ಕಲಬುರಗಿ: ಅನುದಾನಿತ ಶಾಲಾ ಕಾಲೇಜುಗಳ ನೌಕರ ಸಂಘಟನೆಗೆ ಶಕ್ತಿ ನೀಡಿದ ಸ್ಥಳ ಕಲಬುರ್ಗಿಯ ಕನ್ನಡ ಭವನ ಎಂದು ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸ್ಯಾಕ್ ಸೆಮಿನಾರ್ ಹಾಲ್ ನಲ್ಲಿ ನಡೆದ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಬಲವರ್ಧನೆ ಸಭೆಯಲ್ಲಿ ಮಾತನಾಡುತ್ತಿದ್ದರು.
ಅಂದು ನಾನು ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತರ ಸಂಘಟನೆಯ ರಾಜ್ಯಾದ್ಯಕ್ಷನಾದಾಗ ಇಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ ಐತಿಹಾಸಿಕ ಸಭೆ ಜರುಗಿತ್ತು. ಆ ಸಭೆ ಯಶಸ್ವಿಯಾಗಿ ನನ್ನ ಹೆಸರು ಕರ್ನಾಟಕದಾದ್ಯಂತ ಪಸರಿಸಿತು ಎಂದರು.
ಪಿಂಚಣಿ ವಂಚಿತರ ಸಂಘಟನೆಯ ಮುಂದೆ ಕೆಲವು ಸ್ವಾರ್ಥಿಗಳಿಂದಾಗಿ ಹಲವು ಪಂಗಡಗಳಾಗಿ ಒಡೆದು ಹೋಗಿದ್ದು ನಿಜ ಅನುದಾನಿತ ಸಂಘಟನೆಗಳು ಈ ರೀತಿಯಾಗಿ ಭಾಗಗಳಾಗಿ ಹೋದರೆ ನಮ್ಮ ಶಕ್ತಿ ಕುಂದುವುದು ಸತ್ಯ ಹೀಗಾಗಿ ಅನುದಾನಿತ ಶಿಕ್ಷಕರ ಪಿಂಚಣಿ ಮತ್ತು ಇನ್ನಿತರ ಜ್ವಲಂತ ಸಮಸ್ಯೆಗಳು ಪರಿಹಾರವಾಗಬೇಕಾದರೆ ನಾವು ಒಗ್ಗಟ್ಟನ್ನು ಪ್ರದರ್ಶಿಸಬೇಕು ಎಂದು ಹೇಳಿದರು.
ಅನುದಾನಿತ ಶಿಕ್ಷಕರ ಸಮಸ್ಯೆಗಳಿಗಾಗಿ ಅನೇಕ ಹೋರಾಟಗಳು ನಡೆಸಿದ್ದವೆ, ಪಿಂಚಣಿಗಾಗಿ ಬಲಿದಾನವಾಗಿರುವದರಿಂದಲೆ ಇಂದು ಈ ಪಿಂಚಣಿ ವಿಷಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿ ಈ ಸರ್ಕಾರ ರಚನೆಯಾಗಲು ಪರೋಕ್ಷವಾಗಿ ಕಾರಣವಾಯಿತು ಎಂದರು.
ಈಗಾಗಲೇ ನಾವು ಬೆಂಗಳೂರಿನ ಫ್ರೀಡಂ ಪಾರ್ಕ ನಲ್ಲಿ ಐತಿಹಾಸಿಕ ಹೋರಾಟ ಮಾಡಿ ಸರ್ಕಾರದ ಕಣ್ಣು ತೆರೆಸಿದ್ದು ಆಗಿದೆ. ಹೋರಾಟ ಎಂದರೆ ಕೇವಲ ಬೀದಿಗೆ ಇಳಿಯುವುದು, ಬೆಂಗಳೂರಿನ ಫ್ರೀಡಂ ಪಾರ್ಕ್ ಕುಳಿತುಕೊಂಡು ಮಾಡುವುದು ಮಾತ್ರ ಅಂತ ತಿಳಿದಿರುವುದು ತಪ್ಪು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನಿಂದ ವರ್ಚುವಲ್ ಮೀಟಿಂಗ್ ಮುಖಾಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ, ನಾನು ಯಾವಾಗಲೂ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿರುವೆ ಈಗಲೂ ಸಹಾ ಸದಾ ನಿಮ್ಮ ಜೋತೆ ಇರುವೆ ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಭೆಯ ಅಧ್ಯಕ್ಷತೆಯನ್ನು ಸಂಘಟನೆ ಜಿಲ್ಲಾಧ್ಯಕ್ಷ ಸತೀಶ್ ಜಾಮಗೊಂಡ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಖಜಾಂಚಿ ಧನಸಿಂಗ ರಾಠೋಡ, ಮಲ್ಲಿಕಾರ್ಜುನ ಡೊಣ್ಣುರ,ಲಕ್ಷ್ಮೀಪುತ್ರ ಕಿರನಳ್ಳಿ, ಸೂರ್ಯಕಾಂತ ಪಿ ಜಿ, ಭಾನು ಕುಮಾರ್ ಹಾಗೂ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.


