ಕಲಬುರಗಿ: ಪರಿಣಾಮಕಾರಿ ಸಂಶೋಧನೆ ನಡೆಸಲು ಸಂಶೋಧನಾ ವಿಧಾನಶಾಸ್ತ್ರದ ಸಮಗ್ರ ಜ್ಞಾನ ಅತ್ಯಗತ್ಯವಾಗಿದೆ ಎಂದು ಕೇಂದ್ರೀಯ ವಿವಿಯ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ಆಳಂದ ತಾಲೂಕಿನ ಕಡಗಂಚಿ ಸಮೀಪದ ಕೇಂದ್ರೀಯ ವಿವಿಯ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗವು ಆಯೋಜಿಸಲಿರುವ ಸಂಶೋಧನಾ ವಿಧಾನಶಾಸ್ತ್ರ ಕಾರ್ಯಾಗಾರದ ಕರಪತ್ರವನ್ನು ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.
ವಿದ್ವಾಂಸರ ಸಂಶೋಧನಾ ಕೌಶಲ್ಯವನ್ನು ಮತ್ತಷ್ಟು ಚುರುಕುಗೊಳಿಸಿ ನವೀಕರಿಸಲು ಈ ರೀತಿಯ ಕಾರ್ಯಾಗಾರಗಳನ್ನು ನಿರಂತರವಾಗಿ ಆಯೋಜಿಸುವ ಅಗತ್ಯವಿದೆ ಎಂದು ಅವರು ಹೇಳಿದರು. ಸಂಶೋಧನಾ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕೂಡ ಸಂಶೋಧನೆಗೆ ಹೊಸ ಆಯಾಮಗಳನ್ನು ನೀಡುತ್ತಿದೆ ಎಂದು ತಿಳಿಸಿದರು.
ಕಾರ್ಯಾಗಾರದ ನಿರ್ದೇಶಕ ಡಾ. ಲಿಂಗಮೂರ್ತಿ ಮಾತನಾಡಿ, ನವದೆಹಲಿ ಮೂಲದ ಐಸಿಎಸ್ಎಸ್ಆರ್ ಸಂಸ್ಥೆಯು ಈ ಕಾರ್ಯಾಗಾರವನ್ನು ಪ್ರಾಯೋಜಿಸಿದ್ದು, ಸಂಶೋಧನಾ ವಿದ್ವಾಂಸರ ಪ್ರಸ್ತುತ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಗಾರದ ಪಠ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ದೇಶದ ವಿವಿಧ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳ ತಜ್ಞರನ್ನು ಆಹ್ವಾನಿಸಲಾಗಿದ್ದು, ಕಾರ್ಯಾಗಾರವು ಮಾರ್ಚ್ 16ರಿಂದ ಮಾರ್ಚ್ 25ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಮುಖ್ಯಸ್ಥೆ ಡಾ. ಸುಮಾ ಸ್ಕೇರಿಯಾ, ಕಾರ್ಯಾಗಾರದ ಸಹ ನಿರ್ದೇಶಕ ಡಾ. ಮಲ್ಲೇಶ್ ಹಾಗೂ ಡಾ. ಬಸವರಾಜ ಎಂ.ಎಸ್ ಉಪಸ್ಥಿತರಿದ್ದರು.


