ಸ್ಕೌಟ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂಗ್ಲೆಂಡಿಗೆ ಐವರು ವಿದ್ಯಾರ್ಥಿಗಳು ಪ್ರವಾಸ

Date:

Share post:

ಕಲಬುರಗಿ: ಇಂಗ್ಲೆಂಡಿನ ಬ್ರಿಟೀಷ್ ಕೌನ್ಸಿಲ್ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಸಹಯೋಗದೊಂದಿಗೆ ಯೂನಿವರ್ಸಿಟಿ ಆಫ್ ಈಸ್ಟ್ ಲಂಡನ್‌ನಲ್ಲಿ ನಡೆಯುವ ಸ್ಕೌಟ್ (Scholar for outstanding undergraduate talent) ಕಾರ್ಯಕ್ರಮದಲ್ಲಿ ಭಾಗಿಯಾಗಲು ಗುಲಬರ್ಗಾ ವಿಶ್ವವಿದ್ಯಾಲಯದ ಐವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಇದೇ ನವೆಂಬರ್ 9 ರಂದು ಬೆಂಗಳೂರು ಮೂಲಕ 15 ದಿನಗಳ ಕಾಲ ಲಂಡನ್ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಗುಲಬರ್ಗಾ ವಿ.ವಿ. ಕುಲಪತಿ ಪ್ರೊ.ದಯಾನಂದ್ ಅಗಸರ್ ತಿಳಿಸಿದರು.

ವಿಶ್ವವಿದ್ಯಾಲಯದ ಕೈಲಾಶ್ ಅತಿಥಿಗೃಹದಲ್ಲಿ ಸುದ್ದಿಯಲ್ಲಿ ಮಾತನಾಡಿದ ಅವರು, ರಾಜ್ಯದ 31 ಸಾರ್ವಜನಿಕ ವಿ.ವಿ.ಗಳ ಪೈಕಿ ಗುಲಬರ್ಗಾ ವಿ.ವಿ., ರಾಯಚೂರು ವಿ.ವಿ., ತುಮಕೂರ ವಿ.ವಿ., ರಾಣಿ ಚನ್ನಮ್ಮ ವಿ.ವಿ., ಮೈಸೂರು ವಿ.ವಿ. ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ತಲಾ 5 ವಿದ್ಯಾರ್ಥಿಗಳು ಲಂಡನ್ ಪ್ರವಾಸ ಕೈಗೊಳ್ಳಲಿದ್ದಾರೆ. ಶೈಕ್ಷಣಿಕೆ ಚಟುವಟಿಕೆ ವಿನಿಮಯ, ಅಲ್ಲಿನ ಪದವಿ, ಸ್ನಾತಕ ಪದವಿ ಹಾಗೂ ಉನ್ನತ ಶಿಕ್ಷಣದ ಕಾರ್ಯಚಟುವಟಿಕೆ, ಪಠ್ಯ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿ ಕುರಿತು ಅರಿಯುವ ಕಾರ್ಯಕ್ರಮ ಇದಾಗಿದ್ದು, ಈ ಅವಧಿಯಲ್ಲಿ ಯೂನೈಟೆಡ್ ಕಿಂಗಡಮ್‌ನ ಪ್ರಸಿದ್ಧ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡಿ ನವೆಂಬರ್ 23 ರಂದು ಲಂಡನ್‌ದಿಂದ ಹಿಂತಿರುಗಲಿದ್ದಾರೆ ಎಂದರು.

ಕಲಬುರಗಿ ಜಿಲ್ಲೆಯ ಅಫಜಲಪೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ ಬಿ.ಕಾಂ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಪಾರ್ವತಿ ಮಳೇಂದ್ರ ಮತ್ತು ಬಿ.ಎ. 5ನೇ ಸೆಮಿಸ್ಟರ್ ವಿದ್ಯಾರ್ಥಿ ಬಂದೇನಮಾಜ್ ಜಮಾದಾರ್, ಕಾಳಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ ಬಿ.ಕಾಂ 5ನೇ ಸೆಮಿಸ್ಟರ್ ವಿದ್ಯಾರ್ಥಿನಿ ಕಾವೇರಿ ಅಶೋಕ, ಮಾದನಹಿಪ್ಪರಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ ಬಿ.ಎ 5ನೇ ಸೆಮಿಸ್ಟರ್ ವಿದ್ಯಾರ್ಥಿ ಭಾಗೇಶ್, ಕಾಳಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ ಬಿ.ಎಸ್ಸಿ 5ನೇ ಸೆಮಿಸ್ಟರ್ ವಿದ್ಯಾರ್ಥಿ ಅಮನ್ ಮಲ್ಲಿಕಾರ್ಜುನ ಅವರು ಲಂಡನ್ ಪ್ರವಾಸಕ್ಕೆ ಆಯ್ಕೆಯಾಗಿದ್ದು, ಇವರೊಂದಿಗೆ ವಿ.ವಿ.ಯ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ರಮೇಶ ಲಂಡನ್ಕರ್ ಇರಲಿದ್ದಾರೆ. ಇವರ ಪ್ರವಾಸದ ಸಂಪೂರ್ಣ ಖರ್ಚು ವೆಚ್ಚ ಬ್ರಿಟೀಷ್ ಕೌನ್ಸಿಲ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಹಾಗೂ ಗುಲಬರ್ಗಾ ವಿ.ವಿ. ಜಂಟಿಯಾಗಿ ಭರಿಸಲಿವೆ. ವಿದ್ಯಾರ್ಥಿಗಳು ಒಂದು ಪೈಸೆ ಹಣ ನೀಡಬೇಕಿಲ್ಲ ಎಂದು ಪ್ರೊ.ದಯಾನಂದ್ ಅಗಸರ್ ಸ್ಪಷ್ಟಪಡಿಸಿದರು.

ಈ ಹಿಂದೆ ಇಂತಹ ಅಂತರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಕಳೆದ ವರ್ಷ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳೇ ಪ್ರಯಾಣ ಮಾಡಿದ್ದರು. ಇತ್ತೀಚೆಗೆ ರಾಜ್ಯ ಸರ್ಕಾರ ವಿಶೇಷ ಆಸಕ್ತಿ ಮತ್ತು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಮುತುವರ್ಜಿ ಪರಿಣಾಮ ವಿಶೇಷವಾಗಿ ಗ್ರಾಮೀಣ ಭಾಗದ ಸರ್ಕಾರಿ ಕಾಲೇಜಿನ ಬಡ ಮಕ್ಕಳಿಗೆ ಇಂತಹ ಒಂದು ಅಪರೂಪದ ಅವಕಾಶ ಇದೀಗ ಸಿಕ್ಕಿದೆ. ವಿ.ವಿ. ವ್ಯಾಪ್ತಿಯ ಕಾಲೇಜಿನ ಟಾಪ್ 10 ವಿದ್ಯಾರ್ಥಿಗಳನ್ನು ಕರೆಸಿ ಮೆರಿಟ್ ಜೊತೆಗೆ ಸಂದರ್ಶನ ನಡೆಸಿ ಅವರ ಆಸಕ್ತಿಯನ್ನು ಪರಿಗಣಿಸಿಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. GulbargaUniversity

ಪತ್ರಿಕಾಗೋಷ್ಠಿಯಲ್ಲಿ ವಿ.ವಿ.ಯ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ. ರಮೇಶ ಲಂಡನ್ಕರ್, ವಿಶ್ವವಿದ್ಯಾಲಯದ ಅಂತರಾಷ್ಟ್ರೀಯ ಶೈಕ್ಷಣಿಕ ಚಟುವಟಿಕೆ ಅಧಿಕಾರಿ ಪ್ರೊ. ಆನಂದ ನಾಯ್ಕ್ ಸೇರಿದಂತೆ ಪ್ರವಾಸಕ್ಕೆ ಅಣಿಯಾಗಿರುವ ವಿದ್ಯಾರ್ಥಿಗಳಿದ್ದರು.

Share post:

spot_imgspot_img

Popular

More like this
Related

ಕಲಬುರಗಿ| ಜನಜಾಗೃತಿಯಿಂದ ಸಾಂಕ್ರಾಮಿಕ ರೋಗಗಳ ನಿರ್ಮೂಲನೆ ಸಾಧ್ಯ: ಡಾ.ಶರಬಸಪ್ಪ ಕ್ಯಾತನಾಳ

ಕಲಬುರಗಿ: ಸೊಳ್ಳೆಗಳಿಂದ ಹರಡುವಂತಹ ರೋಗಗಳಾದ ಡೆಂಗ್ಯೂ, ಚಿಕೂನ ಗುನ್ಯಾ, ಆನೆಕಾಲು ರೋಗ,...

ಕಲಬುರಗಿ| ಪರಿಸರ ಸ್ನೇಹಿ ಮಣ್ಣಿನ ಗಣಪ ಪ್ರತಿಷ್ಠಾಪಿಸಿ: ಜಿಲ್ಲಾಧಿಕಾರಿ ಬಿ.ಫೌಜಿಯಾ

ಕಲಬುರಗಿ: ಸೂಫಿ-ಸಂತರ ನಾಡು ಕಲಬುರಗಿ ಶಾಂತಿ-ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು, ಗಣೇಶ ಚತುರ್ಥಿ ಮತ್ತು...

ಕಲಬುರಗಿ| ಅತೀವೃಷ್ಟಿ ಪೀಡಿತ ಪ್ರದೇಶ ಘೋಷಿಸುವಂತೆ ಮಲ್ಲಿನಾಥ ನಾಗನಹಳ್ಳಿ ಆಗ್ರಹ

ಕಲಬುರಗಿ: ಕೋಟನೂರ್, ನಾಗನಹಳ್ಳಿ, ಉದನೂರು, ನಂದಿಕೂರ್, ಸೀತನೂರ್ ಹಾಗೂ ಕಲಬುರ್ಗಿ ದಕ್ಷಿಣ...

ಕಲಬುರಗಿ| ಮಳೆಯಿಂದ ಬೆಳೆ ನಷ್ಟ, ಬಾವಿಯಲ್ಲೇ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ರೈತ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ....