ಕಲಬುರಗಿ: ಸುಗಮ ಆಡಳಿತಕ್ಕಾಗಿ ಹೊಸ ತಾಲ್ಲೂಕುಗಳನ್ನು ಘೋಷಣೆ ಮಾಡಲಾಗಿದೆ. ಈ ಭಾಗದ ಪ್ರತಿ ಹೊಸ ತಾಲ್ಲೂಕಿಗೆ ಸಾರ್ವಜನಿಕರಿಗೆ ಸಹಾಯವಾಗುವಂತೆ ಸುಗಮ ಆಡಳಿತಕ್ಕಾಗಿ ಪ್ರಜಾಸೌಧಗಳನ್ನು ಕಟ್ಟಿಸಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕ ಡಾ.ಅಜಯ್ ಧರ್ಮಸಿಂಗ್ ಅವರು ಹೇಳಿದರು.
ಯಡ್ರಾಮಿಯಲ್ಲಿ ನಡೆದ ವಿವಿಧ ಅಡಿಗಲ್ಲು, ಶಂಕುಸ್ಥಾಪನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮದು ಸಗರನಾಡು, ಸೂಫಿ ಸಂತರ ಈ ನಾಡಿನಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ, ಇಲ್ಲಿ ಪ್ರಜಾಸೌಧ ಕಟ್ಟಲು ನಮ್ಮ ತಾಯಿ ಶ್ರೀಮತಿ ಧರ್ಮಸಿಂಗ್ ಅವರು ತಮ್ಮ 5 ಎಕ್ಕರೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ ಎಂದು ಸ್ಮರಿಸಿದರು.
ಶಿಕ್ಷಣ ಅತ್ಯಂತ ಪ್ರಭಾವಿಯಾಗಿದ್ದು, ಪ್ರಯತ್ನ ಪಟ್ಟವರು ಸೋಲಲು ಸಾಧ್ಯವಿಲ್ಲ, ಪ್ರತಿ ಗೆಲುವಿನ ಹಿಂದೆ ಶ್ರಮವಿರುತ್ತದೆ. ಈ ಭಾಗದ ಶಿಕ್ಷಣ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಈ ಭಾಗಕ್ಕೆ 300 ಕೆಪಿಎಸ್ ಶಾಲೆಗಳನ್ನು ನೀಡಲಾಗಿದೆ, ಹೆಚ್ಚಿನ ಅಭಿವೃದ್ಧಿಗಾಗಿ ಸಿಎಸ್ಸಾರ್ ಖಾಸಗಿ ಕಂಪನಿಗಳ ಧನಸಹಾಯ ಪಡೆಯಲಾಗುತ್ತಿದೆ, ನಮ್ಮ ಭಾಗದ ಮಲ್ಲಭ ಏತನೀರಾವರಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಯಡ್ರಾಮಿ ಪಟ್ಟಣದ ಕೆಲವು ಅಕ್ರಮ ಮನೆಗಳನ್ನು ಸಕ್ರಮಗೊಳಿಸಲು, ಡಿಗ್ರಿ ಕಾಲೇಜು ಸೇರಿದಂತೆ ಅವಶ್ಯವಿರುವ ಆಡಳಿತ ಕಚೇರಿಗಳ ಕಟ್ಟಡಗಳ ಅಭಿವೃದ್ಧಿಗೆ ಮನವಿ ಮಾಡಿದರು. 2026-27 ಸಾಲಿನ ರಾಜ್ಯ ಬಜೆಟ್ ನಲ್ಲಿ ಕನಿಷ್ಠ ಆರು ಸಾವಿರ ಕೋಟಿ ಅನುದಾನ ಕೆಕೆಆರ್ಡಿಬಿಗೆ ನೀಡಲು ಮಾನ್ಯ ಮುಖ್ಯಮಂತ್ರಿಗಳಲ್ಲಿ ಬೇಡಿಕೆ ಇಟ್ಟರು.
ಕಾರ್ಯಕ್ರಮದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಪ್ರಿಯಾಂಕ ಖರ್ಗೆ, ಕೃಷ್ಣಭೈರೇಗೌಡ, ಶರಣಬಸಪ್ಪ ದರ್ಶನಾಪುರ, ಶರಣ ಪ್ರಕಾಶ್ ಪಾಟೀಲ್, ಮಧು ಬಂಗಾರಪ್ಪ, ರಹೀಂ ಖಾನ್, ಜಿಲ್ಲೆಯ ಶಾಸಕರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


