ಕಲಬುರಗಿ: ಇತ್ತೀಚೆಗೆ ನಗರದ ಪೂಜಾರಿ ಚೌಕ್ ಸಮೀಪದಲ್ಲಿ ಎಟಿಎಂ ನಲ್ಲಿದ್ದ ಕೋಟ್ಯಾಂತರ ಹಣವನ್ನು ದರೋಡೆ ಮಾಡಿದ್ದ ಪ್ರಕರಣ ಮಾಡುವ ಮುನ್ನವೇ ಇದೀಗ ನಗರದಲ್ಲಿ ಮತ್ತೊಂದು ಭಯಾನಕ ದರೋಡೆ ನಡೆದಿದ್ದು, ಸಾರ್ವಜನಿಕರಿಗೆ ಬೆಚ್ಚಿಬೀಳುವಂತೆ ಮಾಡಿದೆ.
ನಗರದ ಸರಾಫ್ ಬಜಾರ್ ನಲ್ಲಿನ ಚಿನ್ನದ ಅಂಗಡಿಗೆ ನುಗ್ಗಿದ ನಾಲ್ವರು ಮುಸುಕು ದರೋಡೆಕೋರರು ಚಿನ್ನದ ಅಂಗಡಿಯ ಮಾಲೀಕನಿಗೆ ಗನ್ ತೋರಿಸಿ, ಕೈ ಕಾಲು ಕಟ್ಟಿ ಹಾಕಿ ಅಂಗಡಿಯಲ್ಲಿಟ್ಟಿದ್ದ ಲಕ್ಷಾಂತರ ಮೌಲ್ಯದ 2 ರಿಂದ 3 ಕೆ.ಜಿ ಚಿನ್ನಾಭರಣವನ್ನು ಲೂಟಿ ಮಾಡಿರುವ ಘಟನೆ ಹಾಡಹಗಲೇ ನಡೆದಿದೆ.
ನಗರದ ಸರಾಫ್ ಬಜಾರ್ನಲ್ಲಿನ ಮಾಲೀಕ್ ಜ್ಯುವೆಲ್ಲರ್ಸ್ ಎಂಬ ಚಿನ್ನದ ಅಂಗಡಿಯಲ್ಲಿ ದರೋಡೆ ನಡೆದಿದೆ.
ಶುಕ್ರವಾರ ಬೆಳಗ್ಗೆ 11.50 ರಿಂದ 12 ಗಂಟೆಯ ಒಳಗೆ ಚಿನ್ನದ ಅಂಗಡಿಯಲ್ಲಿ ಮಾಲೀಕರು ಕುಳಿತುಕೊಂಡಿದ್ದಾಗ ಅಲ್ಲಿಗೆ ಬಂದ ನಾಲ್ವರು ಮುಸುಕುಧಾರಿಗಳು ಹಾಗೂ ಕ್ಯಾಪ್ ಧರಿಸಿದ ದರೋಡೆಕೋರರು ಅಂಗಡಿಗೆ ನುಗ್ಗಿದ್ದು ಅಲ್ಲಿ ಮಾಲೀಕನಿಗೆ ಗನ್ ಪೈಂಟ್ನಿಂದ ಹೆದರಿಸಿ, ಕೈ ಕಾಲು ಕಟ್ಟಿ ಹಾಕಿದ ದರೋಡೆಕೋರರು ಅಂಗಡಿಯಲ್ಲಿಟ್ಟಿದ್ದ ಕೋಟ್ಯಂತರ ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಸಿನಿಮೀಯ ರೀತಿ ಪರಾರಿಯಾಗಿರುವ ಘಟನೆ ನಡೆದಿದೆ.
ಜನನೀಬಿಡ ಪ್ರದೇಶವಾಗಿರುವ ಸೂಪರ್ ಮಾರ್ಕೆಟ್ನಲ್ಲಿ ಈ ರೀತಿ ಹಾಡಹಗಲೇ ಭಯಾನಕ ರೀತಿಯಲ್ಲಿ ದರೋಡೆ ಮಾಡಲಾಗಿದೆ. ದರೋಡೆಕೋರರ ಕೃತ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈಗಾಗಲೇ ಪೊಲೀಸರು ಸಿಸಿ ಟಿವಿಯನ್ನು ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದರೋಡೆ ನಡೆಸಿದ ಸುದ್ದಿ ತಿಳಿದ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ, ಡಿಸಿಪಿ ಕನಿಕಾ ಸಿಕ್ರಿವಾಲ್, ಎಸಿಪಿ, ಪಿಐ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


