ಕಲಬುರಗಿ: ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಹಿರಿಯ ಸಾಹಿತಿ ರೇವಣಸಿದ್ಧಪ್ಪ ದುಕಾನ ಅವರು ರಚಿಸಿದ “ಮುಂಗನಸು” ಕವನ ಸಂಕಲನದ ಜನಾರ್ಪಣೆ ಕಾರ್ಯಕ್ರಮ ರವಿವಾರ ಸಂಜೆ ನಗರದ ಕಲಾಮಂಡಳದಲ್ಲಿ ನೆರವೇರಿತು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ಅವರು ಕೃತಿಯನ್ನು ಜನಾರ್ಪಣೆಗೊಳಿಸಿದರು.
ಕೃತಿ ಕುರಿತು ಮಾತನಾಡಿದ ಶರಣಬಸವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಚಿದಾನಂದ ಚಿಕ್ಕಮಠ, “ಮುಂಗನಸು” ಕವನ ಸಂಕಲನವು ವರ್ತಮಾನದ ಹಲವು ತಲ್ಲಣಗಳನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ಕೃತಿಯಲ್ಲಿರುವ ಅನೇಕ ಕವಿತೆಗಳು ಇಂದಿನ ಕಲುಷಿತ ಪರಿಸರದ ಬಗ್ಗೆ ಕಳಕಳಿ ವ್ಯಕ್ತಪಡಿಸುವುದರ ಜೊತೆಗೆ ಸಾಮರಸ್ಯ, ಹಸಿವು, ಪ್ರೀತಿ, ತಂದೆ–ತಾಯಿ ಹಾಗೂ ಗುರುವಿನ ಆಶೀರ್ವಾದಗಳ ಮಹತ್ವವನ್ನು ಕವಿತೆಗಳ ಮೂಲಕ ಲೇಖಕರು ಅಭಿವ್ಯಕ್ತಿಸಿದ್ದಾರೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವಿಜಯಕುಮಾರ ಪರುತೆ ವಹಿಸಿದ್ದರು. ಮಡಿವಾಳಪ್ಪ ಹಣಮಗೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕರಾದ ಬಸವರಾಜ ಗೌನಳ್ಳಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಸಾಹಿತಿ ಮತ್ತು ಸಂಘಟಕರಾದ ಬಿ.ಎಚ್. ನಿರಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗುರುಪ್ರಸಾದ ದುಕಾನ ಸಭಿಕರನ್ನು ಸ್ವಾಗತಿಸಿದರು. ರೇವಣಸಿದ್ಧಯ್ಯ ನರನಾಳ ವಂದಿಸಿದರು. ಡಾ. ಶ್ವೇತಾ ಗುರುಪ್ರಸಾದ ದುಕಾನ ನಿರೂಪಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಡಾ. ಹಣಮಂತರಾವ ದೊಡ್ಡಮನಿ, ಡಾ. ಗವಿಸಿದ್ಧಪ್ಪ ಪಾಟೀಲ್, ಡಾ. ಟಿ. ಗುರುಬಸ್ಸಪ್ಪ, ಡಾ. ಕಾಶಿನಾಥ ಬಿರಾದಾರ, ಡಾ. ಎಸ್.ಎಸ್. ಗುಬ್ಬಿ, ಎಚ್.ಎಸ್. ಕೌಂಟೆ, ವಿಜಯಕುಮಾರ್ ಹಂಚಿನಾಳ, ಶ್ರೀಶೈಲ ಬೋನಾಳ, ಬಸವರಾಜ ಗಾಣೂರೆ, ರವೀಂದ್ರರೆಡ್ಡಿ, ಶ್ರೀಶೈಲ ಮದಾನೆ, ಡಾ. ನಾಗಪ್ಪ ಗೋಗಿ, ಸಿದ್ದರಾಮಯ್ಯಮಠ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.


