ಕಲಬುರಗಿ| ಬೇಸಿಗೆಯ ಸವಾಲುಗಳ ಎದುರಿಸಲು ಸಿದ್ಧ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್

Date:

Share post:

ಕಲಬುರಗಿ: ಕಲಬುರಗಿ ಜಿಲ್ಲಾಡಳಿತವು ಬೇಸಿಗೆಯ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸನ್ನದ್ಧವಾಗಿದ್ದು, ಸಾರ್ವಜನಿಕರು ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸಬೇಕೆಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಮನವಿ ಮಾಡಿದರು.

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಲಭ್ಯತೆ, ಮೇವಿನ ಸಂಗ್ರಹ ಮತ್ತು ಬೇಸಿಗೆಯ ಶಾಖದ ಅಲೆ ಎದುರಿಸುವ ಕುರಿತು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಜನವರಿ 01 ರಿಂದ ಮಾರ್ಚ್ 25, 2026 ರವರೆಗೆ ವಾಡಿಕೆ ಮಳೆಗಿಂತ (12.8 ಮಿ.ಮಿ) ಶೇ. 180% ರಷ್ಟು ಹೆಚ್ಚು ಅಂದರೆ ಒಟ್ಟು 35.9 ಮಿ.ಮಿ ಹೆಚ್ಚುವರಿ ಮಳೆಯಾಗಿರುತ್ತದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ ಯಾವುದೇ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸದ ಕಾರಣ, ಟ್ಯಾಂಕರ್ ನೀರು ಸರಬರಾಜಿಗೆ ಎಸ್ಡಿಆರ್ಎಫ್ (SDRF) ಅನುದಾನ ಲಭ್ಯವಿರುವುದಿಲ್ಲ ಎಂದು ತಿಳಿಸಿದರು.

ಮುಂಬರುವ ಬೇಸಿಗೆಗೆ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನ-ಜಾನುವಾರುಗಳಿಗಾಗಿ ಒಟ್ಟು 4 ಟಿ.ಎಂ.ಸಿ (TMC) ನೀರಿನ ಅವಶ್ಯಕತೆಯಿದ್ದು, ಈ ಪ್ರಮಾಣದ ನೀರನ್ನು ಕಾಯ್ದಿರಿಸಲು ನೀರಾವರಿ ಸಲಹಾ ಸಮಿತಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ ಅವರು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ವೆಚ್ಚವನ್ನು ಗ್ರಾಮ ಪಂಚಾಯತ್ನ 15ನೇ ಹಣಕಾಸು ಯೋಜನೆಯಡಿ ಭರಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯ ಪ್ರಮುಖ ಜಲಾಶಯಗಳಾದ ಅಮರ್ಜಾ (79.86%), ಬೆಣ್ಣೆತೋರಾ (80.99%), ಗಂಡೋರಿ ನಾಲಾ (75.94%) ಮತ್ತು ಕೆಳ ಮುಲ್ಲಾಮಾರಿ (77.53%) ಗಳಲ್ಲಿ ಉತ್ತಮ ನೀರಿನ ಸಂಗ್ರಹವಿದೆ. ಜಿಲ್ಲೆಯಲ್ಲಿ ಪ್ರಸ್ತುತ ಲಭ್ಯವಿರುವ ಮತ್ತು ಉತ್ಪಾದನೆಯಾಗಲಿರುವ ಮೇವು ಮುಂದಿನ 45 ವಾರಗಳವರೆಗೆ ಸಾಕಾಗುವಷ್ಟಿದೆ. ಹೀಗಾಗಿ ಜಿಲ್ಲೆಯಲ್ಲಿ ಮೇವಿನ ಕೊರತೆ ಇರುವುದಿಲ್ಲ ಎಂದರು.

ಶಾಖದ ಅಲೆ ಮುನ್ನೆಚ್ಚೆರಿಕೆ ಕ್ರಮವಾಗಿ ಜಿಲ್ಲಾ ಮಟ್ಟದಲ್ಲಿ ಶಾಖದ ಅಲೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಸಾರ್ವಜನಿಕರಿಗೆ ಕನ್ನಡದಲ್ಲಿ ಕೈಪಿಡಿ (IEC) ಮುದ್ರಿಸಿ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಬಿಸಿಲ ತಾಪದಿಂದ ರಕ್ಷಿಸಿಕೊಳ್ಳಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ (MGNREGA) ಯೋಜನೆಯ ಕೆಲಸದ ಅವಧಿಯನ್ನು ಬದಲಾಯಿಸಲು ಸೂಚಿಸಲಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಔಷಧಿಗಳು, ಓ.ಆರ್.ಎಸ್ (ORS) ಮತ್ತು ಐಸ್ ಪ್ಯಾಕ್ ಸೇರಿದಂತೆ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ಕಾಯ್ದಿರಿಸಲಾಗಿದೆ.

ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಸುಮಾರು 29.3 ಹೆಕ್ಟೇರ್ ತೋಟಗಾರಿಕಾ ಬೆಳೆ ಹಾನಿಯಾಗಿದ್ದು, 34 ರೈತರಿಗೆ ಒಟ್ಟು 6.015 ಲಕ್ಷ ರೂ.ಗಳ ಪರಿಹಾರ ಧನವನ್ನು ಅಂದಾಜಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಅವಿನಾಶ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಜಿಲ್ಲೆಯ ವಿವಿಧ ತಾಲ್ಲೂಕುಗಳ ತಹಸೀಲ್ದಾರರು ಉಪಸ್ಥಿತರಿದ್ದರು.

Share post:

spot_imgspot_img

Popular

More like this
Related

ಕಲಬುರಗಿ ನೂತನ ಜಿಲ್ಲಾಧಿಕಾರಿಯಾಗಿ ಇಕ್ರಮ್ ಶರೀಫ್ ಅಧಿಕಾರ ಸ್ವೀಕಾರ

ಕಲಬುರಗಿ: ಕಲಬುರಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಕರ್ನಾಟಕ ಕೇಡರಿನ 2016ನೇ ಬ್ಯಾಚಿನ...

ಸಿದ್ದು ಸಂಪುಟದ ಸಚಿವ ಡಿ. ಸುಧಾಕ‌ರ್ ಇನ್ನಿಲ್ಲ!

ಬೆಂಗಳೂರು: ಯೋಜನಾ ಮತ್ತು ಸಾoಖಿಕ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್...

ಕಲಬುರಗಿ ಕೋಟೆಯಲ್ಲಿ ಹರಿದ ಸಂಗೀತ ಸುಧೆ; ಗಾಯನಕ್ಕೆ ತಲೆದೂಗಿದ ಕಲಾ ಪ್ರೇಮಿಗಳು

ಕಲಬುರಗಿ: ಶುಕ್ರವಾರ ಸಂಜೆ ನಗರದ ಐತಿಹಾಸಿಕ ಕಲಬುರಗಿ ಕೋಟೆಯಲ್ಲಿ ಇದೇ ಪ್ರಥಮ...