ಕಲಬುರಗಿ: ಜೀಪ್ ಹಾಗೂ ಬಸ್ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕಲಬುರಗಿಯಿಂದ ಅಫಜಲಪುರ ಮಧ್ಯೆ ಇರುವ ಹಡಗಿಲ್ ಹಾರುತಿ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಜೀಪ್ ನಲ್ಲಿದ್ದ ಅಫಜಲಪುರ ತಾಲೂಕಿನ ತೆಲ್ಲೋಣಿ ಗ್ರಾಮದ ಚಂದ್ರಕಾಂತ, ಸುಲೋಚನಾ ಚಂದ್ರಕಾಂತ ಹಾಗೂ ಮಿಟ್ಟುಸಾಬ ರಸೂಲ್ ಪಟೇಲ್ ಎಂಬಾತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಬಸ್ ನಲ್ಲಿದ್ದ ಗುರುದೇವಿ, ವಿಜಯಲಕ್ಷ್ಮಿ ಹಾಗೂ ಶ್ರೀಶೈಲ ಎಂಬುವವರು ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಅವರನ್ನು ಕಲಬುರಗಿ ನಗರದಲ್ಲಿರುವ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಕಲಬುರಗಿಯಿಂದ ಅಫಜಲಪುರಕ್ಕೆ ಹೊರಟಿದ್ದ ಬಸ್ ಹಾಗೂ ಅಫಜಲಪುರದಿಂದ ಕಲಬುರಗಿಗೆ ಬರುತ್ತಿದ್ದ ಜೀಪ್ ನಡುವೆ ಅಪಘಾತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಕಲಬುರಗಿ ಮಹಾನಗರ ಸಂಚಾರ ವಿಭಾಗದ ಎಸಿಪಿ ಸುಧಾ ಆದಿ, ಟ್ರಾಫಿಕ್ 1 ಠಾಣೆಯ ಇನ್ಸೆಕ್ಟರ್ ಶಕೀಲ್ ಅಂಗಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಸಂಚಾರಿ ಪೊಲೀಸ್ ಠಾಣೆ 1 ರಲ್ಲಿ ಪ್ರಕರಣ ದಾಖಲಾಗಿದೆ.


