ಕಲಬುರಗಿ: ಮಧ್ಯ ಪ್ರಾಚ್ಯ ದೇಶದಲ್ಲಿನ ಯುದ್ಧದ ಹಿನ್ನೆಲೆಯಲ್ಲಿ ಜನ ಆತಂಕಗೊಂಡು ಸಿಲಿಂಡಿರ್ ಬುಕ್ಕಿಂಗ್ ಮಾಡುತ್ತಿದ್ದು, ಇದನ್ನೆ ಬಂಡವಾಳ ಮಾಡಿಕೊಂಡು ಕಾಳ ಸಂತೆಯಲ್ಲಿ ಸಿಲಿಂಡಿರ್ ಮಾರಾಟ, ಅನಧಿಕೃತ ಫಿಲ್ಲಿಂಗ್ ಮಾಡಿದಲ್ಲಿ ಅಂತಹ ಏಜೆನ್ಸಿಗಳ ಪರವಾನಿಗೆ ರದ್ದುಪಡಿಸಿ ಅಗತ್ಯ ವಸ್ತುಗಳ ಕಾಯ್ದೆಯಡಿ ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಗ್ಯಾಸ್ ಏಜೆನ್ಸಿಗಳ ಮುಖ್ಯಸ್ಥರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಐ.ಓ.ಸಿ.ಎಲ್, ಹೆಚ್.ಪಿ.ಸಿ.ಎಲ್., ಬಿ.ಪಿ.ಸಿ.ಎಲ್ ಕಂಪನಿ ಅಧಿಕಾರಿಗಳು ಮತ್ತು ಡೀಲರ್ಗಳೊಂಡಿದೆ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ಸುರಕ್ಷತೆಯಲ್ಲಿ ಯಾವುದೇ ಲೋಪವಾಗದಂತೆ ಗ್ಯಾಸ್ ಏಜೆನ್ಸಿಗಳು ಕಾರ್ಯನಿರ್ವಹಿಸಬೇಕು. ಇನ್ನು ಫಿಫೋ (ಮೊದಲು ನೊಂದಾಯಿಸಿದವರಿಗೆ ಮೊದಲು ವಿಲೇವಾರಿ) ಮಾದರಿಯಲ್ಲಿ ಸಿಲಿಂಡರ್ ಸರಬರಾಜು ಮಾಡಬೇಕು ಎಂದರು.
ಜಿಲ್ಲೆಯ ಯಾವುದೇ ಆರೋಗ್ಯ ಸಂಸ್ಥೆಗಳಿಗೆ ಸಿಲಿಂಡಿರ್ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು. ವಿಶೇಷವಾಗಿ ಬಡವರಿಗೆ ರಿಯಾಯಿತ ದರದಲ್ಲಿ ಉಪಹಾರ-ಊಟ ನೀಡುವ ಇಮದಿರಾ ಕ್ಯಾಂಟಿನ್ ಗೂ ಗ್ಯಾಸ್ ಸಮಸ್ಯೆ ಆಗಕೂಡದು. ಸಿಲಿಂಡರ್ ಮಾರಾಟದ ಕುರಿತು ಪ್ರತಿ ನಿತ್ಯ ಆವಕ ಮತ್ತು ಜಾವಕದ ಕುರಿತು ಜಿಲ್ಲಾಡಳಿತಕ್ಕೆ ವರದಿ ನೀಡಬೇಕು. ಇನ್ನು ತಾಲೂಕಾವಾರು ಸಿಲಿಂಡರ್ ಗ್ಯಾಸ್ ಏಜೆನ್ಸಿಗಳ ಮೇಲೆ ತೀವ್ರ ನಿಗಾ ವಹಿಸಲು ಅಧಿಕಾರಿಗಳ ತಂಡ ಸಹ ರಚಿಸಲಾಗುತ್ತಿದೆ. ಅಗತ್ಯ ಪ್ರಮಾಣದಲ್ಲಿ ದಾಸ್ತಾನಿದ್ದರೂ ಜನ ಆತಂಕಗೊಂಡಿದ್ದು, ಇಂತಹ ಒಂದು ಬಿಕ್ಕಟ್ಟು ಪರಿಸ್ಥಿತಿಯಲ್ಲಿ ಗ್ಯಾಸ್ ಎಜೆನ್ಸಿಗಳು ಜಿಲ್ಲಾಡಳಿತದ ನಿರ್ದೇಶನ ಪಾಲಿಸುವ ಮೂಲಕ ಅಗತ್ಯ ಸಹಕಾರ ನೀಡಬೇಕು. ಇನ್ನು ಏಜೆನ್ಸಿಗಳು ಸಹ ಸಾರ್ವಜನಿಕರಿಗೆ ಸಿಲಿಂಡರ್ ಸಮಸ್ಯೆ ಇಲ್ಲ ಎಂಬುದನ್ನು ಖಾತ್ರಿಪಡಿಸಬೇಕು ಎಂದರು.
ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ ಮಾತನಾಡಿ, ಕೃತಕ ಸಿಲಿಂಡರ್ ಸಮಸ್ಯೆ ಸೃಷ್ಠಿ ಮಾಡಬಾರದು. ಅವಶ್ಯಕತೆ ಇದ್ದಲ್ಲಿ ಏಜೆನ್ಸಿ, ದಾಸ್ತಾನು ಘಟಕಗಳಿಗೆ ಪೊಲೀಸ್ ಭದ್ರತೆ ಸಹ ನೀಡಲಾಗುವುದು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದಲ್ಲಿ ಪೊಲೀಸರ ನೆರವು ಸಿಗಲಿದೆ ಎಂದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮಾತನಾಡಿ ಜಿಲ್ಲೆಯಾದ್ಯಂತ ಅಂಗನವಾಡಿ, ಶಾಲೆ, ವಸತಿ ಶಾಲೆ, ವಸತಿ ನಿಲಯಗಳಿಗೆ ಸಿಲಿಂಡರ್ ಸಮಸ್ಯೆಯಾಗದಂತೆ ಗ್ಯಾಸ್ ಏಜೆನ್ಸಿಗಳು ಎಚ್ಚರಿಕೆ ವಹಿಸಬೇಕು ಎಂದರು.
ಆಹಾರ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಮುನಾವರ್ ದೌಲಾ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 47 ಗ್ಯಾಸ್ ಡೀಲರ್ಗಳಿದ್ದು, ಇದರಲ್ಲಿ 3,26,674 ಸಿಂಗಲ್ ಸಿಲಿಂಡರ್ ಮತ್ತು 2,32,294 ಡಬಲ್ ಸಿಲಿಂಡರ್ ಗ್ರಾಹಕರಿದ್ದಾರೆ. ಇದಲ್ಲದೆ 10,372 ವಾಣಿಜ್ಯ ಸಿಲಿಂಡರ್ ಗ್ರಾಹಕರಿದ್ದು, 2,68,391 ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿದ್ದಾರೆ. ಪಿ.ಎಂ.ಉಜ್ವಲ್ ಯೋಜನೆಯ ಗ್ರಾಹಕರಿಗೆ 45 ದಿನಕ್ಕೆ ಮತ್ತು ಇತರೆ ಗ್ರಾಹಕರಿಗೆ ಸಿಲಿಂಡರ್ ಬುಕ್ ಮಾಡಲು ಹಿಂದಿನ ಡೆಲವರಿಗೆ ಕನಿಷ್ಠ 25 ದಿನ ಅಂತರವಿರಬೇಕು ಎಂದು ಸಭೆಗೆ ಮಾಹಿತಿ ನೀಡಿದಲ್ಲದೆ, ಮಂಗಳವಾರಕ್ಕೆ 12,709 ಗೃಹ ಬಳಕೆ ಸಿಲಿಂಡರ್ ಮತ್ತು 1,030 ವಾಣಿಜ್ಯ ಸಿಲಿಂಡರ್ ಜಿಲ್ಲೆಯಲ್ಲಿ ದಾಸ್ತಾನು ಇದ್ದು, ಯಾವುದೇ ಸಿಲಿಂಡರ್ ಸಮಸ್ಯೆ ಇಲ್ಲ ಎಂದು ವಿವರಿಸಿದರು.
ಸಿಲಿಂಡರ್ ಲಭ್ಯ,ಆತಂಕ ಬೇಡ:
ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಸಿಲಿಂಡರ್ ಕೊರತೆ ಇಲ್ಲ. ಪ್ರತಿನಿತ್ಯ ಬೇಡಿಕೆಗ್ಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಪನಿಗಳು ಸಿಲಿಂಡರ್ ಪೂರೈಸುತ್ತಿವೆ. ಸಾರ್ವಜನಿಕರು ಆತಂಕಗೊಳ್ಳಬಾರದು. 25 ದಿನ ಅವಧಿ ಮೀರಿದ ನಂತರವೇ ಸಿಲಿಂಡರ್ ಬುಕ್ ಮಾಡಬೇಕು. ಅನಗತ್ಯ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಮತ್ತು ಡೆಲಿವರಿ ಮಾಡುವ ಸಿಬ್ಬಂದಿಗಳಿಗೆ ತೊಂದರೆ ನೀಡಬಾರದೆಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಹೆಚ್ಚುವರಿ ಎಸ್.ಪಿ ಮಹೇಶ ಮೇಘಣ್ಣನವರ್, ಡಿ.ಎಚ್.ಓ. ಡಾ.ಶರಣಬಸಪ್ಪ ಕ್ಯಾತನಾಳ್, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿರ್ದೇಶಕ ರಫೀಕ್ ಲಾಡಜಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಐ.ಓ.ಸಿ.ಎಲ್, ಹೆಚ್.ಪಿ.ಸಿ.ಎಲ್., ಬಿ.ಪಿ.ಸಿ.ಎಲ್ ಕಂಪನಿ ಅಧಿಕಾರಿಗಳು ಮತ್ತು ಡೀಲರ್ಗಳು ಭಾಗವಹಿಸಿದ್ದರು.


