ಕಲಬುರಗಿ| ನೆರೆ ಹಾವಳಿ ಹಿನ್ನೆಲೆ: ಜಿಲ್ಲೆಯಾದ್ಯಂತ 41 ಕಾಳಜಿ ಕೇಂದ್ರ ಸ್ಥಾಪನೆ, 4,715 ಜನ ಸ್ಥಳಾಂತರ: ಬಿ.ಫೌಜಿಯಾ ತರನ್ನುಮ್

Date:

Share post:

ಕಲಬುರಗಿ: ಮಹಾರಾಷ್ಟ್ರದ ವೀರ್, ಉಜನಿ, ಸಿನಾ ಜಲಾಶಯ ಹಾಗೂ ಬೋರಿ ನದಿಯಿಂದ 3.50 ಲಕ್ಷ ಕ್ಯೂಸೆಕ್ಸ್ ನೀರು ಭೀಮಾ ನದಿಗೆ ಹರಿಬಿಟ್ಟದರಿಂದ ಭೀಮೆಯ ಪ್ರವಾಹ ತುತ್ತಾದ ಗ್ರಾಮಗಳಲ್ಲಿ ಇದೂವರೆಗೆ 41 ಕಾಳಜಿ ತೆರೆದು 4,715 ಸಂತ್ರಸ್ತರನ್ನು ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಪ್ರವಾಹಕ್ಕೆ ಸಿಲುಕುವ ಒಟ್ಟಾರೆ 153 ಸಮಸ್ಯಾತ್ಮಕ ಗ್ರಾಮಗಳ ಪೈಕಿ ಪ್ರಸ್ತುತ ಭೀಮಾ ನದಿ ಪ್ರವಾಹದಿಂದ 68 ಗ್ರಾಮಗಳು ತುತ್ತಾಗಿದ್ದು, ಇದರಲ್ಲಿ ಇದುವರೆಗೆ 41 ಕಾಳಜಿ ಕೇಂದ್ರ ತೆರೆದು ಸಂತ್ರಸ್ತರಿಗೆ ಆಶ್ರಯ ನೀಡಲಾಗಿದೆ. 2,234 ಪುರುಷರು, 1,647 ಮಹಿಳೆಯರು, 894 ಮಕ್ಕಳು ಸೇರಿದಂತೆ 4,715 ಜನ ಕಾಳಜಿ ಕೆಂದ್ರದಲ್ಲಿ ವಾಸವಿದ್ದು, ಅವರಿಗೆ ಊಟೋಪಚಾರ, ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ, ಆರೋಗ್ಯ ಇಲಾಕೆಯಿಂದ ಆರೋಗ್ಯ ತಪಾಸಣೆ ಸಹ ಮಾಡಲಾಗುತ್ತಿದೆ ಎಂದಿದ್ದಾರೆ.

ಸೆಪ್ಟೆಂಬರ್ 27 ಮತ್ತು 28 ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಮತ್ತು ಭೀಮಾ ನದಿ ಮೇಲ್ಮೆ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಮುಂಜಾಗ್ರತವಾಗಿ ಜಿಲ್ಲೆಯಲ್ಲಿ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸಲಾಗಿದೆ. ಇನ್ನು ಮಹಾರಾಷ್ಟ್ರದ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಸೊನ್ನ ಬ್ಯಾರೇಜಿಗೆ ಬರುತ್ತಿವುದರಿಂದ ಒಳ ಹರಿವಿನ ಪ್ರಮಾಣದಷ್ಟೆ ನೀರು ನದಿಗೆ ಹರಿಬಿಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಅಫಜಲಪೂರ ತಾಲೂಕಿನಲ್ಲಿ 17, ಜೇವರ್ಗಿ-24, ಕಲಬುರಗಿ-5, ಚಿತ್ತಾಪುರ-6, ಚಿಂಚೋಳಿ-3, ಸೇಡಂ-2, ಕಾಳಗಿ-8, ಶಹಾಬಾದ ತಾಲೂಕಿನ 3 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. ಪ್ರವಾಹಕ್ಕೆ ತುತ್ತಾದ ಗ್ರಾಮಗಳ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲು ಅಫಜಲಪೂರ ತಾಲೂಕಿನಲ್ಲಿ 3, ಜೇವರ್ಗಿ-24, ಕಲಬುರಗಿ-3, ಚಿತ್ತಾಪುರ-4, ಚಿಂಚೋಳಿ-3, ಸೇಡಂ-2, ಕಾಳಗಿ ಮತ್ತು ಶಹಾಬಾದ ತಾಲೂಕಿನ ತಲಾ 1 ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದಿದ್ದಾರೆ.

ಜಿಲ್ಲೆಯಾದ್ಯಂತ ಪ್ರವಾಹದ ಪರಿಸ್ಥಿತಿ ಸಮರ್ಥವಾಗಿ ಎದುರಿಸಲು ಈಗಾಗಲೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಅಧಿಕಾರಿ-ಸಿಬ್ಬಂದಿಗಳ ಜೊತೆಗೆ ಎಸ್.ಡಿ.ಆರ್.ಎಫ್., ಎನ್.ಡಿ.ಆರ್.ಎಫ್., ಪೊಲೀಸ್, ಅಗ್ನಿಶಾಮಕ ತಂಡಗಳು ಬೀಡು ಬಿಟ್ಟಿದ್ದು, ರಕ್ಷಣಾ ಕಾರ್ಯಚರಣೆಯಲ್ಲಿ ನಿರತವಾಗಿವೆ. ಮಾನವ ಹಾನಿ ಮತ್ತು ಪ್ರಾಣಿ ಹಾನಿ ತಡೆಯಲು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನರು ಆತಂಕ ಪಡಬಾರದು. ಸ್ಥಳೀಯ ಆಡಳಿತಕ್ಕೆ ಸಹಕರಿಸಬೇಕು ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.

ಸೆಲ್ಫಿ, ರೀಲ್ಸ್ ಗೋಜಿಗೆ ಹೋಗಬೇಡಿ:

ಪ್ರವಾಹ ಪರಿಸ್ಥಿತಿಯ ಇಂತಹ ಸಂಕಷ್ಟದ ಸಂದರ್ಭದಲ್ಲಿ ಯುವ ಸಮೂಹ ಸೆಲ್ಫಿ, ರೀಲ್ ಮಾಡುವ ಗೋಜಿಗೆ ಹೋಗಬಾರದು ನದಿಯಲ್ಲಿ ಈಜುವುದಾಗಲಿ, ಸ್ಪರ್ಧೆ ಮಾಡುವಂತಹ ಯಾವುದೇ ದುಸ್ಸಾಹಸಕ್ಕೆ ಕೈಹಾಕಬಾರದು. ನದಿ ದಂಡೆಗೆ ಬಟ್ಟೆ ಒಗೆಯಲು, ಕುರಿ-ಆಕಳು ಮೇಯಿಸಲು, ಮೀನುಗಾರರು ಮೀನು ಹಿಡಿಯಲು ಹೋಗಬಾರದು. ಅಪಾಯವಿರುವ ಸೇತುವೆ ಮೇಲೆ ಸಂಚರಿಸಬಾರದು ಎಂದು ಡಿ.ಸಿ. ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

Share post:

spot_imgspot_img

Popular

More like this
Related

ಕಲಬುರಗಿ: 9,950ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ

ಕಲಬುರಗಿ: ಆಸ್ತಿ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ವಿಲೇವಾರಿ ಮಾಡಲು ಲಂಚ ಪಡೆಯುತ್ತಿದ್ದ...

ಕಲಬುರಗಿ| ಐರಾವತ – ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಢಿಕ್ಕಿ; ಇಬ್ಬರು ಚಾಲಕರ ಮೃತ್ಯು

ಕಲಬುರಗಿ: ಐರಾವತ ಬಸ್ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಢಿಕ್ಕಿ ಸಂಭವಿಸಿ...

ಕಲಬುರಗಿ–ಮೈಸೂರು, ಕಲಬುರಗಿ–ಶಿವಮೊಗ್ಗ ಎಸಿ ಸ್ಲೀಪರ್ ಬಸ್ ಕಾರ್ಯಾಚರಣೆಗೆ ಚಾಲನೆ

ಮೂರು ತಿಂಗಳಲ್ಲಿ‌ 120 ಹೊಸ ಬಸ್ ಸೇರ್ಪಡೆ: ಅರುಣಕುಮಾರ ಪಾಟೀಲ ಕಲಬುರಗಿ: ಕಲ್ಯಾಣ...