ಕಲಬುರಗಿ: ಪ್ರಜಾಪ್ರಭತ್ವದ ವ್ಯವಸ್ಥೆಯಲ್ಲಿ ಮತದಾನ ಬಹಳ ಅಮೂಲ್ಯವಾದುದು. ಹೀಗಾಗಿ ಮತವನ್ನು ಹಣಕ್ಕೆ ಮಾರಿಕೊಳ್ಳದೆ ಅರ್ಹರನ್ನು ಚುನಾಯಿಸಲು ಬುದ್ದಿವಂತಿಕೆಯಿಂದ ಮತ ಚಲಾಯಿಸಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಕಲಬುರಗಿ ಪೀಠದ ನ್ಯಾಯಧೀಶರಾದ ನ್ಯಾ. ಟಿ.ಎನ್. ಇನವಳ್ಳಿ ಹೇಳಿದರು.
ರವಿವಾರ ನಗರದ ಡಾ.ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಅಯೋಜಿಸಿದ ರಾಷ್ಟ್ರೀಯ ಮತದಾರರ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನಬದ್ದ ಹಕ್ಕಾಗಿರುವ ಮತದಾನ ಅರ್ಥ ತಿಳಿದುಕೊಂಡು ಮತ ಚಲಾಯಿಸಬೇಕು ಎಂದರು.
ತಂದೆ-ತಾಯಿ ಮತ್ತು ಗುರುಗಳು ಎಲ್ಲಿ ಸರಿಯಾಗಿಲ್ಚೋ ಅಲ್ಲಿ ಒಳೆಯ ಮತದಾರರು ಇರಲು ಸಾಧ್ಯವಿಲ್ಲ. ಬಹುತೇಕ ಪಾಲಕರು ಮಕ್ಕಳು ಡಾಕ್ಟರ್, ಇಂಜಿನಿಯರ್, ಐ.ಎ.ಎಸ್, ಐ.ಪಿ.ಎಸ್ ಅಧಿಕಾರಿಯಾಗಲಿ ಎಂಬುವುದು ಅವರ ಹೆಬ್ಬಯಕೆಯಾಗಿರುತ್ತದೆ. ಆದರೆ ಮಕ್ಕಳು ಒಳ್ಳೆಯ ಪ್ರಜೆಯಾಗಿ ಎನ್ನುವುದಿಲ್ಲ. ಇದು ಸಮಾಜಕ್ಕೆ ಮಾರಕವಾಗಿದೆ. ಪ್ರಜೆಗಳು ದೇಶದ ಪ್ರಾಣಧಾತು ಇದ್ದಂತೆ. ಚುನಾವಣೆಯಲ್ಲಿ ಮತದಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ದೇಶದ ಭವಿಷ್ಯ ಮತ್ತು ಮೌಲ್ಯ ನಿರ್ಣಯವಾಗುತ್ತದೆ ಎಂಬುದನ್ನು ಯಾರು ಮರೆಯಬಾರದು ಎಂದು ನ್ಯಾ. ಟಿ.ಎನ್.ಇನವಳ್ಳಿ ಒತ್ತಿ ಹೇಳಿದರು.
ಮತದಾನದಲ್ಲಿ ಹಳ್ಳಿಗರೆ ಮುಂದೆ:
ದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಪ್ರಮಾಣ ವೀಕ್ಷಿಸಿದಾಗ ಗ್ರಾಮೀಣ ಭಾಗದಲ್ಲಿ ವಾಸಿಸುವ ಹಳ್ಳಿಗರು, ಅನಕ್ಷರಸ್ಥರು, ಆದಿವಾಸಿಗಳೇ ಹೆಚ್ಚು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ನಗರವಾಸಿಗಳು ಮತದಾನಕ್ಕೆ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ಬಗುಪಾಲು ಜನ ಮತದಾನಚಲಾಯಿಸದೆ ಗೀದರೆ ಅಸಮರ್ಥರು ಆಯ್ಕೆಯಾಗುವ ಸಾಧ್ಯತೆ ಇರುತ್ತದೆ. ಸದೃಢ ಮತ್ತು ಬಲಿಷ್ಟ ಭಾರತಕ್ಕೆ ಪ್ರತಿಯೊಬ್ಬರು ಮತ ಚಲಾಯಿಸಬೇಕು ಎಂದು ನ್ಯಾ. ಟಿ.ಎನ್.ಇನವಳ್ಳಿ ಕರೆ ನೀಡಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಎನ್.ವಿ.ಡಿ ಲೋಗೊ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮತದಾರರಿಗೆ ಮತ ಚಲಾವಣೆಗೆ ಅನುಕೂಲವಾಗಲು 2,500 ಕ್ಕೂ ಹೆಚ್ಚು ಮತಗಟ್ಟೆಗಳು ಗುರುತಿಸಿ ಕನಿಷ್ಠ ಮೂಲಸೌಕರ್ಯ ಒದಗಿಸಿದ್ದೇವೆ.18 ವರ್ಷ ತುಂಬಿದ ಯುವಕ-ಯುವತಿಯರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮತ್ತು ಚುನಾವಣೆ ಸಂದರ್ಭದಲ್ಲಿ ಮತದಾರರು ನಿರ್ಭಯವಾಗಿ ಮತದಾನ ಮಾಡಲು ಅರಿವು ಮೂಡಿಸುವ ಕೆಲಸ ಜಿಲ್ಲಾಡಳಿತ ನಿರಂತರ ಮಾಡುತ್ತಿದೆ ಎಂದರು.
ಮತದಾನ ನಮ್ಮ ಹಕ್ಕು:
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಭಂವರ ಸಿಂಗ್ ಮೀನಾ ಮಾತನಾಡಿ, ಮತದಾನ ನಮ್ಮ ಹಕ್ಕು ಅದನ್ನು ಎಲ್ಲರು ತಪ್ಪದೆ ಚಲಾಯಿಸಬೇಕು. ಕಳದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಅನೇಕ ಉತ್ತಮ ಚುನಾವಣಾ ಪದ್ದತಿ ಅಳವಡಿಸಿಕೊಳ್ಳಲಾಗಿದೆ. ಮತಗಟ್ಟೆಯಲ್ಲಿ ಮತದಾರರಿಗೆ ಶೌಚಾಲಯ, ಕುಡಿಯುವ ನೀರು, ನೆರಳಿನ ವ್ಯವಸ್ಥೆ, ಅಂಗವಿಕಲರಿಗೆ ಹಾಗೂ ವೃದರಿಗೆ ಮತದಾನ ಮಾಡಲು ವಾಹನದ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ವೀಪ್ ಸಮಿತಿಯಿಂದ ಸಂಪೂರ್ಣ ಮತದಾನ ಪ್ರಕ್ರಿಯೆ ಬಗ್ಗೆಯೂ ತಿಳುವಳಿಕೆ ನೀಡಿದ್ದೇವೆ ಎಂದರು.
ಮತದಾರರ ಗರುತಿನ ಚೀಟಿ ವಿತರಣೆ:
ಇದೇ ಸಂದರ್ಭದಲ್ಲಿ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡ ಯುವ ಮತದಾರರಾದ ರೋತಿಕ ಮಹದೇವ್, ಪೂಜಾ ಹುಲಿಯಪ್ಪ , ವಿಜಯಲಕ್ಷ್ಮಿ , ವೀರೇಶ್ ಅವರಿಗೆ ನ್ಯಾಯಾಧೀಶರು ಸಾಂಕೇತಿಕವಾಗಿ ಚುನಾವಣಾ ಗುರುತಿನ ಚೀಟಿ (EPIC) ಕಾರ್ಡ್ ವಿತರಿಸಿದರು. ಇದಲ್ಲದೆ ರಾಷ್ಟ್ರೀಯ ಮತದಾರರ ದಿನಾಚರಣೆ ಹಿನ್ನೆಲೆಯಲ್ಲಿ ಅಯೋಜಿಸಿದ ವಿವಿಧ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ ಪದವಿ, ಸ್ನಾತಕೋತ್ತರ, ಪ್ರೌಢ ಶಾಲಾ ವರ್ಗದಿಂದ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು. ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅನೇಕ ಅಧಿಕಾರಿ-ಸಿಬ್ಬಂದಿಗಳನ್ನು, ವಿ.ಎಲ್.ಓ. ಗಳನ್ನು ಸಹ ಇಲ್ಲಿ ಸತ್ಕರಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಅವರು ಸರ್ವರಿಗೆ ಮತದಾರರ ಪ್ರತಿಜ್ಞೆ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕಿ ಶಂಕ್ರೆಮ ಡವಳಗಿ, ತಾಲೂಕು ಪಂಚಾಯತ್ ಇ.ಓ. ಸೈಯ್ಯದ್ ಪಟೇಲ್, ತಹಶೀಲ್ದಾರ ಕೆ.ಆನಂದಶೀಲ್, ಚುನಾವಣಾ ತಹಶೀಲ್ದಾರ ಪಂಪಯ್ಯ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ನೂರಾರು ಸಂಖ್ಯೆಯಲ್ಲಿ ಶಾಲಾ-ಕಾಲೇಜು ಮಕ್ಕಳು, ಸಾರ್ವಜನಿಕರು ಭಾಗವಹಿಸಿದ್ದರು.


