ಕಲಬುರಗಿ: ಚಿಂಚೋಳಿ ಪಟ್ಟಣದ ಬಸ್ ನಿಲ್ದಾಣದ ಸಮೀಪದಲ್ಲಿರುವ ಎರಡು ಮದ್ಯದಂಗಡಿಗಳ ಕೀಲಿ ಮುರಿದ ಕಳ್ಳರು 2.11 ಲಕ್ಷದಷ್ಟು ನಗದು ಕದ್ದು ಪರಾರಿಯಾಗಿರುವ ಘಟನೆ ಮಂಗಳವಾದ ನಸುಕಿನ ಜಾವದಲ್ಲಿ ನಡೆದಿದೆ.
ಬಸ್ ನಿಲ್ದಾಣದ ಪಕ್ಕದಲ್ಲಿರುವ ಎಸ್.ಆರ್. ಪಾಟೀಲ ಅವರಿಗೆ ಸೇರಿದ ಅಂಗಡಿಯಿಂದ ₹1.30 ಲಕ್ಷ, ಎಸ್ಬಿಐ ಬ್ಯಾಂಕ್ ಸಮೀಪದಲ್ಲಿರುವ ನಾಗಯ್ಯ ಕೋಟಕಿ ಅವರಿಗೆ ಸೇರಿದ ಮದ್ಯದ ಅಂಗಡಿಯಿಂದ 81 ಸಾವಿರ ನಗದು ಹಣ ಸೇರಿದಂತೆ ಒಟ್ಟಾರೆ 2.11 ಲಕ್ಷ ಕಳವು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಅಂಗಡಿಯ ಶಟರ್ ಎತ್ತುವ ನಾಲ್ವರು ಕಳ್ಳರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


