ಕಲಬುರಗಿ: ಶುಕ್ರವಾರ ಸಂಜೆ ನಗರದ ಐತಿಹಾಸಿಕ ಕಲಬುರಗಿ ಕೋಟೆಯಲ್ಲಿ ಇದೇ ಪ್ರಥಮ ಬಾರಿಗೆ ಆಯೋಜಿಸಿದ “ಅನಂತರ” ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸ್ಥಳೀಯ ಯುವ ಪ್ರತಿಭೆಗಳ ಗಾಯನಕ್ಕೆ ಕಲಾ ಪ್ರೇಕ್ಷಕರು ತಲೆದೂಗಿದರು.
ಕಲಬುರಗಿ ಜಿಲ್ಲಾಡಳಿತದಿಂದ ಇದೇ ಪ್ರಥಮ ಬಾರಿಗೆ ಕೋಟೆಯ ಬಾರಾ ಗಜ್ ತೋಪಿನ ಅವರಣದಲ್ಲಿ ಪ್ರಾಯೋಗಿಕವಾಗಿ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಿತ್ತು.

ಸ್ವರ ಸಂಗೀತ ಮ್ಯೂಸಿಕ್ ಬ್ಯಾಂಡ್ ತಂಡದ ಯುವ ಗಾಯಕರಾದ ಪಾವನಾ ಮತ್ತು ಸೃಜನ್ ಅವರು “ಲಗ್ ಜಾ ಗಲೇಸೇ”, “ಏಕ್ ಪ್ಯಾರ್ ಕಾ ನಗ್ಮಾ ಹೈ, “ನಿನ್ನದೆ ನೆನಪು ದಿನವು ಮನದಲ್ಲಿ”, ಸುದೀಪ್ ಅಭಿನಯದ ಕಿಚ್ಚ ಚಿತ್ರದ “ಉಸಿರೇ ಉಸಿರೇ”, “ಒಲವೇ ನಿನ್ನೊಲವೇ”, “ಏ ರಾತೆ ಏ ಮೌಸಮ್ ನದಿಕಾ ಕಿನಾರಾ, “ಮುಂಜಾನೆ ಮಂಜಿನಲ್ಲಿ”,
“ಓ ಮೇರೆ ದಿಲ್ ಕೇ ಚೈನ್”, ಕೈಲಾಶ ಖೇರ್ ಹಾಡಿದ “ದಿವಾನಿ, ತೇರಿ ದಿವಾನಿ”ಅನೇಕ ಗೇತೆಗಳನ್ನು ಹಾಡಿದರು. “ಸಾಸೋ ಕೀ ಮಾಲಾ ಪೇ” ಭಜನ್ ಗೀತೆ, “ಕಾಲೇ ಕಾಲೇ ಜುಲ್ಫೋಸೆ ಬಂದೇ ಲಗಾಲೋ” ಸೂಫಿ ಹಾಡು ಹಾಡುವ ಮೂಲಕ ಭಾವೈಕ್ಯತೆಯ ಸಂಗೀತ ಸುಧೆ ಹರಿಸಿದರು. “ಗುಲಾಬಿ ಆಂಕೆ ಜೋ ತೇರಿ ದೇಕೆ” ಗಾಯನಕ್ಕಂತೂ ಮಕ್ಕಳು ಚಪ್ಪಾಳೆ, ಶಿಳ್ಳೆ ಹೊಡೆದು ಸಂಭ್ರಮಿಸಿದರು. ಪುಟ್ಟರಾಜ ಕೊಳಲು ನುಡಿಸಿದರೆ, ಶಿವಾನಂದ ಕೀಬೋರ್ಡ್ ನಿರ್ವಹಣೆ ಮಾಡಿದರು. ಮನೋಹರ ತಬಲಾ ನೋಡಿಕೊಂಡರೆ ಪ್ರಸಾದ ಡ್ರಮ್ ಬಾರಿಸಿ ಗಾಯನಕ್ಕೆ ಸಾತ್ ನೀಡಿದರು.
ಅಂಬಾ ಕ್ರಿಪಾ ನೃತ್ಯ ನಿಕೇತನ ತಂಡದಿಂದ ಕಲಾವಿದರು ಹಲವು ಅರೆ ಶಾಸ್ತ್ರೀಯ ಗೀತೆಗಳಿಗೆ ಸಮೂಹ ನೃತ್ಯ ಮಾಡಿ ಸಭಿಕರನ್ನು ರಂಜಿಸಿದರು. ಇನ್ನು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ಸಹ “ಗುಲಾಬಿ ಆಂಕೆ ಜೋ ತೇರಿ ದೇಕೆ” ಹಾಡಿ ಗಮನ ಸೆಳೆದರು.
ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಮಹಾನಗರ ಪಾಲಿಕೆ ಮೇಯರ್ ವರ್ಷಾ ರಾಜೀವ ಜಾನೆ, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಯಾದಗಿರಿ ಜಿಲ್ಲಾ ಪಂಚಾಯತ್ ಸಿ.ಇ.ಓ ಲವೀಶ್ ಒರಡಿಯಾ, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ತಹಶೀಲ್ದಾರ ಕೆ.ಆನಂದಶೀಲ ಸೇರಿದಂತೆ ಅನೇಕ ಅಧಿಕಾರಿಗಳು, ಸಾರ್ವಜನಿಕರು ಸಂಗೀತ ರಸಮಂಜರಿಗೆ ಸಾಕ್ಷಿಯಾದ್ದರು.


