ಕಲಬುರಗಿ: ಕಲ್ಲಿನಿಂದ ಜಜ್ಜಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸೇಡಂ ಪಟ್ಟಣದ ಉಡಗಿ ಕಮಾನ್ ಬಳಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಲಾರಿ ಮಾಲಿಕ ಎನ್ನಲಾಗುತ್ತಿರುವ ಸೇಡಂ ಪಟ್ಟಣದ ನಿವಾಸಿ ಶೇಖ್ ರಿಯಾಜ್ (45) ಕೊಲೆಯಾದ ದುರ್ದೈವಿ ಎಂದು ತಿಳಿದುಬಂದಿದೆ.
ಮೃತ ರಿಯಾಜ್ ಎಂಬಾತನು ಎರಡು ಮದುವೆಯಾಗಿದ್ದು, ತನ್ನ ಎರಡನೆಯ ಹೆಂಡತಿಯ ಜೊತೆಗೆ ಕೊಲೆ ಮಾಡಿರುವ ಆರೋಪಿ ಅನೈತಿಕವಾಗಿ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಲಾರಿ ಚಾಲಕ ರಿಯಾಜ್, ವಾಸವಧತ್ತಾ ಸಿಮೆಂಟ್ ಕಾರ್ಖಾನೆಯಿಂದ ಮನೆಗೆ ತೆರಳುವ ಸಮಯದಲ್ಲಿ ಜಗಳವಾಗಿ ಕೊನೆಗೆ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆಯಾದ ವ್ಯಕ್ತಿಯ ಮೃತದೇಹವನ್ನು ಶವ ಪರೀಕ್ಷೆಗೆ ರವಾನಿಸಲಾಗಿದ್ದು, ವಶಕ್ಕೆ ಪಡೆದ ಆರೋಪಿಯನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಸೇಡಂ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


