್ಚಿಸಲು ಅಪಾರ ಕೊಡುಗೆ ನೀಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೆಸ್ಕಾಂನ ಕಾರ್ಪೊರೇಟ್ ಆಫೀಸ್ ಅಸಿಸ್ಟೆಂಟ್ ಸುಪ್ರಿಯಾ ಪಾಟೀಲ್, ಮಹಿಳಾ ಯೋಧರಾದ ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ,ಅಹಿಲ್ಯಬಾಯಿ ಹೋಳ್ಕರ್, ಅವರ ಧೈರ್ಯ ಸಾಹಸಗಳನ್ನು ಮೆಲುಕು ಹಾಕಿದರು.
ಶ್ರೀ ಶರಣಬಸವ ಸಂಸ್ಥಾನ ಸ್ತ್ರೀಯರಿಗೆ ಉನ್ನತ ಸ್ಥಾನವನ್ನು ನೀಡಿ, ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ತಲೆತಲಾಂತರಗಳಿಂದ ಅದನ್ನು ಮುಂದುವರಿಸುತ್ತ ಬಂದಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಡೀನರಾದ ಡಾ. ಶಿವಕುಮಾರ್ ಜವಳಗಿ ವಹಿಸಿದರು. ಕಾರ್ಯಕ್ರಮದಲ್ಲಿ ಕೋ ಆರ್ಡಿನೇಟರ ಡಾ. ಶರಣ ಶೇಗದಾರ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸುಶೀಲ ಬಿಜಾಪುರೆ ನಿರೂಪಿಸಿದರು. ಕೋ ಆರ್ಡಿನೇಟರ್ ಡಾ.ಶಿವಕುಮಾರ ರಾಚೋಟಿಯವರು ವಂದಿಸಿದರು.


