ಕಲಬುರಗಿ: ‘ಛಾಯಾಚಿತ್ರ ಕಲೆ ಯಂತ್ರ ಮುಖೇನ ಸೃಷ್ಟಿಯಾಗುತ್ತದೆ, ನಿಜ ಆದರೆ ಅದರ ಹಿಂದೆ ಸೃಜನಶೀಲ ಕಲಾವಿದನ ಮನಸ್ಸು ಇದ್ದರೆ ಅದು ಒಂದು ಸುಂದರ ಕಲಾಕೃತಿಯಾಗುತ್ತದೆ’ ಎಂದು ಜಿಲ್ಲಾ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ತೋಟದ ಹೇಳಿದರು.
ನಗರದ ಮಾನಕರ ಲೇಔಟ್ ನಲ್ಲಿರುವ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾದ ಹವ್ಯಾಸಿ ಛಾಯಾಗ್ರಾಹಕ ಉದಯಕುಮಾರ ಬಗಲಿ ಅವರ
ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿ ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ವೆಂಕಣ್ಣ ದೊಣ್ಣೆಗೌಡ ಅವರು, ‘ಛಾಯಾಚಿತ್ರಗಳು ಕಾಲದ ದಾಖಲೆಗಳಾಗಿ ಮಹತ್ವದ ಪಾತ್ರ ವಹಿಸುತ್ತವೆ, ನಿಸರ್ಗದಲ್ಲಿ ಎಲ್ಲವೂ ನಿರಂತರ ಬದಲಾವಣೆಯ ಪ್ರಕ್ರಿಯೆಗೆ ಒಳಗತ್ತಲೇ ಇರುತ್ತದೆ, ಆದರೆ ತಲೆಮಾರುಗಳು ಉರುಳಿದರೂ, ಕಾಲದ ಅಂತರದಲ್ಲಿ, ಸನ್ನಿವೇಶ ಸಂದರ್ಭಗಳಲ್ಲಿ ಬದಲಾದ ಸ್ಥಿತಿಗಳನ್ನು ಛಾಯಾಚಿತ್ರಗಳು ತೋರಿಸುತ್ತವೆ’ ಎಂದರು.
ಮುಂದುವರಿದು ‘ಸಾವಿರಾರು ಶಬ್ದಗಳಲ್ಲಿ ವರ್ಣಿಸಬಹುದಾದುದನ್ನು ಒಂದು ಛಾಯಾಚಿತ್ರ ನೋಟ ಒಂದರಲ್ಲೇ ಎಲ್ಲವನ್ನೂ ಅರಿವಿಗೆ ತಂದುಕೊಡುತ್ತದೆ’ ಎಂದರು.
‘ಛಾಯಾಚಿತ್ರಕಲೆಯಲ್ಲಿ ಸನ್ನಿವೇಶದ ಆಯ್ಕೆ, ನೆರಳು ಬೆಳಕಿನ ಹೊಯ್ ದಾಟ ಬಹಳ ಮುಖ್ಯವಾಗಿರುತ್ತದೆ’ ಎಂದು ಇನ್ನೋರ್ವ ಅತಿಥಿಯಾಗಿದ್ದ ಕಲಾವಿದ ಗುರುಲಿಂಗ ಅರಳಿ ಅಭಿಮತಪಟ್ಟರು.
ಬಿಸಿಲು ಆರ್ಟ್ ಗ್ಯಾಲರಿಯ ಕ್ಯೂರೇಟರ್ ಮತ್ತು ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದ ವಿ.ಬಿ ಬಿರಾದಾರ ಮಾತನಾಡಿದರು.
ಕಲಾವಿದ ಮಲ್ಲಿಕಾರ್ಜುನ ಕೊರಳ್ಳಿಯವರು ಕಾರ್ಯಕ್ರಮವನ್ನು ನಿರೂಪಿಸಿದರು, ಕಲಾವಿದ ರಾಜು ಕಾಳೆ ವಂದಿಸಿದರು.
ಕಲಾವಿದರಾದ ಸೂರ್ಯಕಾಂತ ನಂದೂರ, ದೌಲತರಾಯ ದೇಸಾಯಿ, ಜಿತೇಂದ್ರ ಕೊಥಲೀಕರ, ನಾರಾಯಣ ಜೋಶಿ, ಮೌನೇಶ್ ಬಡಿಗೇರ, ಗಿರೀಶ ಕುಲಕರ್ಣಿ, ಡಾ ಶಿವಾನಂದ ಬಂಟನೂರ, ಜಗದೀಶ್ ಕಾಂಬಳೆ, ವಿಜಯಕುಮಾರ, ಕುಪೇಂದ್ರ ಮೊದಲಾದ ಕಲಾವಿದರು ಉಪಸ್ಥಿತರಿದ್ದರು.


