ಕಲಬುರಗಿ: ನಗರದ ಕಣ್ಣಿ ಮಾರುಕಟ್ಟೆ ವಾಣಿಜ್ಯ ಮಳಿಗೆಯ ಕನ್ನಡ ಫಲಕ ತೆಗೆಯುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಯ ವೇಳೆ ಲೋಕೋಪಯೋಗಿ ಎಂಜಿನಿಯರ್ ಅಮೀನ್ ಮುಕ್ತಾರ್ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗಂಗಾಧರ ಎಸ್.ಮಾಳಗಿ ಮೇಲೆ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಕಪ್ಪು ಮಸಿ ಬಳಿದಿರುವ ಪ್ರಕರಣಕ್ಕೆ ಸಂಬoಧಿಸಿದoತೆ ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ 20 ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಕಣ್ಣಿ ಮಾರುಕಟ್ಟೆ ಮಳಿಗೆಗೆ ಅಳವಡಿಸಿರುವ ಕನ್ನಡ ನಾಮಫಲಕ ತೆರವುಗೊಳಿಸುತ್ತಿರುವುದನ್ನು ಗಮನಿಸಿದ ಕರವೇ ಕಾರ್ಯಕರ್ತರು ದಿಢೀರನೇ ಕುಡಾ ಕಚೇರಿಗೆ ಆಗಮಿಸಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಎಸ್.ಮಾಳಗಿ ಮತ್ತು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅಮೀನ್ ಮುಕ್ತಾರ್ ಅವರಿಗೆ ಕಪ್ಪು ಮಸಿ ಬಳಿದು ಆಕ್ರೋಶ ಹೊರ ಹಾಕಿದರು.
ಈ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಸ್ಟೇಷನ್ ಬಜಾರ ಠಾಣೆಯ ಪೊಲೀಸರು ಈ ಪ್ರಕರಣಕ್ಕೆ ಸಂಬoಧಿಸಿದoತೆ ಸಂಘಟನೆಯ ಪ್ರಮುಖರಾದ ಆನಂದ ದೊಡ್ಡಮನಿ (32), ರವೀಂದ್ರ ಸರಡಗಿ (30), ರಾಜು ಮಠಪತಿ (25), ಪೃಥ್ವಿ (18), ಸಚಿನ ಲೋಕನಿ (25), ಶಾಹಿಲ ಚವ್ಹಾಣ್ (24), ಅಪ್ಪಾರಾವ ಕೆಟರಿ (38), ವಿಲಾಸ ರಾಠೋಡ (30), ಚೆನ್ನವೀರ ಬಿರಾದಾರ (24), ಪ್ರವೀಣ ಕಟ್ಟಿಮನಿ (35) ಮತ್ತು ಮೈತಾಬ್ (53) ಅವರನ್ನು ಬಂಧಿಸಿ, ಅವರ ವಿರುದ್ಧ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


