ಕಲಬುರಗಿ: ಮಾನಸಿಕ ಆಸ್ವಸ್ಥಗೊಂಡು ಹುಚ್ಚಿಯಂತೆ ಅಲೆದಾಡುತ್ತಿದ್ದ ಆಶಾ ಕಾರ್ಯಕರ್ತೆಯೊಬ್ಬರು ಪೊಲೀಸರ ನೆರವಿನಿಂದ ಪೋಷಕರ ಮನೆ ಸೇರಿದ ಘಟನೆ ವಾಡಿ ಪಟ್ಟಣದಲ್ಲಿ ರವಿವಾರ ನಡೆದಿದೆ.
ಕಳೆದ 2 ತಿಂಗಳ ಹಿಂದೆ ಸಮೀಪದ ಹಲಕರ್ಟಿ ಗ್ರಾಮಕ್ಕೆ ಬಂದಿದ್ದ ರಾಯಚೂರು ತಾಲ್ಲೂಕಿನ ಇಡಪಾನೂರು ಗ್ರಾಮದ ಮಾನಸಿಕ ಆಸ್ವಸ್ಥ ಮಹಿಳೆ ನರಸಮ್ಮ ಬಸ್ ಸ್ಟಾಂಡ್ ನಲ್ಲಿಯೇ ವಾಸವಾಗಿದ್ದಳು. ಸ್ಥಳೀಯರು ಅನ್ನ ನೀರು ಹಾಗೂ ಬಟ್ಟೆ ಒದಗಿಸಿದ್ದರು. ಆದರೆ ಶನಿವಾರ ರಾತ್ರಿ ಬಟ್ಟೆ ಹರಿದ ಸ್ಥಿತಿಯಲ್ಲಿ ಮಹಿಳೆ ಕಂಡು ಬಂದಿದ್ದರಿಂದ ಸ್ಥಳೀಯರು ಪೊಲೀಸ್ ಠಾಣೆಗೆ ವರದಿ ನೀಡಿದ್ದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಸಿಪಿಐ ಸಿದ್ದಬಸವನಗೌಡ ಪಿಎಸ್ಐ ತಿರುಮಲೇಶ ಕೆ. ಹಾಗೂ ರೇಣುಕಾ ಉಡಗಿ ಮಹಿಳೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಪೋಷಕರ ಪತ್ತೆಯಲ್ಲಿ ನಿರತರಾಗಿದ್ದರು.
ಇಡಪಾನೂರು ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಎಂದು ಗುರುತಿಸಿ ಪೋಷಕರ ಪತ್ತೆ ಹಚ್ಚಿ ಮಾಹಿತಿ ನೀಡಿದ್ದಾರೆ. ನಂತರ ತಡರಾತ್ರಿ ಠಾಣೆಗೆ ಬಂದ ಮಹಿಳೆಯ ಪೋಷಕರು ಮಹಿಳೆಯನ್ನು ಜತೆಯಲ್ಲಿ ಕರೆದುಕೊಂಡು ಹೋದರು.


