ಕಲಬುರಗಿ: ‘ಇಸ್ಲಾಂ ಧರ್ಮ ಹಾಗೂ ಲಿಂಗಾಯತ ಎರಡು ಒಂದೇ ಎಂದು ಹೇಳುವ ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿಗಳು, ಇಸ್ಲಾಂ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸಿಕೊಳ್ಳಲಿ’ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಗೌರವಾಧ್ಯಕ್ಷರಾದ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಅವರು ಸವಾಲು ಹಾಕಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಣೇಹಳ್ಳಿ ಸ್ವಾಮೀಜಿ ಇಸ್ಲಾಂ ಮತ್ತು ಲಿಂಗಾಯತ ಎರಡು ಒಂದೇ ಅಂತ ಹೇಳಿದ್ರಿ, ನಿಮಗೆ ವೀರಶೈವ ಮತ್ತು ಲಿಂಗಾಯತ ನಿಮಗೆ ಬೇಧ ಭಾವವಿದೆ. ಲಿಂಗಾಯತ ಅಂಥದ್ದನ್ನು ಇತರೆ ಧರ್ಮಗಳಿಗೆ ಬೆರೆಸಬೇಡಿ, ಅದರಲ್ಲಿ ಹಿಂದೂ ಹಾಗೂ ವೀರಶೈವದಲ್ಲಿ ಮೊದಲೇ ನಮೂದಿಸಬೇಡಿ ಎಂದು ಹೇಳುತ್ತಾರೆ. ಹಿಂದೂ ಧರ್ಮ ನಿಮಗೆ ಬೇಡವಾದರೆ ಇಸ್ಲಾಂ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸಿ ಎಂದು ತಿರುಗೇಟು ನೀಡಿದ್ದಾರೆ.
ವೀರಶೈವ ಲಿಂಗಾಯತ ಒಂದು ನಾಣ್ಯದ ಎರಡು ಮುಖಗಳು, ಆದರೆ ಕಾಂಗ್ರೆಸ್ ಕಂಪನಿಯಿಂದ ಈ ಸ್ವಾಮಿಗಳ ಮುಖಾಂತರ ಬೇಧ ಭಾವ ಮೂಡಿಸುತ್ತಿದ್ದಾರೆ. ಜಾತಿ ಕಾಲಂ ನಲ್ಲಿ ವೀರಶೈವ ಲಿಂಗಾಯತ ಎಂದು ನಮೂದಿಸಿ ಎಂದು ಹೇಳಿದ್ದೇವೆ. ರಾಜಕಾರಣಕ್ಕಾಗಿ ಹಿಂದೂ ಎಂದು ಬರೆಸಬೇಡಿ ಎಂದರೆ ನಾವು ಬಿಡಲ್ಲ ಎಂದರು.
ಜಾತಿ ಸಮೀಕ್ಷೆ ನಡೆಸುವ ಹೊಣೆ ರಾಜ್ಯ ಸರ್ಕಾರದ್ದು ಇಲ್ಲ, ಈ ಬಗ್ಗೆ ಸಮೀಕ್ಷೆ ಕೇಂದ್ರ ಸರ್ಕಾರ ಮಾಡುತ್ತದೆ. ಆದರೆ ಸುಮ್ಮನೆ ಸಮೀಕ್ಷೆ ನೆಪದಲ್ಲಿ ಹಿಂದೂ ಸಮಾಜವನ್ನು ಒಡೆಯುವ ಕುತಂತ್ರ ಸರ್ಕಾರ ಮಾಡುತ್ತಿದೆ. ಉಪಜಾತಿಗಳು ಲಿಂಗಾಯತ, ಕುರುಬ, ಮತ್ತಿತರ ಜಾತಿಗಳ ಹೇಳಿದರೆ ಅವುಗಳ ಮುಂದೆ ಕ್ರಿಶ್ಚಿಯನ್ ಎಂದು ನಮೂದಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದರೆ ಕೇವಲ ಕ್ರಿಶ್ಚಿಯನ್ ಅಂತ ಬರೆಯಬೇಕು, ಅದನ್ನ ಬಿಟ್ಟು ನಮ್ಮ ಧರ್ಮದ ಉಪಜಾತಿಗಳ ಜೊತೆಗೆ ಕ್ರಿಶ್ಚಿಯನ್ ಎಂದು ಬರೆಸಲು ಕ್ರಿಶ್ಚಿಯನ್ ಮಿಷನರಿಗಳು ಮಾಡುತ್ತಿವೆ. ಈ ಕೆಲಸ ಸರ್ಕಾರದ ಪ್ರಾಯೋಜಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ‘ಜಾತಿಗಳ ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ’ ಪ್ರಾರಂಭಿಸಿ ಹಿಂದೂ ಹಾಗೂ ವೀರಶೈವ ಲಿಂಗಾಯತ ಜಾತಿಗಳ ನಡುವೆ ಕ್ರೈಸ್ತರನ್ನು ನುಗ್ಗಿಸುವ ಹುನ್ನಾರ ನಡೆಸುತ್ತಿದೆ. ಇದನ್ನು ಕಲ್ಯಾಣ ಕರ್ನಾಟಕ ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆಯ ಎಲ್ಲ ಮಠಾಧೀಶರು ಖಂಡಿಸುತ್ತೇವೆ ಎಂದರು.
ಲಿಂಗಾಯತ ಸ್ವಾಮಿಗಳು ತಮ್ಮ ಮಠಗಳಲ್ಲೇ ವೈದಿಕ ಸಂಸ್ಕೃತಿ ಆಚರಿಸುತ್ತಾರೆ:
ಇದೇ ವೇಳೆಯಲ್ಲಿ ಮಾತನಾಡಿದ ದೇವಪುರದ ಶಿವಮೂರ್ತಿ ಶಿವಾಚಾರ್ಯರು, ಲಿಂಗಾಯತ ಸ್ವಾಮೀಜಿಗಳು ಎಂದು ಕರೆಯಿಸಿಕೊಳ್ಳುವ ಸ್ವಾಮಿಗಳು ಹಿಂದೂ ಸಂಪ್ರದಾಯದ ಎಲ್ಲ ಆಚರಣೆಗಳು ಮಾಡುತ್ತಾರೆ, ತಮ್ಮ ಮಠಗಳಲ್ಲಿ ಪಾದಪೂಜೆ, ರಥೋತ್ಸವ ಮಾಡುತ್ತಾರೆ, ಮಠದಲ್ಲಿ ಎಲ್ಲ ವೈದಿಕ ವಿಧಾನಗಳನ್ನು ಅನುಸರಿಸುತ್ತಾರೆ. ಲಿಂಗಾಯತ ಎನ್ನುವುದಾದರೆ ಸ್ವಾಮಿಗಳಿಗೆ ಮಠಗಳೇ ಇರುವುದಿಲ್ಲ. ಅಂತಹ ಸ್ವಾಮೀಜಿಗಳು ಇದ್ದರೆ ಮೊದಲು ಮಠಗಳನ್ನು ಬಿಟ್ಟು ಹೊರಗೆ ಬರಬೇಕಾಗುತ್ತದೆ ಎಂದು ಹೇಳಿದರು.
ವಿಭೂತಿ ಲಿಂಗಾಯತ ಸಂಸ್ಕೃತಿ ಇದೆ ಎನ್ನುತ್ತಾರೆ, ಇದು ಶಂಕರ ರಾಮಾನುಜಾಚಾರ್ಯರ ಕಾಲದಿಂದಲೂ ಇದೆ, ಜನರನ್ನು ದಿಕ್ಕು ತಪ್ಪಿಸಲು ಸರ್ಕಾರದಿಂದಲೇ ಅಭಿಯಾನ ಮಾಡುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ಸರಡಗಿಯ ರೇವಣಸಿದ್ಧ ಶಿವಾಚಾರ್ಯ, ರಾಜಶೇಖರ್ ಶಿವಾಚಾರ್ಯ, ಶಿವಶಂಕರ್ ಶಿವಾಚಾರ್ಯ, ಡಾ.ಸಿದ್ಧರಾಮ ಶಿವಾಚಾರ್ಯ, ಗುರುಮೂರ್ತಿ ಶಿವಾಚಾರ್ಯ, ಸಿದ್ಧ ರೇಣುಕ ಶಿವಾಚಾರ್ಯ, ಚೆನ್ನಾರುದ್ರಮುನಿ ಶಿವಾಚಾರ್ಯ, ಪಂಚಾಕ್ಷರಿ ಮಹಾಸ್ವಾಮಿ, ಶಂಭುಲಿಂಗ ಮಹಾಸ್ವಾಮೀಜಿ, ಸಿದ್ಧವೀರ ಶಿವಾಚಾರ್ಯ, ರೇವಣಸಿದ್ಧ ಸಾವಳೇಶ್ವರ ಶಿವಾಚಾರ್ಯ, ರಾಜಕುಮಾರ್ ಪಾಟೀಲ್ ತೆಲ್ಕೂರು, ಅರುಣಕುಮಾರ್ ಪಾಟೀಲ, ಕಲ್ಯಾಣಪ್ಪ ಪಾಟೀಲ್, ವೀರಣ್ಣ ಗೋಳೇದ ಸೇರಿದಂತೆ ಮತ್ತಿತರರು ಇದ್ದರು.


