ಕಲಬುರಗಿ: ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಕಲಾವಿದ ಡಾ. ರೆಹಮಾನ್ ಪಟೇಲ್ ಅವರ ಸಂಪಾದಕತ್ವದ ಈ ಭಾಗದ ಚಿತ್ರಕಲಾವಿದರ ಪರಿಚಯಾತ್ಮಕದ ದೃಶ್ಯಕಲಾ ಸಿರಿ ಕೃತಿ ಜನಾರ್ಪಣೆ ಸಮಾರಂಭವನ್ನು ಅಕ್ಟೋಬರ್ 11 ರ ಬೆಳಗ್ಗೆ 11.15 ಕ್ಕೆ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಏರ್ಪಡಿಸಲಾಗಿದೆ ಎಂದು ಕಸಾಪ ಜಿಲ್ಲಾ ಕಾರ್ಯದರ್ಶಿ ಧರ್ಮಣ್ಣ ಎಚ್. ಧನ್ನಿ ತಿಳಿಸಿದ್ದಾರೆ.
ಬೆರಳು ತುದಿಯಲ್ಲಿ ಅನಾವರಣಗೊಳ್ಳುವ ದೃಶ್ಯಕಲಾ ಸಾಹಿತ್ಯ ಇಂದು ತುಂಬಾ ವಿಶಿಷ್ಟವಾಗಿದೆ. ಸಾಹಿತ್ಯದ ಪ್ರಕಾರಗಳಲ್ಲಿ ಇದು ಕೂಡ ಒಂದಾಗಿದೆ. ಒಂದು ಚಿತ್ರ ಸಾವಿರ ಪದಗಳಿಗೆ ಸಮಾನವಾಗಿರುತ್ತದೆ. ಕವಿ ತನಗೆ ಕಂಡಿದ್ದನ್ನು ಕಾವ್ಯವಾಗಿಸಬಲ್ಲ. ಆದರೆ ಚಿತ್ರಕಲಾವಿದನು ದೃಶ್ಯವನ್ನೇ ಅನಾವರಣಗೊಳಿಸಬಲ್ಲ. ಇಂಥ ಪ್ರಬುದ್ಧತೆ ಕಲಾವಿದರಿಗೆ ಇರುತ್ತದೆ. ಹೀಗಾಗಿ ಈ ಭಾಗದ ಚಿತ್ರಕಲಾ ಜಗತ್ತಿನ ದಿಗ್ಗಜರನ್ನು ಇಂದಿನ ಹೊಸ ಪೀಳಿಗೆಗೆ ಪರಿಚಯಿಸುವ ಕೃತಿ ಇದಾಗಿದೆ.
ಕರ್ನಾಟಕ ಮಾಹಿತಿ ಆಯೋಗದ ಆಯುಕ್ತರಾದ ಬದ್ರುದ್ದೀನ್ ಕೆ. ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಆರ್.ಆರ್. ಬಿರಾದಾರ ಕೃತಿ ಜನಾರ್ಪಣೆ ಮಾಡಲಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ನಾಡೋಜ ಡಾ. ಜೆ.ಎಸ್. ಖಂಡೇರಾವ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ವಿಶ್ವಖ್ಯಾತಿಯ ಚಿತ್ರಕಲಾವಿದ ಮಹ್ಮದ್ ಅಯಾಜೋದ್ದೀನ್ ಪಟೇಲ ಕೃತಿ ಪರಿಚಯಿಸುವರು. ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ.
ಕೃತಿ ಜನಾರ್ಪಣೆ ಸಂದರ್ಭದಲ್ಲಿ ಪರಿಚಯಿಸಲ್ಪಟ್ಟ ಚಿತ್ರಕಲಾವಿದರು ಹಾಗೂ ಕಲಾವಿದರನ್ನು ಪರಿಚಯಿಸಿದ ಕಲಾವಿದರ ಚಿತ್ರಕಲಾ ಪ್ರದರ್ಶನವೂ ಸಹ ಏರ್ಪಡಿಸಲಾಗಿದೆ.


