ಕಲಬುರಗಿ: ಪ್ರಸಕ್ತ 2025-26ನೇ ಶೈಕ್ಷಣಿಕ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ಇದೇ ಮಾರ್ಚ್ 18 ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಪರೀಕ್ಷೆ ಬೆಯಲು ಅಣಿಯಾಗಿರುವ ಜಿಲ್ಲೆಯ ವಿದ್ಯಾರ್ಥಿಗಳಿಗೆ ಬಹಿರಂಗ ಪತ್ರ ಬರೆದಿರುವ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು, ಈ ಪರೀಕ್ಷೆಯು ನಿಮ್ಮ ಮುಂದಿನ ಶಿಕ್ಷಣದ ದಿಕ್ಕನ್ನು ನಿರ್ಧರಿಸುವ ಪ್ರಮುಖ ಘಟ್ಟವಾಗಿದೆ. ಹೀಗಾಗಿ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಹೆಚ್ಚು ಅಂಕ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸುವಂತೆ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದಲ್ಲದೆ ಪರೀಕ್ಷೆಗೆ ಶುಭ ಕೋರಿದ್ದಾರೆ.
ಪರೀಕ್ಷೆಯು ಒತ್ತಡವಲ್ಲ, ಒಲವಿನ ಸಾಧನೆಗೆ ಸಂಭ್ರಮದ ಸದಾವಕಾಶ. ನಿಮ್ಮ ಪ್ರತಿಭೆಯ ಪ್ರಕಾಶಕ್ಕೆ, ಪರಿಶ್ರಮಕ್ಕೆ ಪ್ರತಿಫಲ ಪಡೆಯುವ ಪ್ರಯತ್ನವಷ್ಟೇ. ಭಯ ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ಪ್ರಶ್ನೆಪತ್ರಿಕೆ ಗಮನದಿಂದ ಓದಿ ಉತ್ತರಗಳನ್ನು ಸ್ಪಷ್ಟವಾಗಿ ಮತ್ತು ಸುಂದರವಾಗಿ ಬರೆಯಬೇಕು. ಸಮಯದ ಸದ್ವಿನಿಯೋಗ ಅತ್ಯಗತ್ಯ ಎಂದು ಒತ್ತಿ ಹೇಳಿರುವ ಅವರು, ಪರೀಕ್ಷೆ ಜೊತೆಗೆ ಈ ಅವಧಿಯಲ್ಲಿ ಆರೋಗ್ಯದ ಕಡೆ ಗಮನ ಸಹ ನೀಡಬೇಕು. ಸಮತೋಲನ ಆಹಾರ, ಅಗತ್ಯ ನಿದ್ರೆ, ಯಥೇಚ್ಚವಾಗಿ ನೀರು ಮತ್ತು ಹಣ್ಣುಗಳ ಸೇವೆನೆ ಹಾಗೂ ನಿಯಮಿತ ಅಭ್ಯಾಸ ಮಾಡುವಂತೆ ಸಲಹೆ ನೀಡಿದ್ದಾರೆ.
ಕನಸು ಕಾಣುವ ಧೈರ್ಯವುಳ್ಳ ನಿಮ್ಮಲ್ಲಿ ಅದನ್ನು ಸಾಧಿಸುವ ಶಕ್ತಿಯೂ ಇದೆ ಎಂಬುದನ್ನು ಮರೆಯದಿರಿ. ಯಾವುದೇ ಕಾರಣಕ್ಕೂ ನಿರಾಶೆ, ಹತಾಶೆಗೊಳಗಾಗದೆ ಪ್ರಾಮಾಣಿಕವಾಗಿ ಪ್ರಯತ್ನಿಸಿರಿ. ಪರಿಶ್ರಮದ ಬೆಳಕಿನಿಂದ ನಿಮ್ಮ ಜೀವನವನ್ನು ಪ್ರಕಾಶಮಾನವಾಗಿಸಿರಿ. ಗರಿಷ್ಠ ಫಲಿತಾಂಶ ಸಾಧಿಸಲು ಎಲ್ಲಾ ವಿಷಯಗಳಿಗೂ ಆದ್ಯತೆಯಿರಲಿ. ನಿಮ್ಮ ಸಾಧನೆ ನಿಮ್ಮ ಕುಟುಂಬದ ಹೆಮ್ಮೆ ಮಾತ್ರವಲ್ಲ; ಅದು ನಮ್ಮ ಜಿಲ್ಲೆಯ ಹೆಮ್ಮೆಯೂ ಆಗುತ್ತದೆ ಎಂದಿರುವ ಅವರು, ಈ ಬಾರಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಶಾಲಾ ಶಿಕ್ಷಣ ಇಲಾಖೆ ಅತ್ಯುತ್ತಮ ಕಾರ್ಯ ಯೋಜನೆಗಳನ್ನು ರೂಪಿಸಿ ಕಾರ್ಯ ರೂಪಕ್ಕೆ ತರಲಾಗಿದ್ದು, ಅದರ ಫಲಿತಾಂಶ ನಿಮ್ಮಿಂದ ನಿರೀಕ್ಷಿಸಲಾಗಿದೆ ಎಂದಿದ್ದಾರೆ.


