ಕಲಬುರಗಿ: ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾದ ಆರೆಸ್ಸೆಸ್ ಪಥ ಸಂಚಲನಕ್ಕೆ ಹೈಕೋರ್ಟ್ ನ.16 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5.30ರ ವರೆಗೆ ಪಥಸಂಚಲನ ಹಾಗೂ ಕಾರ್ಯಕ್ರಮಕ್ಕೆ ಷರತ್ತು ವಿಧಿಸಿ ಅನುಮತಿ ನೀಡಿರುವ ಹಿನ್ನೆಲೆ ಚಿತ್ತಾಪುರ ಪಟ್ಟಣದಲ್ಲಿ ರವಿವಾರ ಪೊಲೀಸರ ಸೂಕ್ತ ಬಂದೋಬಸ್ತ್ ಮಧ್ಯೆ ಪಥಸಂಚಲನ ನಡೆಯಲಿದೆ.
ರಾಜ್ಯಾದ್ಯಂತ ಸರ್ಕಾರಿ ಶಾಲಾ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ಸರ್ಕಾರ ನಿರ್ಬಂಧ ಹೇರಿರುವ ನಡುವೆ ಆರೆಸ್ಸೆಸ್ ಮುಖಂಡರು ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ತವರು ಕ್ಷೇತ್ರ ಚಿತ್ತಾಪುರದಲ್ಲಿ ನ.16 ರಂದು ಆರೆಸ್ಸೆಸ್ ಪಥಸಂಚಲನಕ್ಕೆ ಸರ್ವ ಸಿದ್ದತೆಗಳು ನಡೆದಿದ್ದು, ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ರಾಜ್ಯದಲ್ಲಿ ಸರ್ಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ನಿರ್ಬಂಧಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆ, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಅದೇ ರೀತಿ ಅ.19ರಂದು ನಡೆಯಬೇಕಿದ್ದ ಆರೆಸ್ಸೆಸ್ ಪಥಸಂಚಲನಕ್ಕೆ ಕಾನೂನು ಸುವ್ಯವಸ್ಥೆ ಕಾರಣ ನೀಡಿ ಚಿತ್ತಾಪುರ ತಾಲೂಕು ಆಡಳಿತ ಅನುಮತಿ ನಿರಾಕರಿಸಿತ್ತು.
ಇದನ್ನ ಪ್ರಶ್ನಿಸಿ ಆರೆಸ್ಸೆಸ್ ಮುಖಂಡರು ಹೈಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್ ನ.16 ರಂದು ಪಥ ಸಂಚಲನಕ್ಕೆ ಅವಕಾಶ ಕಲ್ಪಿಸಿಕೊಟ್ಟು 300 ಜನರಿಗೆ ಸಿಮಿತಗೊಳಿಸಿ, ಪಥಸಂಚಲನ ಹಾಗೂ ಕಾರ್ಯಕ್ರಮದಲ್ಲಿ 50 ಜನರಿಗೆ ಮಾತ್ರ ಬ್ಯಾಂಡ್’ನೊಂದಿಗೆ ಹಾಜರಾಗಲು ಅವಕಾಶ ಕಲ್ಪಿಸಿಕೊಟ್ಟಿದೆ.
ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಕೆ:
ನ.16ರಂದು ಚಿತ್ತಾಪುರ ಪಟ್ಟಣದಲ್ಲಿ ನಡೆಯಲಿರುವ ಪಥಸಂಚಲನ ನಿರ್ವಿಘ್ನವಾಗಿ ನಡೆಯಲು ಹಾಗೂ ಹದ್ದಿನ ಕಣ್ಣು ಇಡಲು ತಾಲೂಕು ಆಡಳಿತ ಮುಂದಾಗಿದೆ.
ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಮಾಡಿಕೊಡಬಾರದೆಂದು ತಿಳಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದಾರೆ. ಪಥ ಸಂಚಲನದ ಮಾರ್ಗದುದ್ದಕ್ಕೂ ಸಿಸಿಟಿವಿ ನಿಗಾ ವಹಿಸಲಿದ್ದು, ಸಣ್ಣ ಲೋಪಕ್ಕೂ ಅವಕಾಶ ನೀಡದಂತಾಗಿದೆ.
ಚಿತ್ತಾಪುರ ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಾರಂಭವಾಗುವ ಪಥ ಸಂಚಲನವು ಬಸ್ ನಿಲ್ದಾಣ ವೃತ್ತದ ಮೂಲಕ ಡಾ.ಅಂಬೇಡ್ಕರ್ ವೃತ್ತ, ಕೆನರಾ ಬ್ಯಾಂಕ್ ಬ್ಯಾಂಕ್ ಹಾಗೂ ತಾಪಂ ಮಾರ್ಗದ ರಸ್ತೆಯಲ್ಲಿ ಪಥ ಸಂಚಲನ ನಡೆಯಲಿದೆ.
ಪೊಲೀಸರಿಂದ ರೋಟ್ ಮಾರ್ಚ್
ಚಿತ್ತಾಪುರ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರ ಮಾರ್ಗದರ್ಶನದ ಮೇರೆಗೆ ಎಡಿಷನಲ್ ಎಸ್ಪಿ ಮಹೇಶ ಮೇಘಣ್ಣನವರ್, ಡಿವೈಎಸ್ಪಿ ಶಂಕರಗೌಡ ಪಾಟೀಲ್ ನೇತೃತ್ವದಲ್ಲಿ ಪೊಲೀಸರು ರೋಟ್ ಮಾರ್ಚ್ ನಡೆಸಿದರು.
ಪಟ್ಟಣದ ತಹಶೀಲ್ ಕಚೇರಿಯಿಂದ ಶುರುವಾದ ರೋಟ್ ಮಾರ್ಚ್ ತಾಪಂ ಕಚೇರಿ ವೃತ್ತ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ವೃತ್ತ, ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ, ಕಪಡಾ ಬಜಾರ್, ನಾಗಾವಿ ವೃತ್ತ, ಸ್ಟೇಷನ್ ರಸ್ತೆಯ ಮೂಲಕ ತಹಶೀಲ್ ಕಚೇರಿಗೆ ತಲುಪಿತು.
ಆರೆಸ್ಸೆಸ್ ಪಥಸಂಚಲನದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಇಲಾಖೆಯಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಎಸ್ಪಿ 1, ಡಿವೈಎಸ್ಪಿ 6, ಸಿಪಿಐ 18, ಪಿಎಸ್’ಐ 51, ಎ.ಎಸ್.ಐ 110, ಹೆಚ್.ಸಿ-ಪಿ.ಸಿ 501 ಸೇರಿದಂತೆ ಒಟ್ಟು 1 ಸಾವಿರ ಜನ ಪೊಲೀಸರನ್ನು ಸೂಕ್ತ್ ಬಂದೋಬಸ್ತ್’ಗೆ ನಿಯೋಜಿಸಲಾಗಿದೆ. ಅದೇ ರೀತಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ 52 ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
_ ಶಂಕರಗೌಡ ಪಾಟೀಲ್ (ಡಿವೈಎಸ್ಪಿ)


