ಕಲಬುರಗಿ: ಗ್ರಾಮೀಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯ ಪಶು ವೈದ್ಯಕಿಯ ಆಸ್ಪತ್ರೆಗಳಲ್ಲಿ ಪಶು ವೈದ್ಯರಿಲ್ಲದೇ ಭಾರಿ ಸಮಸ್ಯೆ ಎದುರಿಸುವಂತಾಗಿದೆ. ಈ ವ್ಯಾಪ್ತಿಯ ಪಶು ಆಸ್ಪತ್ರೆಗಳಲ್ಲಿ ಇದ್ದ ವೈದ್ಯರಿಗೆ ಮೈಸೂರು ಭಾಗಕ್ಕೆ ವರ್ಗಾವಣೆ ಮಾಡಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಶಾಸಕ ಬಸವರಾಜ ಮತ್ತಿಮಡು ಆಗ್ರಹಿಸಿದರು.
ವಿಧಾನಸಭೆ ಬಜೆಟ್ ಅಧಿವೇಶನದಲ್ಲಿ ಸಮಸ್ಯೆಯ ಗಂಭೀರತೆ ಕುರಿತು ಸದನದ ಗಮನಕ್ಕೆ ತಂದ ಶಾಸಕ ಮತ್ತಿಮಡು, ಇರುವ ವೈದ್ಯರಿಗೆ ಪ್ರಭಾರಿ ವಹಿಸಲಾಗಿದೆ. ಪಶು ಸಂಗೋಪನೆಯಲ್ಲಿ ರೈತರು ತಮ್ಮ ಪಶುಗಳಿಗೆ ಸರಿಯಾದ ಚಿಕಿತ್ಸೆ ದೊರೆಯದೆ ಸಮಸ್ಯೆ ಎದುರಿಸಲಾಗುತ್ತಿದೆ ಎಂದು ಗಮನ ಸೆಳೆದರು.
ಶಾಸಕ ಪ್ರಶ್ನೆಗೆ ಉತ್ತರಿಸಿದ ಪಶು ಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ, ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ 64 ಸಾವಿರ ಜಾನುವಾರುಗಳಿದ್ದು, 13 ಆಸ್ಪತ್ರೆಗಳಿರಬೇಕು. ಆದರೆ 31 ಆಸ್ಪತ್ರೆಗಳಿವೆ. 17 ಪಶು ವೈದ್ಯರು, 53 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಬೇರೆ ಕಡೆ ಹೋಲಿಸಿದರೆ ವೈದ್ಯರಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವೈದ್ಯರನ್ನು ನೀಡಲು ಪ್ರಯತ್ನಿಸಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಮತ್ತಿಮಡು, ಗ್ರಾಮೀಣ ಕ್ಷೇತ್ರದಲ್ಲಿ ನಾಲ್ಕು ತಾಲೂಕು ಬರುತ್ತವೆ. ವಾಹನಗಳು ಎಲ್ಲಿ ಓಡಾಡುತ್ತವೆ ತಿಳಿಯುತ್ತಿಲ್ಲ. ಹಲವು ಆಸ್ಪತ್ರೆಗಳು ಮುಚ್ಚಿವೆ. ಪಶು ಆಸ್ಪತ್ರೆಗಳಲ್ಲಿ ವೈದ್ಯರೇ ಇರಲ್ಲ. ಪ್ರಭಾರಿ ವೈದ್ಯರುಗಳೇ ಇದ್ದಾರೆ ಎಂದು ಆಕ್ಷೇಪಿಸಿದರು. ಸಚಿವರು ಸಮಸ್ಯೆ ಬಗೆಹರಿಸುವುದಾಗಿ ಸಮಜಾಯಿಸಿ ನೀಡಿದರು.


